ಅಜ್ಜಿ ಮನೆಗೆ ಹೋಗಲು ಬಿಡದ್ದಕ್ಕೆ ನೊಂದ ಬಾಲಕಿ ಆತ್ಮಹತ್ಯೆ

Posted by JAYAKIRANA Kirana on Wednesday, 9 May 2012 | 0 comments | Leave a comment...

ಪಡುಬಿದ್ರಿ: ಬಾಲಕಿಯೋರ್ವಳು ತಾನು ಅಜ್ಜಿ ಮನೆಗೆ ಹೋಗುತ್ತೇನೆಂದು ಹಠ ಹಿಡಿದರೂ ಮನೆಮಂದಿ ಬಿಡದ ಕಾರಣ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರ್ವ ಠಾಣಾ ವ್ಯಾಪ್ತಿಯ ಕುರ್ಕಾಲು ಸುಭಾಷ್ ನಗರ ಎಂಬಲ್ಲಿ ನಿನ್ನೆ ನಡೆದಿದೆ.
ಕುರ್ಕಾಲು ಸುಭಾಷ್ ನಗರದ ನಿವಾಸಿ ಶಂಕರ ಆಚಾರ್ಯ ಎಂಬವರ ಮೊಮ್ಮಗಳು ಪ್ರತಿಭಾ(೧೪) ಆತ್ಮಹತ್ಯೆ ಮಾಡಿಕೊಂಡ ಬಾಲಕಿ.
ನಿನ್ನೆ ಬೆಳಿಗ್ಗೆಯಿಂದ ಅಜ್ಜಿ ಮನೆಗೆ ಹೋಗುತ್ತೇನೆಂದು ಹಠ ಹಿಡಿದಿದ್ದ ಪ್ರತಿಭಾಳಿಗೆ ಮನೆಯವರು ವಿರೋ ಧಿಸಿದ್ದರು. ಇದೇ ಕಾರಣಕ್ಕೆ ನೊಂದು ಮನೆಯ ಪಕ್ಕಾಸಿಗೆ ಚೂಡಿದಾರದ ಶಾಲಿನಿಂದ ಆತ್ಮಹತ್ಯೆಗೆ ಯತ್ನಿಸಿದ್ದಳು. ಇದನ್ನು ಕಂಡ ತಾಯಿ ಹಗ್ಗವನ್ನು ಕಡಿದು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಬಾಲಕಿ ಮೃತ ಪಟ್ಟಿದ್ದಳು.

ಇನ್ನಾ: ದಾರಿ ಕೇಳಿ ಚಿನ್ನ, ಮೊಬೈಲ್ ದೋಚಿದರು!

Posted by JAYAKIRANA Kirana on | 0 comments | Leave a comment...

ಮಂಗಳೂರು: ಮನೆಯ ಪಕ್ಕದ ರಸ್ತೆ ಬದಿ ಮೋರಿಯ ಮೇಲೆ ಕುಳಿತು ಕೊಂಡು ವಿಶ್ರಮಿಸುತ್ತಿದ್ದ ವ್ಯಕ್ತಿಯೋರ್ವರಲ್ಲಿ ದಾರಿ ಕೇಳುವ ನೆಪದಲ್ಲಿ ಮಾತಿಗಿಳಿದ ಅಪರಿಚಿತ ಬೈಕ್ ಸವಾರರೀರ್ವರು, ವ್ಯಕ್ತಿಯ ಚಿನ್ನದ ಸರ ಮತ್ತು ಮೊಬೈಲ್ ದೋಚಿದ ಘಟನೆ ಪಡುಬಿದ್ರಿ ಹೊರವಲಯದ ಇನ್ನಾ ಗ್ರಾಮದಲ್ಲಿ ನಿನ್ನೆ ಬೆಳಿಗ್ಗೆ ನಡೆದಿದೆ.
ಇನ್ನಾ ಬೈಲುಮನೆಯ ಕೃಷ್ಣಪ್ಪ ಕೋಟ್ಯಾನ್ ಎಂಬವರೇ ದೋಚುವಿಕೆಗೆ ಒಳಗಾಗಿದ್ದು ರಜೆ ಕಳೆಯಲೆಂದು ವಾರದ ಹಿಂದೆ ಮುಂಬೈಯಿಂದ ಊರಿಗೆ ಬಂದಿದ್ದರೆನ್ನಲಾಗಿದೆ. ನಿನ್ನೆ ಬೆಳಿಗ್ಗೆ ಬರಿಮೈಯಲ್ಲಿ ಮನೆ ಪಕ್ಕ ಕುಳಿತಿದ್ದಾಗ ಕಪ್ಪು ಬಣ್ಣದ ಬೈಕಿನಲ್ಲಿ ಬಂದ ಅಪರಿಚಿತ ಯುವಕರೀರ್ವರು ಕಾಪು ಕಡೆ ತೆರಳಲು ದಾರಿ ಕೇಳಿ ಮಾತಿಗಿಳಿದರೆಂದೂ, ಹಿಂಬದಿ ಸವಾರ ಕೃಷ್ಣಪ್ಪರಿಂದ ಮೊಬೈಲ್ ಪಡೆದು ಯಾರಿಗೋ ಕರೆ ಮಾಡುವ ನಟನೆ ಮಾಡುತ್ತಲೇ ಅವರ ಕುತ್ತಿಗೆಯಲ್ಲಿದ್ದ ಸರವನ್ನು ಸೆಳೆದುಕೊಂಡು ಚಾಲೂ ಸ್ಥಿತಿಯಲ್ಲಿದ್ದ ಬೈಕ್ ಏರಿ ಪರಾರಿಯಾದರೆನ್ನಲಾಗಿದೆ. ಹತ್ತು ಗ್ರಾಂ ಚಿನ್ನದ ಸರ ೨೬,೦೦೦ ರೂ. ಬೆಲೆಬಾಳುತ್ತಿದ್ದು, ಸಾವಿರ ರೂಪಾಯಿಯ ಮೊಬೈಲ್ ಕೂಡಾ ಸೆಳೆದೊಯ್ಯಲ್ಪಟ್ಟಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಂಡೆ, ಟಿ.ವಿ. ಕಳವು
ಮನೆ ಯಜಮಾನ ದೂರದೂರಿಗೆ ತೆರಳಿದ್ದಾಗ ಬೀಗ ಹಾಕಲ್ಪಟ್ಟಿದ್ದ ಮನೆ ಹೊಕ್ಕ ಕಳ್ಳರು ಮನೆಯಲ್ಲಿದ್ದ ಎರಡು ಹಳೆಯ ಟಿ.ವಿ. ಮತ್ತು ಬಚ್ಚಲು ಮನೆಯ ಹಂಡೆಯನ್ನು ಕದ್ದೊಯ್ದ ಘಟನೆ ಪಡುಬಿದ್ರಿ ಅಬ್ಬಾಸ್ ಗುಡ್ಡೆಯ ಸಮೀಪದ ಮನೆಯಲ್ಲಿ ಬೆಳಕಿಗೆ ಬಂದಿದೆ.
ಕಳುವಾದ ಸೊತ್ತಿನ ಒಟ್ಟು ಮೌಲ್ಯ ೨೦೦೦೦ ರೂಪಾಯಿಗಳಾಗಿದ್ದು, ಮುಂಬೈಯಿಂದ ಹಿಂದಿರುಗಿದ್ದ ಮನೆ ಯಜಮಾನ ವಾಸು ಶೆಟ್ಟಿ ಎಂಬವರು ಈ ಬಗ್ಗೆ ಪಡುಬಿದ್ರಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪಡುಬಿದ್ರೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಮೈಯಲ್ಲಿ ಗುಳ್ಳೆ: ನೊಂದ ಯುವಕ ಆತ್ಮಹತ್ಯೆ

Posted by JAYAKIRANA Kirana on | 0 comments | Leave a comment...

ಸುಳ್ಯ: ಮೈಯಲ್ಲಿ ಹಚ್ಚೆ ಹಾಕಿ ದ್ದರಿಂದ ಗುಳ್ಳೆ ಬಂದು ಮಾರಕ ರೋಗ ತಗುಲಿದೆ ಎಂಬ ಆತಂಕ ದಿಂದ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಸುಳ್ಯ ನಗರದಲ್ಲಿ ನಡೆದಿದೆ.
ಸುಳ್ಯ ನಗರ ಸಮೀಪದ ನಾವೂರಿನ ಬಾಲಕೃಷ್ಣ ಎಂಬವರ ಪುತ್ರ ಗಿರೀಶ(೨೪) ಮೃತ ಯುವಕ. ಈತ ಮನೆಯ ಕೋಣೆಯ ಅಡ್ಡಕ್ಕೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾನೆ. ಬುಧ ವಾರ ಬೆಳಿಗ್ಗೆ ಈತನು ಕೋಣೆಯ ಬಾಗಿಲು ತೆರೆಯದ ಕಾರಣ ಆತಂಕ ಗೊಂಡು ನೋಡಿದಾಗ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಯಿತು. ಶರೀರ ದಲ್ಲಿ ಗುಳ್ಳೆಗಳು ಬಂದ ಕಾರಣ ಕೆಲವು ದಿನಗಳ ಹಿಂದೆ ಈತ ಆಸ್ಪತ್ರೆ ಯಿಂದ ಔಷಧಿ ಪಡೆದಿದ್ದ. ಆದರೆ ಅದು ಗುಣ ಮುಖವಾಗಿರಲಿಲ್ಲ. ಮೈಯಲ್ಲಿ ಹಚ್ಚ ಹಾಕಿದ ಕಾರಣ ಮೈಯಲ್ಲಿ ಗುಳ್ಳೆ ಉಂಟಾಗಿದೆ. ಇದು ಮಾರಕ ವ್ಯಾಧಿ ಎಂದು ನಂಬಿ ಆತ್ಮಹತ್ಯೆ ಮಾಡಿ ದ್ದಾನೆ.

ಅಂಗಡಿಯಲ್ಲಿ ಅಕ್ರಮ ಮದ್ಯ: ಆರೋಪಿ ವಶಕ್ಕೆ

Posted by JAYAKIRANA Kirana on | 0 comments | Leave a comment...

ವಿಟ್ಲ: ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಶೇಖರಿಸಿದ್ದ ಸ್ಥಳಕ್ಕೆ ದಾಳಿ ನಡೆಸಿದ ವಿಟ್ಲ ಪೊಲೀಸರು ಮಾಲು ಸಮೇತ ಆರೋಪಿಯನ್ನು ವಶಕ್ಕೆ ಪಡೆದುಕೊಂಡ ಘಟನೆ ವಿಟ್ಲ ಕಸಬಾ ಗ್ರಾಮದ ಮಾಮೇಶ್ವರ ಎಂಬಲ್ಲಿಯ ಬುಧವಾರ ರಾತ್ರಿ ನಡೆದಿದೆ.
ವಿಟ್ಲ ಕಸಬಾ ಗ್ರಾಮದ ಮಾಮೇಶ್ವರ ನಿವಾಸಿ ಯೋಗೀಶ(೩೫) ಬಂಧಿತ ಆರೋಪಿ. ಈತ ಬೊಳಂತ್ತೂರು ರಸ್ತೆಯ ಮಾಮೇಶ್ವರ ಎಂಬಲ್ಲಿಯ ತನ್ನ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟಕ್ಕೆಂದು ಇರಿಸಿದ್ದ. ಖಚಿತ ಮಾಹಿತಿ ಮೇರೆಗೆ ವಿಟ್ಲ ಠಾಣಾಧಿಕಾರಿ ರಕ್ಷಿತ್ ಎ.ಕೆ ಹಾಗೂ ಸಿಬ್ಬಂದಿ ಬುಧವಾರ ರಾತ್ರಿ ಒಂಭತ್ತು ಗಂಟೆ ಸುಮಾರಿಗೆ ದಾಳಿ ನಡೆಸಿ ಆತನಿಂದ ೩೦ ಬಾಟಲಿ ಮದ್ಯವನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರ ಒಟ್ಟು ಮೌಲ್ಯ ಎರಡು ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.

ಪಡುಬೆಳ್ಳೆ: ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಕಳವಿಗೆ ಯತ್ನ

Posted by JAYAKIRANA Kirana on | 0 comments | Leave a comment...

ಪಡುಬಿದ್ರಿ: ಪಡುಬೆಳ್ಳೆಯ ಮಧ್ವ ನಗರದಲ್ಲಿರುವ ಸಿಂಡಿಕೇಟ್ ಬ್ಯಾಂಕಿಗೆ ಮಂಗಳವಾರ ರಾತ್ರಿ ಹಿಂಬದಿಯ ಕಿಟಕಿಯ ಗ್ರಿಲ್ ಮುರಿದು ಒಳ ಪ್ರವೇಶಿಸಿದ ಕಳ್ಳರು ಕಳವಿಗೆ ಯತ್ನ ನಡೆಸಿ ವಿಫಲರಾಗಿದ್ದಾರೆ. ಬೆಳಿಗ್ಗೆ ಪೇಪರ್ ಹಾಕಲು ಬಂದ ಹುಡುಗ ಬಂದು ನೋಡಿದಾಗ ಕಳ್ಳತನಕ್ಕೆ ಪ್ರಯತ್ನ ಪಟ್ಟದ್ದು ಗೊತ್ತಾಗಿದೆ. ಬ್ಯಾಂಕಿನಲ್ಲಿ ನಗ ನಾಣ್ಯವು ಸುಸ್ಥಿತಿ ಯಲ್ಲಿದ್ದರಿಂದ ಕಳ್ಳರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹೋಗಿದ್ದಾರೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ, ತಹಶಿಲ್ದಾರ್ ಭೇಟಿ ನೀಡಿದ್ದು, ಬ್ಯಾಂಕಿನ ಮೆನೇಜರ್ ವ್ಯಾಸ ಮೋಹನ್ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಗೆ ಕಳ್ಳರ ಲಗ್ಗೆ

Posted by JAYAKIRANA Kirana on | 0 comments | Leave a comment...

ಪಡುಬಿದ್ರಿ: ಮನೆಗೆ ನುಗ್ಗಿ ಗೃಹೋಪಯೋಗಿ ವಸ್ತುಗಳನ್ನು ಕಳವುಗೈದ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ. ಇಲ್ಲಿನ ಸುಜ್ಲಾನ್ ರಸ್ತೆಯ ಬಳಿಯ ನಾಗರಾಜ ಎಸ್ಟೇಟ್ ಬಳಿಯ ಅಮಿತ ರಮೇಶ್ ಶೆಟ್ಟಿ ಎಂಬವರ ಮನೆಯಲ್ಲಿದ್ದ ಟಿ.ವಿ, ತಾಮ್ರದ ಹಂಡೆ, ತಾಮ್ರದ ಕಾಲು ದೀಪ, ಸಮೀಪದಲ್ಲೇ ಇರುವ ಬಾಡಿಗೆ ಮನೆಯ ಟಿ.ವಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಮನೆಯವರು ಮುಂಬೈಯಲ್ಲಿದ್ದು, ಮೂರು ದಿನಗಳ ಕಾಲ ರಜೆಯಲ್ಲಿದ್ದ ಕೆಲಸ ಮಾಡುವ ಹುಡುಗ ಬುಧವಾರ ಬೆಳಿಗ್ಗೆ ಬಂದು ನೋಡಿದಾಗ ಕಳವಾದ ಬಗ್ಗೆ ಗಮನಕ್ಕೆ ಬಂತು. ಪಡುಬಿದ್ರಿ ಠಾಣಾಧಿಕಾರಿ ಮಹಾದೇವ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

ಲಾರಿ ಡಿಕ್ಕಿ: ಕಾರ್ ಜಖಂ

Posted by JAYAKIRANA Kirana on | 0 comments | Leave a comment...

ಉಡುಪಿ: ಬ್ರಹ್ಮಾವರ ಸಮೀಪದ ಮಾಬುಕಳ ಸೇತುವೆ ಬಳಿ ಒಮ್ಮಿಂದೊಮ್ಮೆಲೆ ಲಾರಿ ಹಿಂದಕ್ಕೆ ಚಲಿಸಿ ಕಾರಿಗೆ ಡಿಕ್ಕಿ ಹೊಡೆದ ಕಾರಣ ಕಾರು ಜಖಂಗೊಂಡ ಘಟನೆ ಬುಧವಾರ ಮಧ್ಯಾಹ್ನ ೧೨ ಗಂಟೆಗೆ ನಡೆದಿದೆ. ಈ ಬಗ್ಗೆ ಕಾರು ಚಾಲಕ, ಉಡುಪಿ ಗೀತಾ ಮಂದಿರ ಬಳಿಯ ನಿವಾಸಿ ಪದ್ಮನಾಭ ಎಸ್.ಶೇರೆಗಾರ್ ನೀಡಿದ ದೂರಿನ ಪ್ರಕಾರ ಲಾರಿ ಚಾಲಕನ ವಿರುದ್ದ ಬ್ರಹ್ಮಾವರ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿ ದ್ದಾರೆ.

ಒಮ್ನಿ ಡಿಕ್ಕಿ: ಬೈಕ್ ಸವಾರರಿಗೆ ಗಾಯ

Posted by JAYAKIRANA Kirana on | 0 comments | Leave a comment...

ಉಡುಪಿ: ಒಮ್ನಿ ಕಾರ್ ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಗಾಯ ಗೊಂಡ ಘಟನೆ ಮಂಗಳವಾರ ರಾ.ಹೆ. ೬೬ರ ಅಂಬಲಪಾಡಿ ಪೆಟ್ರೋಲ್ ಬಂಕ್ ಬಳಿ ಸಂಭವಿಸಿದೆ. ಶಾರದಾ ಹೊಟೇಲ್ ಬಳಿಯ ನಿವಾಸಿ ಗಳಾದ ಕಾರ್ತಿಕ್ ಹಾಗೂ ಸೂರಜ್ ಉಪಾಧ್ಯಾಯ ಗಾಯಗೊಂಡವರು. ಇವರು ಉದ್ಯಾವರ ಕಡೆಗೆ ಸಂಚರಿಸುತ್ತಿದ್ದಾಗ ಎದುರಿನಿಂದ ಲಾರಿಯನ್ನು ಓವರ್‌ಟೇಕ್ ಮಾಡಿಕೊಂಡು ಬಂದ ಮಾರುತಿ ಒಮ್ನಿ ಬೈಕ್‌ಗೆ ಡಿಕ್ಕಿ ಹೊಡೆಯಿತೆನ್ನಲಾಗಿದೆ.

ಬಾವಿಗೆ ಬಿದ್ದು ಬಾಲಕ ಮೃತ್ಯು

Posted by JAYAKIRANA Kirana on | 0 comments | Leave a comment...

ಮಂಗಳೂರು : ಬಾವಿಗೆ ಬಿದ್ದ ಚೆಂಡನ್ನು ತೆಗೆಯಲೆಂದು ಬಾವಿಗೆ ಇಳಿದಿದ್ದ ಬಾಲಕ ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಿನ್ನೆ ಮಧ್ಯಾಹ್ನ ಬೈಕಂಪಾಡಿಯಲ್ಲಿ ನಡೆದಿದೆ.
ಮೂಲತಃ ಬಾದಮಿ ನಿವಾಸಿ ಹನುಮಂತಪ್ಪ ಎಂಬವರ ಪುತ್ರ ಸತೀಶ (೧೩)ಎಂಬಾತ ಬೈಕಂಪಾಡಿ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಕರ್ನಾಟಕ ಫ್ಲೈವುಡ್ಸ್ ಕಂಪನಿಯ ಆವರಣದಲ್ಲಿ ಇತರರ ಮಕ್ಕಳ ಜೊತೆ ಚೆಂಡಾಟ ಆಡುತ್ತಿದ್ದ. ಈ ವೇಳೆ ಚೆಂಡು ಬಾವಿಗೆ ಬಿದ್ದಿತ್ತು. ಇದನ್ನು ತೆಗೆಯಲೆಂದು ಸತೀಶ ಬಾವಿಗೆ ಇಳಿಯಲು ಯತ್ನಿಸಿದವ ಕಾಲು ಜಾರಿ ನೀರಿಗೆ ಬಿದ್ದು ಮೃತ ಪಟ್ಟಿದ್ದಾನೆ. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಫ್ಯಾಕ್ಟರಿ ಕಾರ್ಮಿಕ ಸಾವು

Posted by JAYAKIRANA Kirana on | 0 comments | Leave a comment...

ಮಂಗಳೂರು: ಫ್ಲೈವುಡ್ ಫ್ಯಾಕ್ಟರಿ ಯಲ್ಲಿ ಕೆಲಸದಲ್ಲಿದ್ದ ಒರಿಸ್ಸಾ ಮೂಲದ ಕಾರ್ಮಿಕನೋರ್ವ ಬುಧವಾರ ಬೆಳಗ್ಗೆ ಕರ್ತವ್ಯದಲ್ಲಿದ್ದ ಸ್ಥಳದಲ್ಲೇ ಮೃತಪಟ್ಟ ಘಟನೆ ನರಿಂಗಾನದಲ್ಲಿ ನಡೆದಿದೆ.
ಮೃತನನ್ನು ಸುನಾಹತ್ (೨೯) ಎಂದು ಗುರುತಿಸಲಾಗಿದೆ. ಈತ ಕಳೆದ ಮೂರು ವರ್ಷಗಳಿಂದ ನರಿಂಗಾನ ಗ್ರಾಮದ ಮೊಂಟೆಪದವು ಎಂಬಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರ. ಇದೇ ಫ್ಯಾಕ್ಟರಿಯಲ್ಲಿ ಒರಿಸ್ಸಾ ಮೂಲದ ೨೦ ಕಾರ್ಮಿಕರಿದ್ದು ಮೃತನ ಸಹೋ ದರನೂ ಇದ್ದಾರೆ.
ಮಂಗಳವಾರ ಇವರನ್ನು ಪಹರೇ ದಾರನ ಕೆಲಸಕ್ಕೆ ನೇಮಿಸಲಾಗಿದ್ದು, ರಾತ್ರಿ ಎಂಟು ಗಂಟೆಯಿಂದ ಬೆಳಗ್ಗೆ ಆರು ಗಂಟೆಯವರೆಗೆ ಕೆಲಸ ನಿರ್ವ ಹಿಸಬೇಕಾಗಿತ್ತು. ಅದರಂತೆ ಕರ್ತವ್ಯ ದಲ್ಲಿದ್ದ ಆತ ಬುಧವಾರ ಬೆಳಗ್ಗೆ ಕುಳಿತ ಕುರ್ಚಿಯಲ್ಲೇ ಮೃತಪಟ್ಟಿದ್ದು ಕಂಡು ಬಂದಿದೆ. ಮೆದುಳು ಸಂಬಂಧಿ ರೋಗ ದಿಂದ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಫ್ಯಾಕ್ಟರಿ ವ್ಯವಸ್ಥಾಪಕರು ನೀಡಿದ ದೂರಿನಂತೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಾಪತ್ತೆಯಾದಾಕೆ ಪ್ರೇಮಿಯ ಜೊತೆ ಪತ್ತೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕಳೆದ ಎ.೧೦ರಂದು ಮನೆಯಿಂದ ಉದ್ಯೋಗ ಶಿಬಿರದಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದೇನೆ ಎಂದು ತೆರಳಿ ಬಳಿಕ ನಾಪತ್ತೆಯಾಗಿದ್ದ ಉಳ್ಳಾಲ ನಿವಾಸಿ ಜೆನೆಟಾ ಮೊಂತೇರೋ(೨೧) ತನ್ನ ಪ್ರೇಮಿಯ ಜೊತೆ ಸವದತ್ತಿಯಲ್ಲಿ ಪತ್ತೆಯಾಗಿದ್ದಾರೆ. ಅತ್ತಾವರದಲ್ಲಿ ನಡೆಯುವ ಏಳು ದಿನಗಳ ಉದ್ಯೋಗ ಶಿಬಿರಕ್ಕೆಂದು ತೆರಳಿದ್ದ ಜೆನೆಟಾ ಮನೆಮಂ ದಿಯ ಜೊತೆ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದರು. ಎ.೧೭ರಂದು ಮನೆಗೆ ಬರುತ್ತೇನೆ ಎಂದಿದ್ದ ಆಕೆ ೨೧ ತಾರೀಖಿನವರೆಗೂ ವಾಪಸ್ ಬಾರದಿದ್ದ ಹಿನ್ನೆಲೆಯಲ್ಲಿ ಉಳ್ಳಾಲ ಠಾಣಾ ಪೊಲೀ ಸರಿಗೆ ದೂರಲಾಗಿತ್ತು. ಪೊಲೀಸರು ಆಕೆಯನ್ನು ಸವದತ್ತಿಯ ಲಾಡ್ಜ್‌ವೊಂ ದರಲ್ಲಿ ಪ್ರೇಮಿ ರಾಘು ಎಂಬಾತನ ಜೊತೆ ಪತ್ತೆಹಚ್ಚಿದ್ದು, ಹೆತ್ತವರ ವಶಕ್ಕೆ ಒಪ್ಪಿಸಿದ್ದಾರೆ.

ಚಿನ್ನದ ವ್ಯಾಪಾರಿಯ ದರೋಡೆ ಯತ್ನ: ಓರ್ವನಿಗೆ ಗಂಭೀರ ಹಲ್ಲೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ನಗರದ ಜ್ಯುವೆಲ್ಲರಿಗಳ ಜೊತೆ ಚಿನ್ನಾಭರಣ ವ್ಯವಹಾರ ನಡೆಸುವ ವ್ಯಕ್ತಿಯೊಬ್ಬರ ಬಳಿಯಿದ್ದ ಸೂಟ್‌ಕೇಸ್ ಅನ್ನು ನಾಲ್ವರಿದ್ದ ತಂಡ ದರೋಡೆ ನಡೆಸಲು ಯತ್ನಿಸಿದ ಘಟನೆ ನಿನ್ನೆ ಮಂಗಳೂರಿನ ರೈಲು ನಿಲ್ದಾಣದಲ್ಲಿ ರಾತ್ರಿ ಹತ್ತೂವರೆಯ ಸುಮಾರಿಗೆ ನಡೆದಿದೆ. ಈ ವೇಳೆ ನಿಲ್ದಾಣದಲ್ಲಿದ್ದ ಸಾರ್ವಜನಿಕರು ಓರ್ವನನ್ನು ಸಿನಿಮೀಯ ಮಾದರಿಯಲ್ಲಿ ಸೆರೆಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮ ಆತ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೇರಳದ ಪೊನ್ನಚ್ಚಿ ನಿವಾಸಿ ಕೃಷ್ಣಕುಮಾರ್ ಎಂಬವರು ರಾತ್ರಿ ೧೦:೩೦ರ ಸುಮಾರಿಗೆ ಕೇರಳಕ್ಕೆ ತೆರಳಲು ಕೊಯಂಬತ್ತೂರು-ಚೆನ್ನೈ ರೈಲಿಗಾಗಿ ಪ್ಲಾಟ್‌ಫಾರಂನಲ್ಲಿ ಕಾದಿದ್ದರು. ಈ ವೇಳೆ ಬಾಯಾರಿಕೆ ಯಾಯಿತೆಂದು ನೀರು ಕುಡಿಯಲು ಹೋಗುವಾಗ ತಮ್ಮ ಬಳಿಯಿದ್ದ ಸೂಟ್‌ಕೇಸ್ ಅನ್ನು ನಿಲ್ದಾಣದಲ್ಲಿ ಇರಿಸಿದ್ದರು. ಸೂಟ್‌ಕೇಸ್‌ನಲ್ಲಿ ಐದು ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿತ್ತು.      ಇದಕ್ಕೇ ಕಾದು ಕುಳಿತುಕೊಂಡಿದ್ದ ನಾಲ್ವರು ದರೋಡೆಕೋರರ ತಂಡ ಸೂಟ್‌ಕೇಸ್ ಅನ್ನು ಹಿಡಿದು ಓಟಕ್ಕಿತ್ತರೆನ್ನಲಾಗಿದೆ. ಇದನ್ನು ಗಮನಿಸಿದ ನಿಲ್ದಾಣದಲ್ಲಿದ್ದ ಇತರೇ ಪ್ರಯಾಣಿಕರು ಓಡಿಹೋಗುತ್ತಿದ್ದ ನಾಲ್ವರಲ್ಲಿ ಒಬ್ಬನನ್ನು ಹಿಡಿದು ಸೂಟ್‌ಕೇಸ್ ಕಿತ್ತುಕೊಂಡಿದ್ದಾರೆ ಮಾತ್ರವಲ್ಲದೆ ಸಿಕ್ಕಿಬಿದ್ದವನಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದರ ಪರಿಣಾಮ ಆತ ಗಂಭೀರ ಗಾಯಗೊಂಡಿದ್ದು, ರೈಲ್ವೇ ಪೊಲೀಸರು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ವಿಳಾಸ ಪತ್ತೆಯಾಗಿಲ್ಲ. ಕೃಷ್ಣಕುಮಾರ್ ಅವರು ಯಾವುದೇ ದೂರು ನೀಡದೆ ಕೇರಳಕ್ಕೆ ಪ್ರಯಾಣ ಬೆಳೆಸಿದ್ದಾರೆ. ಕಳೆದ ೨೦೦೮ರಲ್ಲಿ ಕೃಷ್ಣಕುಮಾರ್ ಅವರ ಬಳಿಯಿದ್ದ ೨೮ ಲಕ್ಷ ರೂ. ಮೌಲ್ಯದ ಚಿನ್ನಾಭರಣ ತುಂ ಬಿದ್ದ ಸೂಟ್‌ಕೇಸ್ ಅನ್ನು ಮಂಗಳೂರು ರೈಲು ನಿಲ್ದಾಣದಲ್ಲಿ ದರೋಡೆಗೈಯ ಲಾಗಿತ್ತು ಎಂದು ತಿಳಿದುಬಂದಿದೆ.

ಮುಂಜಾನೆ ಮದ್ಯ ಮಾರಾಟ: ಬಾರ್ ಕ್ಯಾಶಿಯರ್ ಬಂಧನ

Posted by JAYAKIRANA Kirana on | 0 comments | Leave a comment...

ಮಂಗಳೂರು: ನಗರದಲ್ಲಿ ಬೆಳಕು ಹರಿಯುವ ಮುನ್ನವೇ ಗಿರಾಕಿಗಳಿಗೆ ಮದ್ಯ ಪೂರೈಕೆ ಮಾಡುವ ಬಾರ್, ವೈನ್‌ಶಾಪ್‌ಗಳ ಮೇಲೆ ಪೊಲೀಸ್ ಇಲಾಖೆ ಕಣ್ಣಿಟ್ಟಿದ್ದು, ನಿನ್ನೆ ಬಂದರಿನ ಗೂಡ್ಸ್‌ಶೆಡ್ ರಸ್ತೆಯ ಬಾರ್‌ವೊಂದಕ್ಕೆ ಹಠಾತ್ ದಾಳಿ ನಡೆಸಿದ ಪಾಂಡೇಶ್ವರ ಠಾಣಾ ಪೊಲೀಸರು ಬಾರ್ ಕ್ಯಾಶಿಯರ್‌ನನ್ನು ಬಂಧಿಸಿದ್ದಾರೆ.
ಗೂಡ್ಸ್‌ಶೆಡ್ ರಸ್ತೆಯಲ್ಲಿ ಮುಂಜಾನೆಯ ಏಳು ಗಂಟೆಗೇ ಬಾರ್ ತೆರೆದು ಗಿರಾಕಿಗಳಿಗೆ ಮದ್ಯ ಸರಬರಾಜು ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಕ್ಯಾಶಿಯರ್ ಮೇಲೆ ಕಾನೂನು ಕ್ರಮ ಜರುಗಿಸಿದ್ದಾರೆ. ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಅವಧಿಯನ್ನು ಮೀರಿ ಬಾರ್, ವೈನ್‌ಶಾಪ್ ತೆರೆದಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದಿತ್ತು.

ಪ್ಲಾಸ್ಟಿಕ್ ಮಾರಾಟಗಾರರಿಗೆ ದಂಡ

Posted by JAYAKIRANA Kirana on | 0 comments | Leave a comment...

ಮಂಗಳೂರು: ಪರವಾನಿಗೆ ಹೊಂದಿರದ ಹಾಗೂ ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡಿದ ನಗರದ ವಿವಿಧ ಅಂಗಡಿ, ಮಾರಾಟ ಕೇಂದ್ರಗಳ ಮೇಲೆ ಬುಧವಾರ ಬೆಳಗ್ಗೆ ಮನಪಾ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಐದು ಅಂಗಡಿಗಳಿಗೆ ಬೀಗ ಜಡಿದಿದೆ. ನಗರದ ಬಂದರ್, ಬೀಬಿ ಅಲಾಬಿ ರಸ್ತೆ, ಜೆ.ಎಂ.ರಸ್ತೆ, ನೆಲ್ಲಿಕಾಯಿ ರಸ್ತೆಯ ವಿವಿಧ ಅಂಗಡಿಗಳಿಗೆ ತಂಡ ಕಾರ್ಯಾಚರಣೆ ನಡೆಸಿದೆ. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡಿದವರಿಗೆ ದಂಡ ವಿಧಿಸಲಾಯಿತು. ಅಂಗಡಿಗಳಿಂದ ಸುಮಾರು ೫೦೦ ಕೆ.ಜಿ.ಯಷ್ಟು ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ. ಆರೋಗ್ಯ ಅಧಿಕಾರಿ ರಘುನಾಥ್, ಇನ್ಸ್‌ಪೆಕ್ಟರ್ ಸುಶಾಂತ್, ಸಂತೋಷ್, ಯಶವಂತ್, ಭರತ್, ಬಸವರಾಜ್ ಮುಂತಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

ಮಲಗಿದ್ದಲ್ಲೇ ಸಾವು

Posted by JAYAKIRANA Kirana on | 0 comments | Leave a comment...

ಮಂಗಳೂರು: ಯುವಕ ಮಲಗಿದ್ದಲ್ಲೇ ಸಾವಿಗೀಡಾದ ಘಟನೆ ಅತ್ತಾವರ-ಕಾಪ್ರಿಗುಡ್ಡೆಯಲ್ಲಿ ನಿನ್ನೆ ಸಂಭವಿಸಿದೆ. ಪ.ಬಂಗಾಲದ ನಿವಾಸಿ, ಕಟ್ಟಡ ಕಾರ್ಮಿಕ ದುರುಪ್ ಮಾರ್ಮರ್(೨೨) ಮೃತಪಟ್ಟ ಯುವಕ. ವಿಪರೀತ ಮದ್ಯವ್ಯಸನಿಯಾಗಿದ್ದ ಈತ ರಾತ್ರಿ ಮದ್ಯ ಸೇವಿಸಿ ಮಲಗಿದ್ದ ವೇಳೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರತ್ನಗಿರಿಯಲ್ಲಿ ಮತ್ತೆ ಮಲ್ಪೆಯ ಮೀನುಗಾರರ ಮೇಲೆ ಹಲ್ಲೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮಹಾರಾಷ್ಟ್ರದ ರತ್ನಗಿರಿಯಲ್ಲಿ ಮತ್ತೆ ಮಲ್ಪೆಯ ಮೀನುಗಾರರ ಮೇಲೆ ಹಲ್ಲೆ ನಡೆದಿದೆ. ಐದಾರು ಬೋಟ್‌ಗಳನ್ನು ತಡೆದು ಮೀನುಗಾರರ ಮೇಲೆ ಹಲ್ಲೆ ನಡೆಸಿ ಅವರ ಬಳಿಯಿದ್ದ ಮೊಬೈಲ್ ಫೋನ್, ಫಿಶ್ ಫೈಂಡರ್ ಹಾಗೂ ಬೆಲೆಬಾಳುವ ಉತ್ತಮ ಜಾತಿಯ ಮೀನುಗಳನ್ನು ದೋಚಿದ್ದಾರೆ. ಇಷ್ಟೇ ಅಲ್ಲದೆ ಗಡಿ ದಾಟಿದ ಆರೋಪದ ಮೇಲೆ ಮಂಗಳೂರು ಮತ್ತು ಮಲ್ಪೆ ಬಂದರಿನ ಎರಡು ಬೋಟ್‌ಗಳನ್ನು ಕರಾವಳಿ ಪೊಲೀಸರು ವಶಕ್ಕೆ ಪಡೆದು ಮೀನುಗಾರರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಹಿಂದೆಯೂ ಇಂಥದ್ದೇ ಘಟನೆಗಳು ಬಾರಿ-ಬಾರಿ ಜರುಗುತ್ತಿದ್ದರೂ ಸರಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮೀನುಗಾರರ ಸಂಘಟನೆಗಳು ದೂರಿವೆ.

ಫೋನ್ ಕರೆ: ಪ್ರಿಂಟಿಂಗ್ ಪ್ರೆಸ್ ಮಾಲಕನಿಗೆ ಹಲ್ಲೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಪ್ರಿಂಟಿಂಗ್ ಪ್ರೆಸ್‌ಗೆ ನುಗ್ಗಿದ ವ್ಯಕ್ತಿಯೋರ್ವ ಮಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬಳಿಕ ಕತ್ತಿಯಿಂದ ಹಲ್ಲೆಗೈದ ಘಟನೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಬಿ.ಸಿ. ರೋಡ್ ಪೇಟೆಯಲ್ಲಿ ನಿನ್ನೆ ನಡೆದಿದೆ. ಇಲ್ಲಿನ ಭಾರತ್ ಕಾಂಪ್ಲೆಕ್ಸ್‌ನಲ್ಲಿನ ತರುಣ್ ಪ್ರಿಂಟರ‍್ಸ್‌ನ ಮಾಲಕ ವಿದ್ಯಾಧರ್ ಪಕ್ಕಳ ಎಂಬವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿದ್ದಕಟ್ಟೆ ಸಮೀಪದ ಕರ್ಪೆ ನಿವಾಸಿ ಯಶೋಧರ ಯಾನೆ ಕುಟ್ಟಿ ಹಲ್ಲೆ ನಡೆಸಿದ ಆರೋಪಿ. ಬೆಳಗ್ಗೆ ೧೧ ಗಂಟೆಗೆ ಪ್ರಿಂಟರ‍್ಸ್‌ಗೆ ನುಗ್ಗಿದ ಆರೋಪಿ ವಿದ್ಯಾಧರ್ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಹಿಂದೆ ಇದೇ ಪ್ರಿಂಟರ‍್ಸ್‌ನಲ್ಲಿ ಕೆಲಸಕ್ಕಿದ್ದ ಯುವತಿ ಯೋರ್ವಳಿಗೆ ವಿದ್ಯಾಧರ್ ಪದೇ ಪದೇ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದು, ಇದೇ ಕಾರಣಕ್ಕೆ ಹಲ್ಲೆ ನಡೆದಿರಬೇ ಕೆಂದು ಹೇಳಲಾಗಿದೆ. ಘಟನೆಗೆ ಸಂಬಂಧಿಸಿ ಯಶೋಧರ ಪ್ರತಿದೂರು ನೀಡಿದ್ದು, ತನಗೆ ವಿದ್ಯಾಧರ್ ಸರಳಿನಿಂದ ಹಲ್ಲೆ ನಡೆಸಿದ್ದಾಗಿ ಆರೋಪಿಸಿ ಬಂಟ್ವಾಳದ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಜಯದೊಂದಿಗೆ ಆರ್‌ಸಿಬಿ ನಾಲ್ಕನೇ ಸ್ಥಾನಕ್ಕೆ

Posted by JAYAKIRANA Kirana on | 0 comments | Leave a comment...

ಕ್ರಿಸ್ ಗೇಲ್ ಅಬ್ಬರಕ್ಕೆ ಬಳಲಿ ಬೆಂಡಾದ ಮುಂಬೈ
ಮುಂಬಯಿ: ಗೆಲವು ದಾಖಲಿಸುವ ಅನಿವಾರ್ಯತೆಗೆ ಸಿಲುಕಿದ್ದ ರಾಯಲ್ ಚಾಲೆಂಜ್ ಆ ಸವಾಲನ್ನು ಮೆಟ್ಟಿನಿಂತಿದೆ. ಮುಂಬಯಿ ವಿರುದ್ಧದ ಕಠಿಣ ಪಂದ್ಯದಲ್ಲಿ ಆರ್‌ಸಿಬಿ ಆಟಗಾರರು ನೀಡಿದ ಸಾಂಘಿಕ ಪ್ರದರ್ಶನವು ಅದಕ್ಕೆ ಒಂಬತ್ತು ವಿಕೆಟ್ ಭರ್ಜರಿ ಗೆಲುವು ತಂದುಕೊಟ್ಟಿದೆ. ಸ್ಫೋಟಕ ಅರ್ಧಶತಕ ಸಿಡಿಸಿದ ಕ್ರಿಸ್ ಗೇಲ್ ಅಂತಿಮವಾಗಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಪಂದ್ಯದಲ್ಲಿ ಟಾಸ್ ಪ್ರಧಾನಪಾತ್ರ ವಹಿಸಿತು. ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈಗೆ ಆರ್‌ಸಿಬಿ ಬೌಲರ್‌ಗಳು ಆಘಾತ ನೀಡಿದರು. ಆರಂಭದಿಂದಲೇ ವಿಕೆಟ್ ಪಡೆಯುವಲ್ಲಿ ಆರ್‌ಸಿಬಿ ಬೌಲರ್‌ಗಳು ಶಕ್ತವಾಗಿದ್ದು, ಹಾಗಾಗಿ ರನ್ ಗಳಿಸಲು ಮುಂಬೈ ಪರದಾಡಿತು. ಅಂತಿಮವಾಗಿ ಮುಂಬೈ ನಿಗದಿತ ೨೦ ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ ೧೪೧ ರನ್ ಗಳಿಸಿತು. ಗುರಿ ಬೆನ್ನತ್ತಿದ್ದ ಆರ್‌ಸಿಬಿ ಯಾವ ಹಂತದಲ್ಲೂ ಒತ್ತಡಕ್ಕೆ ಸಿಲುಕಲಿಲ್ಲ. ಅದರಲ್ಲೂ ಗೇಲ್ ಅಬ್ಬರಕ್ಕೆ ಮುಂಬೈ ತೀವ್ರರೀತಿಯಲ್ಲಿ ಘಾಸಿಗೊಂಡಿತು. ಆರ್‌ಸಿಬಿ ೧೮ ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದು ೧೪೨ ರನ್ ಗಳಿಸಿ ಜಯಗಳಿಸಿತು. ಗೇಲ್ ಕೇವಲ ೫೬ ಎಸೆತಗಳಲ್ಲಿ ಆರು ಸಿಕ್ಸ್ ಹಾಗೂ ಐದು ಬೌಂಡರಿ ನೆರವಿನಿಂದ ಅಜೇಯ ೮೨ ರನ್ ಗಳಿಸಿ ತಂಡಕ್ಕೆ ಆಧಾರಸ್ತಂಭವಾಗಿದ್ದರು. ವಿರಾಟ್ ಕೊಹ್ಲಿ ಕೂಡ ೨೫ ಎಸೆತಗಳಲ್ಲಿ ಎರಡು ಸಿಕ್ಸ್ ಹಾಗೂ ಒಂದು ಬೌಂಡರಿ ನೆರವಿನಿಂದ ಅಜೇಯ ೩೬ ರನ್ ಗಳಿಸಿದರು. ಇದಕ್ಕೂ ಮುನ್ನ ಆರ್‌ಸಿಬಿಗೆ ತಿಲಕರತ್ನೆ ದಿಲ್ಶಾನ್ (೧೯) ಹಾಗೂ ಗೇಲ್ ಜೋಡಿ ಮೊದಲ ವಿಕೆಟ್‌ಗೆ ೪೮ ರನ್‌ಗಳ ಜೊತೆಯಾಟ ನಡೆಸಿ ಉತ್ತಮ ಆರಂಭ ನೀಡಿದ್ದರು. ಆರಂಭದಲ್ಲಿ ತಂಡ ಎಚ್ಚರಕೆ ಆಟಕ್ಕೆ ಮೊರೆಹೋದರೆ ನಂತರ ಗೇಲ್ ರುದ್ರರೂಪ ತಾಳಿದರು. ಪರಿಣಾಮ ತಂಡ ಇನ್ನೂ ೧೨ ಎಸೆತ ಬಾಕಿ ಉಳಿದಿರುವಂತೆ ಗೆಲುವು ಕಂಡಿತು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ್ದ ಮುಂಬೈ ಆರಂಭದಲ್ಲೇ ಕಂಡಿತು. ಅದರಲ್ಲೂ ಜಹೀರ್ ಹಾಗೂ ವಿನಯ್ ದಾಳಿಗೆ ಉತ್ತರ ಕೊಡಲು ತಂಡ ವಿಫಲವಾಯಿತು. ವಿನಯ್ ಸ್ಫೋಟಕ ಫ್ರಾಂಕ್ಲಿನ್ (೧) ಹಾಗೂ ರೋಹಿತ್ (೦) ವಿಕೆಟ್ ಪಡೆದಾಗ ಆರ್‌ಸಿಬಿಗೆ ಮುನ್ನಡೆ. ಸಚಿನ್ ವೇಗವಾಗಿ ಆಡಿದರೂ ೨೪ ರನ್‌ಗೆ ಸೀಮಿತಗೊಂಡಿತು. ಆದರೆ ದಿನೇಶ್ ಕಾರ್ತಿಕ್ (೪೪) ಸ್ವಲ್ಪಹೊತ್ತು ಕ್ರೀಸ್‌ನಲ್ಲಿದ್ದು, ರನ್‌ಗತಿ ಏರಿಸಿದರು. ಅಂತಿಮ ಹಂತದಲ್ಲಿ ಪೊಲಾರ್ಡ್ (೨೧) ಹಾಗೂ ಹರ್ಭಜನ್ (೨೦) ಜೋಡಿ ಕೇವಲ ೪.೧ ಓವರ್‌ಗಳಲ್ಲಿ ಅಜೇಯ ೪೧ ರನ್‌ಗಳ ಜೊತೆಯಾಟ ನಡೆಸಿದ್ದು, ತಂಡ ೧೪೦ ಮೊತ್ತ ಪೇರಿಸುವಂತಾಯಿತು. ಆರ್‌ಸಿಬಿ ಪರ ಮುರಳೀಧರನ್ ಹಾಗೂ ಪಟೇಲ್ ತಲಾ ಎರಡು ವಿಕೆಟ್ ಪಡೆದರು.

ಮ್ಯಾಡ್ರಿಡ್ ಓಪನ್: ತೃತೀಯ ಸುತ್ತಿಗೆ ಲಗ್ಗೆಯಿಟ್ಟ ಶರಪೋವಾ ಹಾಗೂ ಅಜ್ರೆಂಕಾ

Posted by JAYAKIRANA Kirana on | 0 comments | Leave a comment...

ಮ್ಯಾಡ್ರಿಡ್: ಇಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಮ್ಯಾಡ್ರಿಡ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ರಶ್ಯಾದ ಮರಿಯಾ ಶರಪೋವಾ ಹಾಗೂ ಬೆಲರೂಸ್‌ನ ವಿಕ್ಟೋರಿಯಾ ಅಜ್ರೆಂಕಾ ಕ್ರಮವಾವಾಗಿ ತಮ್ಮ ಪಂದ್ಯಗಳನ್ನು ಗೆಲ್ಲುವ ಮೂಲಕ ಮೂರನೇ ಸುತ್ತಿಗೆ ಪ್ರವೇಶ ಪಡೆಯುವಲ್ಲಿ ಸಫಲರಾಗಿದ್ದಾರೆ.
ವಿಶ್ವದ ನಂಬರ್ ವನ್ ಆಟಗಾರ್ತಿಯಾಗಿರುವ ಅಜ್ರೆಂಕಾ ತನ್ನ ಜೆಕ್ ಗಣರಾಜ್ಯದ ಎದುರಾಳಿ ಆಂಡ್ರೆ ಹ್ಲಾವಕೋವಾ ವಿರುದ್ಧ ೬-೩ ಹಾಗೂ ೭-೬ರ ನೇರ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಮುನ್ನಡೆದರೆ ಕ್ಲಾರಾ ಜೊಕೊಪೊಲೊವಾ ವಿರುದ್ಧ ೬-೪ ಹಾಗೂ ೬-೩ರ ಭರ್ಜರಿ ಅಂತರದಲ್ಲಿ ಗೆಲುವು ಸಾಧಿಸಿದ ಶರಪೋವಾ ಕೂಡ ಮೂರನೇ ಸುತ್ತಿಗೆ ಪ್ರವೇಶ ಪಡೆದರು. ಅಜ್ರೆಂಕಾ ಮುಂದಿನ ಸುತ್ತಿನಲ್ಲಿ ಆನಾ ಇವನೋವಿಕ್ ವಿರುದ್ಧ ಕಾದಾಡಲಿದ್ದಾರೆ. ಅಜ್ರೆಂಕಾ ತನ್ನ ಪ್ರಥಮ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ದ್ವಿತೀಯ ಸುತ್ತಿನಲ್ಲಿ ಕೊಂಚ ಎಡವಿದರು. ಆದರೂ ಎರಡನೇ ಸುತ್ತನ್ನು ಗೆಲ್ಲುವಲ್ಲಿ ಮಾತ್ರ ಸಫಲರಾದರು. ಅತ್ತ ಶರಪೋವಾ ಮಾತ್ರ ಅತ್ಯುತ್ತಮ ನಿರ್ವಹಣೆ ತೋರುವ ಮೂಲಕ ಎರಡೂ ಸೆಟ್ ಅನ್ನು ಭರ್ಜರಿಯಾಗಿ ತನ್ನ ವಶಕ್ಕೆ ತೆಗೆದುಕೊಂಡರು.

ಬಿಸಿ ಕೇಕ್‌ಗಳಂತೆ ಬಿಕರಿಯಾಗುತ್ತಿರುವ ಐಪಿಎಲ್ ಟಿಕೆಟ್: ಶುಕ್ಲಾ

Posted by JAYAKIRANA Kirana on | 0 comments | Leave a comment...

ದೆಹಲಿ: ಐಪಿಎಲ್‌ನ ಐದನೇ ಅವತ ರಣಿಕೆಯಲ್ಲಿ ಪ್ರೇಕ್ಷಕರ ಉತ್ತಮ ಬೆಂಬಲ ದಿಂದಾಗಿ ಬಿಸಿಸಿಐ ಉಪಾಧ್ಯಕ್ಷ ಹಾಗೂ ಲೀಗ್ ಅಧ್ಯಕ್ಷ ರಾಜೀವ್ ಶುಕ್ಲಾ ಅತೀವ ಸಂತಸಗೊಂಡಿದ್ದಾರೆ. ಐಪಿಎಲ್ ಟಿಕೆಟ್‌ಗಳು ಬಿಸಿಕೇಕ್‌ಗಳಂತೆ ಮಾರಾಟವಾಗುತ್ತಿದ್ದು, ಗೇಟ್ ಸಂಗ್ರಹಣೆಯ ಮೂಲಕ ಬಂದ ಹಣದಿಂದಾಗಿ ಪ್ರಾಂಚೈಸಿಗಳು ಉತ್ತಮ ಲಾಭದತ್ತ ಸಾಗಿದೆ ಎಂದು ಶುಕ್ಲಾ ತಿಳಿಸಿದರು.
ಈ ಬಾರಿಯ ಐಪಿಎಲ್‌ಗೆ ಇಷ್ಟೊಂದು ಜನಬೆಂಬಲ ದೊರೆಯಲಿದೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಯಾಕೆಂದರೆ ಭಾರತ ಕಳೆದೆರಡು ಆಸೀಸ್ ಹಾಗೂ ಇಂಗ್ಲೆಂಡ್ ಸರಣಿಯಲ್ಲಿ ನೀರಸ ಪ್ರದರ್ಶನ ನೀಡಿತ್ತು. ಆದರೆ ಪ್ರತೀ ಪಂದ್ಯಗಳಿಗೆ ಸ್ಟೇಡಿಯಂಗಳು ಹೌಸ್‌ಫುಲ್ ಆಗುತ್ತಿದ್ದು, ಇಲ್ಲಿ ಸಂಗ್ರಹವಾದ ಹಣದಿಂದಾಗಿ ತಂಡದ ಮಾಲಿಕರು ಉತ್ತಮ ಲಾಭ ಗಳಿಸಬಹುದು. ಇದು ಐಪಿಎಲ್ ಇತಿಹಾಸದಲ್ಲೇ ಗೇಟ್ ಸಂಗ್ರಹದ ಮೂಲಕ ತಂಡಗಳು ಭಾರೀ ಲಾಭಗಳಿಸುತ್ತಿದೆ. ಹೆಚ್ಚಿನ ಎಲ್ಲಾ ಟಿಕೆಟ್‌ಗಳು ಮುಂಚಿತವಾಗಿ ಮಾರಾಟವಾಗುತ್ತಿದೆ. ಹಾಗಾಗಿ ನಮ್ಮ ಉತ್ಸಾಹ ಹೆಚ್ಚಾಗಿದ್ದು, ಮುಂದಿನ ಟೂರ್ನಿಯಲ್ಲಿ ಉತ್ತಮ ಬದಲಾವಣೆಯನ್ನು ತರಲಿದ್ದೇವೆ ಎಂದು ಶುಕ್ಲಾ ತಿಳಿಸಿದರು.

ಯೂರೋ ಕಪ್: ಇಂಗ್ಲೆಂಡ್ ತಂಡದಿಂದ ಟೆರ್ರಿಗೆ ಖೊಕ್?

Posted by JAYAKIRANA Kirana on | 0 comments | Leave a comment...

ಲಂಡನ್: ಚೆಲ್ಸಿ ತಂಡದ ನಾಯಕ ಹಾಗೂ ಇಂಗ್ಲೆಂಡ್ ಆಟಗಾರ ಜಾನ್ ಟೆರ್ರಿ ಮುಂಬರುವ ಪ್ರತಿಷ್ಠಿತ ಯೂರೋ ಕಪ್‌ನಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ. ಇಂಗ್ಲೆಂಡ್ ತಂಡದ ನೂತನ ಕೋಚ್ ಆಗಿ ನೇಮಕಗೊಂಡಿರುವ ರೊಯ್ ಹಡ್ಸನ್ ಟೆರ್ರಿಗೆ ತಂಡದಿಂದ ಖೊಕ್ ನೀಡಲಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿದೆ. ಮುಂದಿನ ಬುಧವಾರ ಇಂಗ್ಲೆಂಡ್ ತಂಡವನ್ನು ಹಡ್ಸನ್ ಪ್ರಕಟಿಸಲಿದ್ದಾರೆ.
ಇಂಗ್ಲೆಂಡ್‌ನ ಸದಸ್ಯ ಹಾಗೂ ಮ್ಯಾಂಚೆಸ್ಟರ್ ಯುನೈಟೆಡ್ ಆಟಗಾರ ರಿಯೊ ಫರ್ಡಿನಾಂಡ್ ಹಾಗೂ ಜಾನ್ ಟೆರ್ರಿಯ ಪೈಕಿ ಒಬ್ಬನನ್ನು ತಂಡಕ್ಕೆ ಅಂತಿಮಗೊಳಿಸಲಿದ್ದಾರೆ. ಆದರೆ ಹಡ್ಸನ್ ಕೃಪಾಕಟಾಕ್ಷ ಮಾತ್ರ ಫರ್ಡಿನಾಂಡ್ ಮೇಲೆ ಬೀರುವ ಸಾಧ್ಯತೆ ಇದೆ. ಯಾಕೆಂದರೆ ಇಬ್ಬರನ್ನು ತಂಡಕ್ಕೆ ಆಯ್ಕೆಗೊಳಿಸಿದರೆ ಆಗ ಅಲ್ಲಿ ತಂಡ ಇಬ್ಬಾಗವಾಗಲಿದೆ ಎಂದು ಸ್ವತಹ ಹಡ್ಸನ್ ತಿಳಿಸಿದ್ದಾರೆ. ಆದರೆ ಈ ಬಗ್ಗೆ ಇಬ್ಬರೂ ಆಟಗಾರರ ಬಳಿ ಹಡ್ಸನ್ ಮಾತನಾಡಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟೆರ್ರಿ, ತಂಡದಲ್ಲಿ ಯಾರೇ ಇದ್ದರೂ ಅದು ನನಗೆ ಸಮಸ್ಯೆಯಲ್ಲ, ಇಂಗ್ಲೆಂಡ್ ತಂಡವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ತಿಳಿಸಿದ್ದಾರೆ. ಯಾರು ಏನೇ ಈ ಬಗ್ಗೆ ಸೌಹಾರ್ದಯುತ ಮಾತನಾಡಿದರೂ ಇಬ್ಬರನ್ನೂ ತಂಡಕ್ಕೆ ಅಂತಿಮಗೊಳಿಸುವ ಸಾಧ್ಯತೆ ಬಹಳ ಕಡಿಮೆ ಇದ್ದು, ಒಂದು ವೇಳೆ ಟೆರ್ರಿ ಹೊರಗುಳಿದರೆ ಅದು ಇಂಗ್ಲೆಂಡ್ ತಂಡಕ್ಕೆ ದೊಡ್ಡ ಹೊಡೆತ ಎಂದು ಕರೆದರೆ ತಪ್ಪಿಲ್ಲ. ಮುಂಬರುವ ಬಯಾರ್ನ್ ಮ್ಯೂನಿಚ್ ವಿರುದ್ಧದ ಚಾಂಪಿಯನ್ ಲೀಗ್ ಫೈನಲ್ ಕದನದಲ್ಲಿ ಈಗಾಗಲೇ ಚೆಲ್ಸಿ ತಂಡದಿಂದ ಟೆರ್ರಿ ಉಚ್ಛಾಟನೆಗೊಂಡಿದ್ದಾರೆ.

ಗರೋಡಿಗಳು ಆರಾಧನಾಲಯಗಳಲ್ಲ: ಬನ್ನಂಜೆ ಬಾಬು ಅಮೀನ್

Posted by JAYAKIRANA Kirana on | 0 comments | Leave a comment...

ಉಡುಪಿ: ಉಡುಪಿ ತಾಲೂಕಿ ನಲ್ಲಿರುವ ೭೧ ಸಹಿತ ದೇಶದಲ್ಲಿ ಒಟ್ಟು ೨೪೮ ಗರೋಡಿಗಳಿವೆ. ಗರೋಡಿಗಳು ದೈವಸ್ಥಾನಗಳೂ ಅಲ್ಲ, ದೇವಸ್ಥಾನ ಗಳೂ ಅಲ್ಲ. ಹಿಂದೆ ವ್ಯಾಯಾಮ ಕೇಂದ್ರಗಳಾಗಿದ್ದ ಗರೋಡಿಗಳು ಇಂದು ಆರಾಧನಾಲಯಗಳಾಗಿವೆ. ಇಲ್ಲಿನ ಆಚರಣೆಗಳಲ್ಲಿ ವೈವಿಧ್ಯಗಳಿವೆ ಯಾದರೂ, ಇಲ್ಲಿ ಮಂತ್ರ- ತಂತ್ರ, ಬ್ರಹ್ಮಕಲಶ, ಆರೂಢ ಪ್ರಶ್ನೆ, ತಾಂಬೂಲ ಪ್ರಶ್ನೆ ಇತ್ಯಾದಿಗಳಿಲ್ಲ. ಇರ ಬಾರದು. ಇದೀಗ ಪರಿಸ್ಥಿತಿ ಬದಲಾ ಗಿದೆ. ಇದು ತುಳುನಾಡಿನ ದುರ್ದೈವ ಎಂದು ಜನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಬುಧ ವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿನ ಅವರು ಮಾತನಾಡುತ್ತಿದ್ದರು.
ಮಾರ್ಪಳ್ಳಿಯ ಶ್ರೀಬ್ರಹ್ಮ ಬೈದರ್ಕಳ ಗರೋಡಿಯಲ್ಲಿ ಮೇ.೧೩ ರಂದು ಬೆಳಗ್ಗೆ ಗಂಟೆ ೯.೩೦ ರಿಂದ ೬.೩೦ ರ ವರೆಗೆ ತಾಲೂಕು ಮಟ್ಟದ ಗರೋಡಿ ಆರಾಧಕರ ಸಮ್ಮೇಳನ ಪತ್ತೇರಿ ಕೂಟ- ೨೦೧೨ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನ ದಲ್ಲಿ ಸಂಪನ್ಮೂಲ ವ್ಯಕ್ತಿಗಳು ಗರೋಡಿಯ ಹಿನ್ನೆಲೆ, ಬದಲಾವಣೆ ಇತ್ಯಾದಿ ವಿಷಯಗಳ ಬಗ್ಗೆ ವಿಚಾರ ಮಂಡಿಸಲಿದ್ದಾರೆ ಎಂದು ಬಾಬು ಅಮೀನ್ ತಿಳಿಸಿದರು.
ಬೆಳಗ್ಗೆ ಗಂಟೆ ೯.೩೦ ಕ್ಕೆ ಉದ್ಘಾ ಟನೆ, ೧೧.೧೫ ರಿಂದ ಗರೋಡಿ ಪೂ ಪೂಜೆನೆ, ೧೨.೧೫ ರಿಂದ ಗರೋಡಿಯ ಆಚರಣೆ: ಪರಂಪರೆಯ ದೃಷ್ಟಿಕೋನ, ೨.೧೫ ರಿಂದ ಹೊಸಕಾಲದಲ್ಲಿ ಗರೋಡಿಗಳಲ್ಲಿನ ಆಚರಣೆಗಳು, ೩.೧೫ ರಿಂದ ತುಳುನಾಡಿನ ಆಚರಣೆ: ಸ್ಥಿತ್ಯಂತರದ ಹಾದಿಯಲ್ಲಿ ಎಂಬ ನಾಲ್ಕು ವಿಚಾರ ಗೋಷ್ಟಿಗಳು ನಡೆ ಯಲಿವೆ. ಸಂಜೆ ಗಂಟೆ ೪.೩೦ ರಿಂದ ಸಮಾರೋಪ ಸಮಾರಂಭ ನಡೆಯ ಲಿದೆ. ಇದರಲ್ಲಿ ಶೇಖರ ಪೂಜಾರಿ ಕಲ್ಮಾಡಿ ಹಾಗೂ ಇತರರನ್ನು ಸಮ್ಮಾ ನಿಸುವ ಕಾರ್ಯಕ್ರಮ ಜರುಗಲಿದೆ ಎಂದು ಅಮೀನ್ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾರ್ಪ ಳ್ಳಿಯ ಶ್ರೀಬ್ರಹ್ಮ ಬೈದರ್ಕಳ ಗರೋಡಿ ಅಭಿವೃದ್ದಿ ಸಮಿತಿ ಅಧ್ಯಕ್ಷರಾದ ಕೆ. ಪ್ರಭಾಕರ ಹೆಗ್ಡೆ, ಇತರ ಪದಾಧಿ ಕಾರಿಗಳಾದ ಸಂಜೀವ ಪೂಜಾರಿ, ಶೇಖರ ಮಾರ್ಪಳ್ಳಿ ಹಾಗೂ ಶೇಖರ ಪೂಜಾರಿ ಕಲ್ಮಾಡಿ ಉಪಸ್ಥಿತರಿದ್ದರು.

ಮೂಲ್ಕಿ ಪ್ರೆಸ್ ಕ್ಲಬ್‌ಗೆ ಅಧ್ಯಕ್ಷರಾಗಿ ರಾಮಚಂದ್ರ ಆಚಾರ್ಯ ಆಯ್ಕೆ

Posted by JAYAKIRANA Kirana on | 0 comments | Leave a comment...

ಮೂಲ್ಕಿ: ಇಲ್ಲಿನ ಉಚ್ಚಿಲ, ಪಡುಬಿದ್ರಿ, ಮೂಲ್ಕಿ, ಸುರತ್ಕಲ್, ಕಿನ್ನಿಗೋಳಿ, ಬಜಪೆ, ವ್ಯಾಪ್ತಿಯ ಪತ್ರಕರ್ತರ ಸಂಘಟನೆಯಾದ ಮುಲ್ಕಿ ಪ್ರೆಸ್ ಕ್ಲಬ್‌ನ ಮುಂದಿನ ಮೂರು ವರ್ಷದ ಅವಧಿಯ ಅಧ್ಯಕ್ಷರಾಗಿ ಪಡು ಬಿದ್ರಿಯ (ಉದಯವಾಣಿ) ವರದಿ ಗಾರರಾದ ರಾಮಚಂದ್ರ ಆಚಾರ್ಯ (ಆರಾಮ) ಸರ್ವಾನುಮತದಿಂದ ಆಯ್ಕೆ ಯಾಗಿದ್ದಾರೆ.
ಮೂಲ್ಕಿ ಸ್ವಾಗತ್ ಸಭಾಂಗಣದಲ್ಲಿ ಇತ್ತೀಚೆಗೆ ನಿಕಟಪೂರ್ವ ಅಧ್ಯಕ್ಷ ಭಾಗ್ಯವಾನ್ ಸನಿಲ್‌ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರ ಸಹಿತ ಪದಾಧಿಕಾರಿಗಳನ್ನು ಹಾಗೂ ಕಾರ್ಯಕಾರಿ ಸಮಿತಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಕ್ಲಬ್‌ನ ಸದಸ್ಯರ ಹಾಗೂ ಸಂಸ್ಥೆಯ ವಿವಿಧ ಕಾರ್ಯ ಯೋಜನೆಗಳನ್ನು ಚರ್ಚಿಸಲಾಯಿತು.
ಇತರ ಪದಾಧಿಕಾರಿಗಳಾಗಿ ಉಪಾಧ್ಯಕ್ಷರಾಗಿ ಮಿಥುನ್ ಕೊಡೆತ್ತೂರು(ಹೊಸದಿಗಂತ), ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಪಡುಬಿದ್ರಿ (ಪ್ರಜಾವಾಣಿ), ಕಾರ್ಯದರ್ಶಿ ನರೇಂದ್ರ ಕೆರೆಕಾಡು(ಪ್ರಜಾವಾಣಿ), ಕೋಶಾಧಿಕಾರಿ ಹರೀಶ್‌ಕುಮಾರ್ (ಎಚ್ಕೆ) ಹೆಜಮಾಡಿ (ವಿಜಯಕರ್ನಾಟಕ), ಆಂತರಿಕ ಲೆಕ್ಕ ಪರಿಶೋಧಕರಾಗಿ ಭಾಗ್ಯವಾನ್ ಸನಿಲ್ ಮುಲ್ಕಿ (ವಿಜಯ ವಾಣಿ), ಕಾರ್ಯಕಾರಿ ಸಮಿತಿಯಲ್ಲಿ ಎಂ.ಸರ್ವೋತ್ತಮ ಅಂಚನ್ (ಉದಯವಾಣಿ), ಲೋಕೇಶ್ ಸುರತ್ಕಲ್ (ವಿಜಯ ಕರ್ನಾಟಕ), ರಘುನಾಥ ಕಾಮತ್ ಕೆಂಚನಕೆರೆ (ಉದಯವಾಣಿ), ಬಾಲಕೃಷ್ಣ ಪೂಜಾರಿ ಉಚ್ಚಿಲ (ಜಯಕಿರಣ), ಶರತ್‌ಶೆಟ್ಟಿ ಕಿನ್ನಿಗೋಳಿ(ವಿಜಯ ಕರ್ನಾಟಕ), ಪ್ರಕಾಶ್ ಸುವರ್ಣ(ಕನ್ನಡ ಪ್ರಭ), ವಾಮನ ಕರ್ಕೇರಾ ಕೊಲ್ಲೂರು(ವಿಜಯ ಕರ್ನಾಟಕ)ರವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ನೈಸ್’ ನಾಯಕನ ನಿಜಮುಖದ ಅನಾವರಣ

Posted by JAYAKIRANA Kirana on | 0 comments | Leave a comment...

ಮಂಗಳೂರು: ಧರ್ಮದ ಹೆಸರಿನಲ್ಲಿ ಜನರನ್ನು ಯಾಮಾರಿಸಿ ಹಣ ಗಳಿಕೆ ಮಾಡಿದ್ದು ಮಾತ್ರವಲ್ಲ, ಹೆಣ್ಣಿನ ಹಿಂದೆ ಬಿದ್ದು ಮಾನ ಹರಾಜು ಹಾಕಿಕೊಂಡ ನೈಸ್ ನಾಯಕನ ನಿಜಮುಖದ ಅನಾವರಣ ಮಾಡಿದ್ದಕ್ಕಾಗಿ ದ.ಕ. ಜಿಲ್ಲೆಯ ಮುಸ್ಲಿಂ ವಲಯದಿಂದ ಪ್ರಶಂಸೆಯ ಮಾತುಗಳು ವ್ಯಕ್ತವಾಗಿವೆ.
ಮಂಗಳವಾರ ವರದಿ ಪ್ರಕಟವಾಗಿದ್ದರೂ ಪೂರಕ ಕರೆಗಳು ಬುಧವಾರವೂ ಮುಂದುವರಿದಿದ್ದವು. ಕರೆ ಮಾಡಿದವರಲ್ಲಿ ಹೆಚ್ಚಿನವರು ಈತ ಮುಸ್ಲಿಂ ಸಮಾಜಕ್ಕೆ ಕಂಟಕನಾಗಿದ್ದ. ಸಮಾಜವನ್ನು ಒಡೆದು ತನ್ನದೆ ಆದ ಪ್ರತ್ಯೇಕ ಪಂಥ ಕಟ್ಟುವ ಸಿದ್ದತೆ ನಡೆಸಿದ್ದ. ಜಯಕಿರಣದ ವರದಿ ಆತನ ಈ ಅಭಿಯಾನಕ್ಕೆ ತಡೆಯೊಡ್ಡಿದೆ ಎಂದು ತಿಳಿಸಿದ್ದಾರೆ.
ಆತನಿಗೆ ಪರವಾಗಿ ಕರೆ ಮಾಡಿದವರೂ ಇದ್ದಾರೆ. ನಿಮಗೆ ಮಾಹಿತಿ ಕೊಟ್ಟವರಾರು ಎಂದು ಗದರಿಸುವ ಕರೆಗಳೂ ಬಂದಿವೆ. ಕೆಲವರು ಆತನ ಬಗ್ಗೆ ಅನುಕಂಪ ವ್ಯಕ್ತಪಡಿಸಿ ಮಾತನಾಡಿದ್ದಾರೆ. ಅಪಾರ eನಿಯಾದ ವ್ಯಕ್ತಿ ಒಮ್ಮೆ ಎಡವಿದ್ದಾನೆ. ಸುಧಾರಿಸಿಕೊಳ್ಳಲು ಅವಕಾಶ ನೀಡಬೇಕು ಎಂಬುದು ಅವರ ಸಲಹೆ.
ಮಂಗಳೂರು ಮುಸ್ಲಿಂ ವಲಯದಲ್ಲಿ ಸೆಲೆಬ್ರಿಟಿಯಾಗಿ ಗುರುತಿಸಿಕೊಂಡಿದ್ದ ವ್ಯಕ್ತಿ. ಓರ್ವ ಮಹಿಳೆಯ ಹಿಂದೆ ಬಿದ್ದು ತನ್ನ ಮಾನ ಹರಾಜು ಹಾಕಿಕೊಳ್ಳುವಂ ತಾಗಿದ್ದು ದುರದೃಷ್ಟ. ಉತ್ತಮ ಭಾಷಣ ಕಲೆ ಹಾಗೂ eನ ಸಂಪಾದನೆಯ ಹಸಿವು ಇದ್ದ ವ್ಯಕ್ತಿ ಕಾಮದ ಹಸಿವು ನೀಗಿಸಿಕೊಳ್ಳಲು ಬೀದಿಗೆ ಇಳಿದು ಬಡಿಸಿಕೊಳ್ಳುವಂತಾಯಿತು ಎಂಬುದು ಬೇಸರದ ಸಂಗತಿ. ಅವನ ಒಂದು ತಪ್ಪನ್ನು ನಗಣ್ಯವಾಗಿಸಿದ್ದರೆ ಇನ್ನಷ್ಟು ಇಂತಹದ್ದೆ ಕೃತ್ಯಗಳು ನಡೆಯುವ ಅಪಾಯವಿತ್ತು. ಆದುದರಿಂದ ಆತನ ನೈಜ ಮುಖ ಬಯಲಿಗೆಳೆದಿದ್ದ ಸರಿಯಾದ ಕ್ರಮ ಎಂದು ಕರೆ ಮಾಡಿದವರೇ ಹೆಚ್ಚು. ಮದ್ರಸವನ್ನೂ ನಡೆಸುತ್ತಿದ್ದ ಈತ ಮದ್ರಸದ ವಿದ್ಯಾರ್ಥಿನಿಯೋರ್ವಳಿಗೆ ಪುಸ್ತಕದಲ್ಲಿ ಲವ್ ಲೆಟರ್ ಇಟ್ಟು ಕೊಟ್ಟಿದ್ದ ಎಂದು ಆರೋಪಿಸುವವರೂ ಇದ್ದಾರೆ. ವಿದೇಶಕ್ಕೆ ತೆರಳಿ ಧರ್ಮದ ಹೆಸರಲ್ಲಿ ಕಲೆಕ್ಷನ್‌ಗೆ ಸಿದ್ಧತೆ ನಡೆಸಿದ್ದ. ಈತನ ಬಣ್ಣವನ್ನು ಪತ್ರಿಕೆ ವರದಿ ಮಾಡಿದ್ದರಿಂದ ವಿದೇಶ ಪ್ರಯಾಣಕ್ಕೂ ಬ್ರೇಕ್ ಬಿದ್ದಂತಾಗಿದ್ದು ಜನ ಕೃತಜ್ಞತೆ ತಿಳಿಸಿದ್ದಾರೆ.
ವರದಿಯಲ್ಲಿ ನೈಸ್ ಉಸ್ತಾದ್ ಎಂದು ಪ್ರಸ್ತಾಪಿಸಿದ್ದರ ಬಗ್ಗೆ ಆಕ್ಷೇಪಿಸಿದ ಕರೆಗಳೂ ಬಂದಿದ್ದವು. ಉಸ್ತಾದ್ ಎಂಬುದು ಗೌರವದ ಸ್ಥಾನಮಾನ. ಇದು ಧರ್ಮ ಶಿಕ್ಷಣ ಅಭ್ಯಾಸ ಮಾಡಿದವರು ಪಡೆಯುವ ಸ್ಥಾನ. ಮದ್ರಸದ ಪ್ರಾಥಮಿಕ ಶಿಕ್ಷಣವನ್ನಷ್ಟೆ ಪಡೆದು ಅಪಾರ eನಿಯ ಮುಖವಾಡ ಹೊತ್ತು ತಿರಗಾಡುತ್ತಿದ್ದ ಈತನಿಗೆ ಉಸ್ತಾದ್ ಎಂದು ಕರೆಯುವುದು ಉಸ್ತಾದ್ ಎಂಬ ಶಬ್ಧಕ್ಕೆ ಮಾಡುವ ಅಗೌರವ ಎಂದು ಬೇಸರ ವ್ಯಕ್ತಪಡಿಸಿದವರಿಗೆ ಗೌರವ ಸೂಚಿಸಿ ನಾವು ಆತನಿಗೆ ನೈಸ್ ನಾಯಕ ಎಂದಷ್ಟೆ ಬರೆಯುತ್ತಿದ್ದೇವೆ.
ಅಧ್ಯಕ್ಷ ನಾನೇ ಎನ್ನುತ್ತಿರುವ ನೈಸ್ ಮನುಷ್ಯ
ಇಷ್ಟಕ್ಕೂ ನೈಸ್ ನಾಯಕನ ಬಣ್ಣ ಬಯಲಾಗುತ್ತಿದ್ದಂತೆಯೇ ತನ್ನ ಸಂಘಟನೆಯ ಪದಾಧಿಕಾರಿಗಳನ್ನು ಬದಲಾಯಿಸಲಾಗಿದೆ ಎನ್ನುವ ವರದಿ ಪತ್ರಿಕೆ ಮತ್ತು ಅಂತರ್ಜಾಲಗಳಲ್ಲಿ ಪ್ರಕಟಗೊಂಡಿದೆ. ಆದರೆ ನೂತನ ಅಧ್ಯಕ್ಷರನ್ನು ಹಂಗಾಮಿ ನೆಲೆಯಲ್ಲಿ ನೇಮಕ ಮಾಡಲಾಗಿದ್ದು ತಾತ್ಕಾಲಿಕ ಎಂದು ಹೇಳುತ್ತಿರುವ ಈತ ನಾನೇ ಅಧ್ಯಕ್ಷ ಎಂದು ಹೇಳಿಕೊಳ್ಳುತ್ತಿದ್ದಾನೆ ಎನ್ನುವ ಮಾಹಿತಿಯೂ ಪತ್ರಿಕೆಗೆ ಲಭಿಸಿದೆ.
ಕ್ಷಮೆ ಕೋರಿ ಸಂದೇಶ ಕಳಿಹಿಸಿದ್ದ ನೈಸ್ ನಾಯಕ
ನಾನೇನು ಮಾಡಿದ್ದೇನೋ ಅದು ಬಹುದೊಡ್ಡ ಪ್ರಮಾದ. ಆದರೆ ನನ್ನ ೩೭ ವರ್ಷಗಳಲ್ಲಿ ಇದು ಮೊದಲ ಬಾರಿ. ಎಲ್ಲ ಸದಸ್ಯರಲ್ಲೂ ಕ್ಷಮೆ ಕೋರುತ್ತೇನೆ. ಇದು ಭವಿಷ್ಯದಲ್ಲಿ ಮರುಕಳಿಸದು ಎಂದು ಕನಿಕರ ಕೋರುವ ನೈಸ್ ನಾಯಕನ ಎಸ್‌ಎಂಎಸ್ ಸಂದೇಶ ತಾನು ಕಟ್ಟಿ ಬೆಳೆಸಿದ ಸಂಘಟನೆಯ ಸದಸ್ಯರಿಗೆ ಕಳುಹಿಸಿದ್ದು ಸಾರ್ವಜನಿಕರ ಮೊಬೈಲ್‌ಗಳಿಗೂ ಕಳೆದ ಬುಧವಾರವೇ ಬಂದಿದ್ದು ಆತನ ನಿಜ ಬಣ್ಣ ಬಯಲಾಗಲು ಇನ್ನಷ್ಟು ಕಾರಣವಾಯಿತು.
ಈ ಸಂದೇಶ ಆತನಲ್ಲಿ ಮೂಡಿರುವ ಪಶ್ಚಾತ್ತಾಪವನ್ನು ಪರಿಚಯಿಸುತ್ತದೆ. ತಾನೋರ್ವ ಮಾತ್ರ ಧರ್ಮ ಸುಧಾರಣಾವಾದಿ ನಾಯಕ ಎಂಬ ಭ್ರಮೆಯಿಂದ ಈಗಲಾದರೂ ಹೊರಗೆ ಬಂದು, ಎಲ್ಲರಂತೆ ತಾನು ಕೂಡ ಧರ್ಮ eನ ಹೊಂದಿರುವ ಸಾಮಾನ್ಯ ವ್ಯಕ್ತಿ ಎಂದು ತಿಳಿದು ಬಾಳಿದರೆ ಸಾಕು ಎಂಬುದು ನಮಗೆ ಆತನ ಸಂದೇಶ ಕಳುಹಿಸಿದವರ ಹಿತನುಡಿ.

ಕಾರ್ಕಳ: ಮತ್ತೆ ಪೌರಕಾರ್ಮಿಕರನ್ನು ಮ್ಯಾನ್‌ಹೋಲ್‌ಗೆ ಇಳಿಸಿದ ಪುರಸಭೆ

Posted by JAYAKIRANA Kirana on | 0 comments | Leave a comment...

ಕಾರ್ಕಳ: ಮಲಹೊರುವ ಪದ್ಧತಿ ಯನ್ನು ಜೀವಂತವಾಗಿಸಿ ಜಿಲ್ಲಾಡಳಿತ ದಿಂದ ಛೀಮಾರಿಗೊಳಗಾದ ಕಾರ್ಕಳ ಪುರಸಭೆಯು ಮಂಗಳವಾರ ರಾತ್ರಿ ವೇಳೆಗೆ ಐವರು ಪೌರಕಾರ್ಮಿಕರನ್ನು ಮತ್ತೇ ಮ್ಯಾನ್‌ಹೋಲ್‌ಗೆ ಇಳಿಸಿ ಮಲಹೊರುವಂತೆ ಪ್ರಚೋದಿಸಿರುವ ಘಟನೆ ಬೆಳಕಿಗೆ ಬಂದಿದೆ.
ಮೇ೩ರಂದು ಬಂಡೀಮಠ ಬಸ್‌ನಿಲ್ದಾಣದ ಮುಂಭಾಗದಲ್ಲಿ ಒಳಚರಂಡಿಯ ಮ್ಯಾನ್‌ಹೋಲ್‌ಗೆ ದಲಿತ ಪೌರಕಾರ್ಮಿಕರನ್ನು ಇಳಿಸಿ ಶುಚಿತ್ವಗೊಳಿಸುವ ಕಾರ್ಯದಲ್ಲಿ ಪುರಸಭಾ ಆಡಳಿತ ವರ್ಗ ಮುಂದಾ ಗಿತ್ತು. ಇದು ಮಲ ಹೊರುವ ಪದ್ಧತಿ ಯಾಗಿದ್ದು, ಇದನ್ನು ಕರ್ನಾಟಕ ಸರ ಕಾರ ನಿಷೇಧಿಸಿ ವರ್ಷಗಳೇ ಕಳೆದರೂ, ಇನ್ನೂ ಕೂಡಾ ಕಾರ್ಕಳದಲ್ಲಿ ಜೀವಂತ ವಿರುವುದರ ಬಗ್ಗೆ ಜಯಕಿರಣ ಪತ್ರಿಕೆ ಸಚಿತ್ರ ವರದಿ ಪ್ರಕಟಿಸಿತ್ತು. ಇದನ್ನು ಆಧರಿಸಿ ಪುರಸಭೆಯ ತಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಬೇಕಿತ್ತು. ಅದನ್ನು ಜಿಲ್ಲಾಡಳಿತವಾಗಲಿ, ಪೊಲೀಸ್ ಇಲಾಖೆಯಾಗಲಿ ಮಾಡ ದಿರುವುದನ್ನು ಕಂಡರೆ ಮಲಹೊರುವ ಪದ್ಧತಿಯನ್ನು ಜಿಲ್ಲಾಡಳಿತವೇ ಬೆಂಬಲಿಸುತ್ತಿರುವುದು ಕಂಡು ಬಂದಿದೆ.
ಪತ್ರಿಕೆಯ ವರದಿಯ ಆಧಾರದಲ್ಲಿ ಮಂಗಳೂರು ಉರ್ವಸ್ಟೋರಿನಲ್ಲಿರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ ಕಾರಣ ಕೇಳಿ ಪುರಸಭೆಗೆ ನೊಟೀಸ್ ಜಾರಿಗೊಳಿಸಿದೆ. ಈ ಬೆಳವಣಿಗೆಯ ನಡುವೆ ಇಲ್ಲಿ ಕೂಡಾ ಹರಕೆಗೆ ಕುರಿಯನ್ನೇ ಬಲಿ ಕೊಡುವ ಸಂಪ್ರದಾಯ ಬೆಳೆಸಿರುವುದು ಕಂಡುಬಂದಿದೆ.
 ಮಂಗಳವಾರ ಸಂಜೆ ತನಕ ಮ್ಯಾನ್‌ಹೋಲ್ ದುಸ್ಥಿತಿಯಲ್ಲಿರುವುದರಿಂದ ಮಲ ಮೂತ್ರ ಸಹಿತ ತ್ಯಾಜ್ಯ ವಸ್ತುಗಳು ಹೊರ ಸೂಸಿ ಸ್ಥಳದಲ್ಲಿ ಗಬ್ಬುವಾಸನೆಗೆ ಕಾರಣವಾಗಿದೆ. ಮ್ಯಾನ್‌ಹೋಲ್ ದುಸ್ಥಿತಿಯಲ್ಲಿದ್ದ ರಸ್ತೆಯ ಮತ್ತೊಂದು ಪಾರ್ಶ್ವದಲ್ಲಿ ಮೂಡುಗಣಪತಿ ದೇವಳವಿದ್ದು, ನಿನ್ನೆ ಸಂಕಷ್ಟ ಚತುರ್ಥಿಯಾದುದರಿಂದ ಭಕ್ತಾದಿಗಳು ಪುರಸಭೆ ವಿರುದ್ಧ ಪತ್ರಿಭಟನೆಗೆ ಮುಂದಾಗುವ ಯೋಜನೆಯನ್ನು ಹಮ್ಮಿಕೊಂಡಿ ದ್ದರು. ಇದರಿಂದಾಗಿ ಇಕ್ಕಟ್ಟಿಗೆ ಸಿಲುಕಿದ ಪುರಸಭಾ ಆಡಳಿತ ವರ್ಗವು ಮಂಗಳವಾರ ರಾತ್ರಿ ಸುಮಾರು ೧.೩೦ರ ವೇಳೆಗೆ ಐವರು ಪೌರಕಾರ್ಮಿಕರನ್ನು ಬಂಡೀಮಠದಲ್ಲಿರುವ ಅದೇ ಮ್ಯಾನ್‌ಹೋಲ್‌ಗೆ ಇಳಿಸಿ ತ್ಯಾಜ್ಯವಸ್ತುವನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿ ಯಾಗಿದ್ದಾರ. ಆ ತ್ಯಾಜ್ಯವಸ್ತುವಿನಲ್ಲಿ ಮಲ,ಮೂತ್ರ ಒಳಗೊಂಡಿತ್ತು. ಒಟ್ಟಿನಲ್ಲಿ ಇದು ಮಲ ಹೊರುವ ಪದ್ಧತಿಯಾಗಿದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಮೇ ೩ರಂದು ಮ್ಯಾನ್‌ಹೋಲ್‌ಗೆ ಪೌರಕಾರ್ಮಿಕರು ಇಳಿಯುವಾಗ ಕೈಚೀಲ, ಕಾಲುಚೀಲ, ಮುಖಕ್ಕೆ ಅಡ್ಡಪಟ್ಟಿ(ಬಟ್ಟೆ) ಇರಲಿಲ್ಲವಾಗಿತ್ತು. ಆದರೆ ಮಂಗಳವಾರ ರಾತ್ರಿ ವೇಳೆಗೆ ಮೇಲಿನ ಪರಿಕರಗಳನ್ನು ಪೌರಕಾರ್ಮಿಕರಿಗೆ ನೀಡಿ ಮ್ಯಾನ್‌ಹೋಲ್‌ಗೆ ಇಳಿಸಲಾಗಿದೆ.
ಈ ಬಗ್ಗೆ ನಿನ್ನೆ ಪತ್ರಿಕೆಯು ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಅವರ ಮೊಬೈಲ್‌ಗೆ ಸಂಪರ್ಕಿಸಿದಾಗ ಮ್ಯಾನ್‌ಹೋಲ್ ಶುಚಿತ್ವ ಕೆಲಸ ಮಂಗಳವಾರ ರಾತ್ರಿ ಮಾಡಲಾಗಿದೆಯಾದರೂ ಯಾವುದೇ ಕಾರ್ಮಿಕರನ್ನು ಮ್ಯಾನ್‌ಹೋಲ್‌ಗೆ ಇಳಿಸಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ನಾನೇ ಖುದ್ದಾಗಿ ನಿಂತು ಕೆಲಸ ಮಾಡಿಸಿದ್ದೇನೆಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಮ್ಯಾನ್‌ಹೋಲ್ ಶುಚಿತ್ವಗೊಳಿಸುವ ಬಗ್ಗೆ ಸರಕಾರ ನಿರ್ದೇಶನ ನೀಡದೇ ಇರುವುದು ಈ ರಾದ್ಧಾಂತಕ್ಕೆ ಕಾರಣವಾಗಿದೆ.

ಎಂಡೊ ಸಂತ್ರಸ್ತರಿಗೆ ಸೌಲಭ್ಯ ನೀಡಲು ಒತ್ತಾಯಿಸಿ ಹರತಾಳ

Posted by JAYAKIRANA Kirana on | 0 comments | Leave a comment...

ಕಾಸರಗೋಡು: ಎಂಡೊಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪರಿಹಾರಧನ ವಿತರಣೆಯಲ್ಲಿ ವಿಳಂಬ ಹಾಗೂ ಎಂಡೊಸಲ್ಫಾನ್ ಕಂಪೆನಿ ಪರ ರಾಜ್ಯ ಸರಕಾರ ತಳೆಯುತ್ತಿರುವ ನಿಲುವನ್ನು ಪ್ರತಿಭಟಿಸಿ ಎಲ್‌ಡಿಎಫ್ ಕರೆ ನೀಡಿದ್ದ ಜಿಲ್ಲಾ ಹರತಾಳ ಬಾಗಶ: ಯಶಸ್ವಿಯಾಗಿದೆ.
ಎಂಡೊ ಸಸಲ್ಫಾನ್ ಸಂತ್ರಸ್ತ ವಲಯದ ಗ್ರಾ.ಪಂ. ವ್ಯಾಪ್ತಿಯಲ್ಲಿ ಉರತಾಳ ಪೂರ್ಣ ಯಶಸ್ವಿಯಾಗಿತ್ತು. ಉಳಿದೆಡೆ ಭಾಗಶ; ಬಂದ್ ಉಂಟಾಗಿತ್ತು.

ಕಾಡು ಕುರಿ ಪಿಲಿಕುಳ ನಿಸರ್ಗಧಾಮಕ್ಕೆ

Posted by JAYAKIRANA Kirana on | 0 comments | Leave a comment...

ಮಂಗಳೂರು: ಕುಂದಾಪುರ ಸಮೀಪ ಅರಾಟೆ ಹೊಳೆಗೆ ಎಸೆದು ಹೋಗಿದ್ದ ಕಾಡು ಕುರಿಯ ಮರಿಯನ್ನು ಸ್ಥಳೀಯರು ರಕ್ಷಸಿದ್ದು, ಅದನ್ನು ಮಂಗಳೂರು ಪಿಲಿಕುಳ ನಿಸರ್ಗ ಧಾಮಕ್ಕೆ ರವಾಸಲಾಗಿದೆ.
ಒಂದು ವರ್ಷ ಪ್ರಾಯದ ಕಾಡುಕುರಿಗೆ ತರುಚಿದ ಗಾಯವಾ ಗಿದ್ದು ಸೂಕ್ತ ಚಿಕಿತ್ಸೆಯ ಬಳಿಕ ಚೇತರಿಸಿ ಕೊಂಡಿದೆ. ಕಾರ್‌ನಲ್ಲಿ ಬಂದಿದ್ದ ಆಗಂತುಕರು ಕಾಡು ಕುರಿಯನ್ನು ನದಿಗೆ ಎಸೆದು ಹೋಗಿದ್ದರು. ದಾರಿ ಯಲ್ಲಿ ಸಿಕ್ಕಿದ್ದ ಕಾಡುಕುರಿ ಹಿಡಿದವರು ಮುಂದೆ ಸಾಗಿದರೆ ಚೆಕ್‌ಪೋಸ್ಟ್‌ಗಳಲ್ಲಿ ಸಿಕ್ಕಿಬೀಳುವ ಭಯದಿಂದ ನದಿಗೆ ಎಸೆದು ಹೋಗಿರಬಹುದು ಎಂದು ಅಂದಾಜಿಸಲಾಗಿದೆ.
ಈ ವಿಷಯದ ತನಿಖೆ ಮುಂದುವರಿದಿದೆ ಎಂದು ಕುಂದಾಪುರ ಅರಣ್ಯ ವಿಭಾಗದ ಫಾರೆಸ್ಟರ್ ಎನ್. ಎಫ್.ಡಿಸೋಜಾ ತಿಳಿಸಿದ್ದಾರೆ.

ಮೇ.೧೩ಕ್ಕೆ ಸಮಸ್ತ ಉಚ್ಚಿಲ ವಲಯ ಸಮ್ಮೇಳನ

Posted by JAYAKIRANA Kirana on | 0 comments | Leave a comment...

ಮಂಗಳೂರು: ಸಮಸ್ತ ಕೇರಳ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಉಚ್ಚಿಲ ವಲಯ ಸಮ್ಮೇಳನವು ಇದೇ ತಿಂಗಳ ದಿ.೧೩ನೇ ಅದಿತ್ಯವಾರ ಸಂಜೆ ೪.೩೦ಕ್ಕೆ ಉಚ್ಚಿಲ ಸಂಶುಲ್ ಉಲಮಾ ನಗರ ದಲ್ಲಿ ನಡೆಯಲಿದೆ.
ಅಮೀರಲಿ ತಂಙಳ್ ಅವರು ಉಚ್ಚಿಲ ಹಝ್ರತ್ ಅರಬಿಸ್ಸೈದಾರ್ ವಲಿ ಯುಲ್ಲಾಹಿ ದರ್ಗಾ ಝಿಯಾರತ್ ನೊಂದಿಗೆ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಕೇಂದ್ರ ಮುಶಾವರದ ಸದಸ್ಯರಾದ ಶೈಖುನಾ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ವಹಿಸಲಿದ್ದಾರೆ. ಸೈಯ್ಯದ್ ಹಾಶಿರಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ದುವಾ ನೆರವೇರಿಸಲಿದ್ದಾರೆ. ಸೈಯ್ಯದ್ ಎನ್‌ಪಿಎಂ ಝೈನುಲ್ ಅಬಿದೀನ್ ತಂಙಳ್ ಕಾರ್ಯಕ್ರಮ ವನ್ನು ಉದ್ಘಾಟಿಸಲಿದ್ದಾರೆ. ಸಮ್ಮೇಳನ ದಲ್ಲಿ ಖ್ಯಾತ ವಾಗ್ಮಿಗಳಾದ ಅಬ್ದುಸ್ಸ ಮದ್ ಪೂಕೋಟೂರು, ನ್ಯಾಯವಾದಿ ಹನೀಫ್ ಹುದವಿ, ಅಬ್ದುಲ್ ಬಾರಿ ಬಾಖವಿ ಕಾಂತಪುರಂ ಮೊದಲಾ ದವರು ಭಾಷಣ ಮಾಡಲಿದ್ದಾರೆ. ಮಂಗಳೂರು ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಅಬ್ದುಲ್ ಖಾದಿರ್ ಮುಸ್ಲಿಯಾರ್ ಪಯ್ಯಕ್ಕಿ, ಖಾಸಿಂ ಮುಸ್ಲಿಯಾರ್ ತಾಯಲಂ ಗಾಡಿ, ಅಹ್ಮದ್ ಮುಸ್ಲಿಯಾರ್ ಪಾತೂರು, ಅಬ್ಬಾಸ್ ದಾರಿಮಿ, ಚಂದ್ರಶೇಖರ್ ಉಚ್ಚಿಲ್, ಬಾಝಿಲ್ ಡಿ'ಸೋಜ ಮತ್ತಿತರರು ಭಾಗವಹಿಸ ಲಿದ್ದಾರೆ ಎಂದು ನಿನ್ನೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಸ್ವಾಗತ ಸಮಿತಿ ಕಾರ್ಯದರ್ಶಿ ಅಬ್ದುಲ್ ಸಲಾಂ ಉಚ್ಚಿಲ ಅವರು ತಿಳಿಸಿದ್ದಾರೆ. ಪತ್ರಿಕಾ ಗೋಷ್ಟಿಯಲ್ಲಿ ಕೆ.ಎಂ.ಅಬ್ಬಾಸ್ ಮಜಲ್, ಅಬ್ದುಲ್ ಅಝೀಝ್ ಕೊಳಂಗೆರೆ, ಶಾಹುಲ್ ಹಮೀದ್ ಮತ್ತು ಅಹ್ಮದ್ ಅಜ್ಜಿನಡ್ಕ ಉಪಸ್ಥಿತರಿದ್ದರು.

ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹೆಚ್ಚುವರಿ ಅನುದಾನ: ಅಬೂಬಕರ್

Posted by JAYAKIRANA Kirana on | 0 comments | Leave a comment...

ಮಂಗಳೂರು: ಬಿಜೆಪಿ ನೇತೃತ್ವದ ಸರಕಾರ ಅಲ್ಪಸಂಖ್ಯಾತರ ಏಳಿಗೆಗಾಗಿ ವಿವಿಧ ಯೋಜನೆಗಳನ್ನು ಮತ್ತು ಯೋಜನಾ ಗಾತ್ರ ಹೆಚ್ಚಿಸಿ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಡಿದೆ. ಯಡಿಯೂರಪ್ಪ ಮತ್ತು ಸದಾನಂದಗೌಡ ನೇತೃತ್ವದ ಸರಕಾರ ಅಲ್ಪಸಂಖ್ಯಾತ ನಿಗಮಕ್ಕೆ ೨೦೦೮-೦೯ರಂದು ೪೬.೭೦ ಕೋಟಿ , ೨೦೦೯-೧೦ರಲ್ಲಿ೪೧.೪೫ಕೋಟಿರೂ, ೨೦೧೦-೧೧ರಲ್ಲಿ ೫೬ ಕೋಟಿ ರೂ. ೨೦೧೧-೧೨ರಲ್ಲಿ ೯೫ ಕೋಟಿ ರೂ., ೨೦೧೨-೧೩ರಲ್ಲಿ೧೨೦ಕೋಟಿ ಅನುದಾನ ನೀಡುವ ಮೂಲಕ ಬಿಜೆಪಿ ಅಲ್ಪ ಸಂಖ್ಯಾತರ ಪರ ಸರಕಾರ ಎಂಬ ಹೆಮ್ಮೆಗೆ ಪಾತ್ರವಾಗಿದೆ ಎಂದು ಅಲ್ಪಸಂಖ್ಯಾತನಿಗಮದ ಅಧ್ಯಕ್ಷ ಎನ್.ಬಿ. ಅಬೂಬಕರ್ ತಿಳಿಸಿದ್ದಾರೆ.
ಅವರು ನಗರದ ಸೆರ್ಕ್ಯೂಟ್‌ಹೌಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕರ್ನಾಟಕ ರಾಜ್ಯ ಅಭಿವೃದ್ಧಿ ಗಮದ ವತಿಯಿಂದ ಅನುಷ್ಠಾನಗೊಂಡ ಸ್ವಾವನಂಬನಾ-ಮಾರ್ಜಿನ್ , ಸಹಾಯಧನ ಯೋಜನೆ, ಅರಿವು ಯೋಜನೆ, ಶ್ರಮಶಕ್ತಿ ಯೋಜನೆ, ಗಂಗಾ ಕಲ್ಯಾಣ ಯೋಜನೆ ಏತ ನೀರಾವರಿ ಯೋಜನೆ ಸೇರಿದಂತೆ ಒಟ್ಟು ೯ ಯೋಜನೆಗಳಲ್ಲಿ ಮೂರು ವರ್ಷ ೧೦ ತಿಂಗಳಲ್ಲಿ ೧೪೫೨೭೨ ಫಲಾನುಭವಿಗಳಿಗೆ ೨೩೭೫೦.೮೭ ಲಕ್ಷ ರೂ. ಹಣ ಮಂಜೂರಾಗಿದೆ ಎಂದರು.
ಇಷ್ಟು ಅವಧಿಯಲ್ಲಿ ೫೬೨೧ ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಎರಡು ಶೇ. ಬಡ್ಡಿ ದರದಲ್ಲಿ ಬಹಳಷ್ಟು ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯ ವಿತರಿಸಲಾಗಿದೆ. ರಾಷ್ಟ್ರೀಯ ಅಲ್ಪಸಂಖ್ಯಾತ ನಿಗಮದಿಂದ ಬೀದರ್, ರಾಯಚೂರು, ಗುಲ್ಬರ್ಗಾ, ಬಳ್ಳಾರಿ ದಕ್ಷಿಣಕನ್ನಡ, ದಾರವಾಡ ಸೇರಿದಂತೆ ಒಟ್ಟು ಏಳು ಜಿಲ್ಲೆಗಳನ್ನು ಈಗಾಗಲೇ ಕ್ಲಸ್ಟರ್ ಜಿಲ್ಲೆಗಳನ್ನಾಡಿ ಮಾಡಿ ೮.೦೦ ಕೋಟಿ ಮೊತ್ತದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ವಕ್ಫ್ ಬೊರ್ಡ್‌ನ ಅಧ್ಯಕ್ಷ ಉಸ್ಮಾನ್, ಬಿಜೆಪಿ ಮುಖಂಡ ಅನ್ವರ್ ರಿಕೊ, ಉಳ್ಳಾಲ ವಲಯ ಬಿಜೆಪಿ ನಾಯಕ ಪೊಡಿಮೋನು, ಜೆರಾಲ್ಡ್ ಸೋಜ, ರಾಜಗೋಪಾಲ ರೈ, ಅಶ್ರಫ್ ಬೋಳಿಯಾರ್, ರಫೀಕ್ ಪಾನೇಲ ಉಪಸ್ಥಿತರಿದ್ದರು

ಹರೇಕಳ: ಕೊಜಪಾಡಿ ಬಸ್ ಸಂಚಾರ ಇಂದಿನಿಂದ ಆರಂಭ

Posted by JAYAKIRANA Kirana on | 0 comments | Leave a comment...

ಮಂಗಳೂರು: ರಸ್ತೆಯಿಲ್ಲದ ಕಾರಣ ಕೊಜಪಾಡಿಗೆ ಹೋಗುತ್ತಿದ್ದ ಬಸ್ಸುಗಳು ಸಂಚಾರ ಸ್ಥಗಿತಗೊಳಿಸಿ ದ್ದನ್ನು ವಿರೋಧಿಸಿ ಸ್ಥಳೀಯರು ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಗೆ ಕೊಣಾಜೆ ಠಾಣಾಧಿಕಾರಿಯವರು ರಾಜಿ ಮೂಲಕ ಬ್ರೇಕ್ ನೀಡಲಾಗಿದೆ.
ಮಂಗಳೂರಿನಿಂದ ಹರೇಕಳಕ್ಕೆ ಹೋಗುವ ಮೂರು ಬಸ್ಸುಗಳು ಕೊಜ ಪಾಡಿಗೆ ಪರವಾನಿಗೆ ಹೊಂದಿದೆ. ಆದರೆ ಇಲ್ಲಿನ ಮಾರ್ಗವು ಹದೆಗೆಟ್ಟಿರುವ ಕಾರಣ ಒಂದು ಬಸ್ ಮಾತ್ರವೇ ಕೊಜ ಪಾಡಿಗೆ ಸಂಚರಿಸುತ್ತಿದ್ದು, ಇನ್ನೆರಡು ಬಸ್ಸುಗಳು ಹರೇಕಳದಲ್ಲೇ ಸಂಚಾರ ಸ್ಥಗಿತಗೊಳಿಸುತ್ತಿತ್ತು. ಈ ಕಾರಣದಿಂ ದಾಗಿ ಸ್ಥಳೀಯ ಜನರು ಹರೇಕಳ ದಿಂದ ಸುಮಾರು ಎರಡು ಕಿ.ಮೀ. ದೂರದ ಕೊಜಪಾಡಿಗೆ ನಡೆದು ಕೊಂಡೇ ಅಟೋರಿಕ್ಷಾದವರೂ ರಸ್ತೆ ಸರಿಯಿಲ್ಲ ಎನ್ನುವ ಕಾರಣದಿಂದ ದುಪ್ಪಟ್ಟು ದರ ಪಡೆಯುತ್ತಿದ್ದ ಕಾರಣ ಅಟೋ ಪ್ರಯಾಣ ಕಬ್ಬಿಣದ ಕಡಲೆ ಕಾಯಿಯಂತಾಗಿತ್ತು.
ಹರೇಕಳ ಗ್ರಾಮ ಪಂಚಾಯಿತಿಗೆ ಮಾಡಿದ ಮನವಿ ಫಲ ನೀಡದ ಕಾರಣ ಆಕ್ರೋಶಗೊಂಡ ಕೊಜಪಾಡಿ ನಾಗ ರಿಕರು ಕಳೆದ ವಾರ ಕೊಣಾಜೆ ಠಾಣೆಗೆ ದೂರು ನೀಡಿ ಕ್ರಮ ಕೈಗೊಳ್ಳದಿದ್ದಲ್ಲಿ ಬಸ್ಸುಗಳನ್ನು ತಡೆದು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಎಸ್.ಐ.ಶಿವಪ್ರಕಾಶ್ ಅವರು ಕೊಜಪಾಡಿ ನಾಗರಿಕರು, ಜನಪ್ರತಿನಿದಿಗಳು ಹಾಗೂ ಬಸ್ಸು ಮಾಲೀಕರ ಸಭೆ ನಡೆಸಿದ್ದು, ಹರೇಕಳ ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯರ ಸಹಕಾರದಲ್ಲಿ ತೀರಾ ಹದೆಗೆಟ್ಟಿರುವ ಮಾರ್ಗಕ್ಕೆ ಮಣ್ಣು ಹಾಕಿ ತಾತ್ಕಾಲಿಕ ನೆಲೆಯಲ್ಲಿ ಸರಿಪಡಿಸುವ ತೀರ್ಮಾನ ಕೈಗೊಳ್ಳಲಾಯಿತು. ಇದಕ್ಕೆ ಬಸ್ಸು ಮಾಲೀಕರು ಸಮ್ಮತಿ ಸೂಚಿಸಿದ್ದಾರೆ. ಸಭೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯ ಮುಸ್ತಫಾ ಹರೇಕಳ, ಗ್ರಾಮ ಪಂಚಾಯಿತಿ ಸದಸ್ಯರಾದ ಮಜೀದ್, ಬಶೀರ್, ಮೋಹನ್‌ದಾಸ್, ಅಕ್ಬರ್ ಉಪಸ್ಥಿತರಿದ್ದರು.

ಬೋಲ ಸಹಿತ ಮೂವರಿಗೆ ಗೌರವ ಪ್ರಶಸ್ತಿ

Posted by JAYAKIRANA Kirana on | 0 comments | Leave a comment...

ಮಂಗಳೂರು :ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ೨೦೧೧ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಬಹುಮಾನ ವಿಜೇತರನ್ನು ಘೋಷಿಸಲಾಗಿದೆ. ಅಕಾಡೆಮಿ ಚಾವಡಿಯಲ್ಲಿ ನಡೆದ ಸುದ್ಧಿಗೋಷ್ಠಿ ಯಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಮೇ೮ರಂದು ನಡೆದ ಅಕಾಡೆಮಿ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ ಎಂದರು.
ತುಳು ಸಾಹಿತ್ಯ ಕ್ಷೇತ್ರದಲ್ಲಿ ಬೋಲ ಚಿತ್ತರಂಜನ್‌ದಾಸ್, ತುಳು ರಂಗಭೂಮಿ ಕ್ಷೇತ್ರ ಜೆ. ಸೀತಾರಾಮ ಶೆಟ್ಟಿ, ತುಳು ಸಿಮಾ ಕ್ಷೇತ್ರದಲ್ಲಿ ಟಿ.ಎ. ಶ್ರೀನಿವಾಸ್ ಗೌರವ ಪ್ರಶಸ್ತಿಗೆ ಪುಸ್ತಕ ಪ್ರಕಾರದಲ್ಲಿ ಪುತ್ತಿಗೆ ಪದ್ಮನಾಭರೈಯವರ ಸತ್ಯದೃಷ್ಟಿ ತುಳುಕಾದಂಬರಿ, ಡಾ. ಅಶೋಕ್ ಆಳ್ವ ಕೆ. ಅವರ ಒಂಜಿ ಕುಂದು ನಲ್ಪ ಕತೆಕುಲು ಕಥೆ ಹಾಗೂ ರತ್ನಾಕರ ರಾವ್ ಕಾವುರು ಅವರಿಂದ ಭೂತಾಳ ಪಾಂಡ್ಯೆ ನಾಟಕ ಪುಸ್ತಕಕ್ಕೆ ಆಯ್ಕೆ ನಡೆದಿದೆ ಎಂದರು. ಪುಸ್ತಕ ಬಹುಮಾನ ಐದು ಸಾವಿರ ಮತ್ತು ಪ್ರಶಸ್ತಿ ಹೊಂದಿದೆ. ಗೌರವ ಪ್ರಶಸ್ತಿಯು ಹತ್ತು ಸಾವಿರ ರೂ. ನಗದು, ಶಾಲು, ಹಾರ, ಫಲತಾಂಬೂಲ, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರಗಳನ್ನೊಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಜೂ.೧೬ ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ, ಸದಸ್ಯರಾದ ಜಗನ್ನಾಥ ಶೆಟ್ಟಿ ಬಾಳ, ಡಾ. ತುಕರಾಂ ಪೂಜಾರಿ, ಡಾ. ಪದ್ಮನಾಭ ಭಟ್, ದಾಮೋದರ ಬಂಗೇರ, ಕದ್ರಿ ನವನೀತ ಶೆಟ್ಟಿ, ಮಂಜುಳಾ ಶೆಟ್ಟಿ ಉಪಸ್ಥಿತರಿದ್ದರು.

ಗಂಡಸರಿಗೀಗ ಮಹಿಳೆಯರ ಭಯ!

Posted by JAYAKIRANA Kirana on | 0 comments | Leave a comment...

ನಗರಾಡಳಿತದಲ್ಲಿ ಶೇ.೫೦ ಮೀಸಲಾತಿ
ಮಂಗಳೂರು: ಚುನಾವಣೆಯಲ್ಲಿ ಶೇ.೫೦ ಮೀಸಲಾತಿ ಈಗ ಮಹಾನಗರ ಪಾಲಿಕೆ, ಪುರಸಭೆ, ನಗರಸಭೆಗೂ ವ್ಯಾಪಿಸಿದೆ. ಇದರೊಂದಿಗೆ ಚುನಾವಣಾ ಆಸೆಯ ಪುರುಷರಲ್ಲಿ ತಳಮಳ ಆರಂಭ ವಾಗಿದೆ. ತಮ್ಮ ಸ್ಥಾನ ಕಿತ್ತು ತಿನ್ನುವ ಮಹಿಳೆ ಯಾರು ಎಂಬ ಕುತೂಹಲವೂ ಮೂಡಿದೆ.
ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾ ಯತ್‌ಗಳ ಚುನಾವಣೆಯಲ್ಲಿ ಈಗಾಗಲೇ ಶೇ.೫೦ ಮೀಸಲಾತಿ ಕಬಳಿಸಿದ ಮಹಿಳೆಯರು ಈಗ ನಗರ ಸ್ಥಳೀಯ ಸಂಸ್ಥೆಗಳಲ್ಲೂ ಗಂಡಸರ ಸ್ಥಾನಮಾನಕ್ಕೆ ಕಡಿವಾಣ ಹಾಕಲಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮಹಿಳೆ ಯರಿಗೆ ಶೇ.೫೦ರ ಮೀಸಲಾತಿ ಒದಗಿ ಸುವ ಘೋಷಣೆಯನ್ನು ಎರಡು ದಿನಗಳ ಹಿಂದೆಯಷ್ಟೇ ಸರಕಾರ ಪ್ರಕಟಿಸಿದೆ. ಈ ವರೆಗೆ ಇದ್ದ ಶೇ.೩೩ರ ಮೀಸಲಾತಿ ಶೇ.೫೦ಕ್ಕೆ ಏರಿಸುವ ನಿರ್ಧಾರವನ್ನು ಸೋಮವಾರ ನಡೆದ ಸಚಿವ ಸಂಪು ಟದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಈ ಕುರಿತು ತಿದ್ದುಪಡಿ ಮಸೂದೆ ಯನ್ನು ಮುಂಬರುವ ಜೂನ್‌ನಲ್ಲಿ ನಡೆಯಬಹುದಾದ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲು ಬಿಜೆಪಿ ಆಡಳಿತಗಾರರು ನಿರ್ಧರಿಸಿದ್ದಾರೆ. ಬರುವ ಆಗಸ್ಟ್ ಅಥವಾ ಸೆಪ್ಟಂಬರ್‌ನಲ್ಲಿ ಮತ್ತು ಅದರ ಬಳಿಕ ನಡೆಯುವ ಚುನಾವಣೆಗಳಲ್ಲಿ ಮಹಿಳೆಯರು ಶೇ.೫೦ರ ಮೀಸಲಾ ತಿಯ ಲಾಭ ಪಡೆಯಲಿದ್ದಾರೆ.
ವಿಧಾನಸಭೆ ಹಾಗೂ ವಿಧಾನ ಪರಿಷತ್ ಮತ್ತು ಸಹಕಾರಿ ಸಂಘಗಳ ಹೊರತಾಗಿ ರಾಜ್ಯದಲ್ಲಿ ಉಳಿದ ಎಲ್ಲಡೆಯೂ ಮಹಿಳೆಯರ ರಾಜಕೀಯ ರಾರಾಜಿಸಲಿದೆ. ಸಂಸತ್ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.೩೩ಸ್ಥಾನ ಒದಗಿಸುವ ವಿಧೇಯಕ ಕಳೆದ ಎರಡು ದಶಕಗಳಿಂದ ಕೊಳೆ ಯುತ್ತಿದೆ. ಕೇಂದ್ರದಲ್ಲಿ ಆಡಳಿತದಲ್ಲಿ ರುವವರು ಹಾಗೂ ವಿರೋಧ ಪಕ್ಷಗಳಲ್ಲಿ ಹೊಂದಾಣಿಕೆ ಆಗುತ್ತಿಲ್ಲ ಎಂಬ ನೆಪದಲ್ಲಿ ವಿದೇಯಕ ಪದೆ ಪದೆ ಬಿದ್ದು ಹೋಗುವ ಪ್ರಕ್ರಿಯೆ ನಡೆಯುತ್ತಿದೆ. ಇಂದಲ್ಲ ನಾಳೆ ಮಹಿಳಾ ಮೀಸಲಾತಿಯ ವಿಧೇಯಕ ಬಂದೇ ಬರುತ್ತದೆ ಎಂಬ ನಿರೀಕ್ಷೆಯೊಂ ದಿಗೆ ಕರ್ನಾಟಕದಲ್ಲಿ ಮಹಿಳಾ ರಾಜಕಾರಣಕ್ಕೆ ಈಗಲೇ ಚಾಲನೆ ನೀಡಲಾಗಿದೆ.
ಬರುವ ಜನವರಿ ಅಥವಾ ಫೆಬ್ರ ವರಿಯ ವೇಳೆಗೆ ಮಂಗಳೂರು ಮಹಾ ನಗರ ಪಾಲಿಕೆಯ ಚುನಾವಣೆಯೂ ನಡೆಯಲಿದೆ. ಮನಪಾಕ್ಕೆ ಮರು ಆಯ್ಕೆ ಬಯಸುವ ಹಾಗೂ ಮಹಿಳೆಯರಿದ್ದ ವಾರ್ಡ್‌ಗಳನ್ನು ಅತಿಕ್ರಮಿಸುವ ರಾಜಕೀಯದಲ್ಲಿ ತೊಡಗಿದ್ದ ಪುರುಷ ರಾಜಕಾರಣಿಗಳಿಗೆ ಶೇ.೫೦ರ ಮೀಸ ಲಾತಿ ಭಾರೀ ಹಿನ್ನೆಡೆ ಉಂಟು ಮಾಡಿದೆ ಎಂದು ಹೇಳಬಹುದು.
ಪಂಚಾಯತ್ ಚುನಾವಣೆಗಳಲ್ಲಿ ಶೇ೫೦ರಷ್ಟು ಮೀಸಲಾತಿ ಜಾರಿಗೆ ಬಂದಾಗ ಪತ್ನಿಯನ್ನು ಕಣಕ್ಕಿಳಿಸುವ ರಾಜಕೀಯ ನಡೆದಿತ್ತು. ನಗರ ಸ್ಥಳೀಯಾ ಡಳಿತಗಳಲ್ಲೂ ಪ್ರಭಾವಿತರೆನಿ ಸಿದವರು ಪತ್ನಿಯರು ಚುನಾವಣಾ ಕಣ ಕ್ಕಿಳಿಯುವ ಸಾಧ್ಯತೆಗಳನ್ನು ಅಲ್ಲಗಳೆಯು ವಂತಿಲ್ಲ. ರಾಜಕೀಯ ಪಕ್ಷಗಳಲ್ಲಿ ಈಗ ಕಾಡುವ ಮತ್ತೊಂದು ದೊಡ್ಡ ಸಮಸ್ಯೆ ಎಂದರೆ ಸೂಕ್ತ ಮಹಿಳೆ ಅಬ್ಯರ್ಥಿಯನ್ನು ಹುಡುಕುವುದು. ರಾಜಕೀಯದಲ್ಲಿ ಕಾಣುವುದು ನಾಲ್ಕಾರು ಮಹಿಳೆಯರ ಮುಖಗಳು ಮಾತ್ರ. ಹೊಸ ಮಹಿಳಾ ನಾಯಕತ್ವದ ಪರದಾಟ ನಡೆಸಬೇಕಾಗಿದೆ.
ಮುಂಬರುವ ವಿಧಾನಸಭಾ ಚುನಾ ವಣೆಯಲ್ಲಿ ಮಹಿಳೆಯರ ಮತ ಸೆಳೆಯುವ ದುರುದ್ದೇಶದಿಂದಲೇ ಬಜೆಪಿ ಆಡಳಿತಗಾರರು ಮೀಸಲಾತಿಯ ಬಾಣ ಬಿಟ್ಟಿದ್ದಾರೆ ಎಂದು ಹೇಳುವವರೂ ಇದ್ದಾರೆ.

ಮಂಗಳೂರಿಯನ್ ಡಾಟ್ ಕಾಮ್‌ನ ವಾರ್ಷಿಕೋತ್ಸವ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮಂಗಳೂರಿ ಯನ್ ಡಾಟ್ ಕಾಮ್ ಇದರ ಒಂಭತ್ತನೇ ವರ್ಷದ ವಾರ್ಷಿಕೋತ್ಸವ ಮೇ ೧೦ರಂದು ಗುರುವಾರ ಸಂಜೆ ಐದು ಗಂಟೆಗೆ ಮಲ್ಲಿಕಟ್ಟೆ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಮಾಲಕಿ ವಾಯ್ಲೆಟ್ ಪಿರೇರ ತಿಳಿಸಿದ್ದಾರೆ. ಸಮಾರಂಭದಲ್ಲಿ ಡಾ. ಹೆನ್ರಿ ಡಿಸೋಜ, ಈಶವಿಠಲದಾಸ ಸ್ವಾಮೀಜಿ, ಮೌಲಾನ ಅಬ್ದುಲ್ ಅಜೀಜ್ ದಾರಿಮಿ ಭಾಗವಹಿಸಲಿದ್ದಾರೆ.

ಸರಕಾರಿ ಕಚೇರಿಯಲ್ಲಿ ಜೀನ್ಸ್, ಟಿ-ಶರ್ಟ್ ನಿಷಿದ್ಧ!

Posted by JAYAKIRANA Kirana on | 0 comments | Leave a comment...

ಚಂಡೀಗಢ: ಅಸಭ್ಯ ಉಡುಗೆಯಾಗಿರುವ ಜೀನ್ಸ್ ಪ್ಯಾಂಟ್ ಮತ್ತು ಟೀ ಶರ್ಟ್ ಧರಿಸಿ ಕಚೇರಿಗೆ ಬರ ಬೇಡಿ- ಇದು ಹರಿಯಾಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆದೇಶ! ತನ್ನ ಇಲಾಖೆಯ ಅಧೀನದಲ್ಲಿರುವ ಎಲ್ಲ ಕಚೇರಿಗಳ ಸಿಬ್ಬಂದಿ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆದೇಶ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಲಾ ಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಕಚೇರಿಯಲ್ಲಿ ಸಭ್ಯ ಉಡುಗೆಯಲ್ಲೇ ಇರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸರಕಾರಿ ಆದೇಶದ ಪ್ರಕಾರ ಸಭ್ಯ ಉಡುಗೆ ಎಂದರೆ ಮಹಿಳೆಯರಿಗೆ ಸೀರೆ, ದುಪಟ್ಟಾ ಇರುವ ಸಲ್ವಾರ್ ಕಮೀಜ್ ಮತ್ತು ಪುರುಷರಿಗೆ ಪ್ಯಾಂಟ್ ಶರ್ಟ್ ಆಗಿದೆ.
ಎ.೧೮ರಂದು ಹೊರಡಿಸಲಾಗಿರುವ ಆದೇಶದಲ್ಲಿ ತಿಳಿಸಿರುವ ಪ್ರಕಾರ, ಕೆಲವರು ಜೀನ್ಸ್-ಟೀಶರ್ಟ್‌ನಂಥ ಅಸಭ್ಯ ಉಡುಗೆಯಲ್ಲಿ ಕಚೇರಿಗೆ ಬರುವುದು ಇಲಾಖೆಯ ಗಮನಕ್ಕೆ ಬಂದಿದೆ. ಇದು ನೋಡುಗರಿಗೂ ಕಿರಿಕಿರಿ ಉಂಟು ಮಾಡು ತ್ತದೆ, ಸರಕಾರಿ ನಿಯಮವನ್ವೂ ಉಲ್ಲಂಸುತ್ತದೆ ಎಂದು ಹೇಳಲಾಗಿದೆ. ನ್ಯಾಯಾಧೀಶರು, ನ್ಯಾಯವಾದಿಗಳು, ವೈದ್ಯರು ಮುಂತಾದ ಕೆಲವು ವರ್ಗದವರಿಗೆ ಡ್ರೆಸ್‌ಕೋಡ್ ಇದೆ. ಹಾಗಿರುವಾಗ ತನ್ನ ಆದೇಶವನ್ನು ಪಾಲಿಸುವುದು ಕಷ್ಟವಾಗದು ಎಂದೂ ಈ ಆದೇಶ ಹೊರಡಿಸಿರುವ ಮಹಿಳಾ ಕಲ್ಯಾಣ ಸಚಿವೆ ಗೀತಾ ಬುಕ್ಕಲ್ ಹೇಳಿದ್ದಾರೆ.
ಆದೇಶ ಹೊರಡಿಸಿರುವ ಇಲಾಖೆಯ ಅಧೀನ ಕಚೇರಿಗಳಲ್ಲಿ ಸೇವೆ ಸಲ್ಲಿಸುವವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಇದ್ದಾರೆ. ಈ ಆದೇಶ ಅವರನ್ನು ಕೆರಳಿಸಿದೆ. ಆದರೆ ಹೆಚ್ಚಿನ ಸಿಬಂದಿಗಳು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದ ಆದೇಶದ ವಿರುದ್ಧ ಪ್ರತಿಭಟನೆ ನಡೆಸುವ ಧೈರ್ಯ ಅವರಲ್ಲಿಲ್ಲ ಎಂದು ಹೇಳಲಾಗಿದೆ. ಆದರೂ ಈ ಆದೇಶ ಅಲ್ಲಿ ಬೂದಿ ಮುಚ್ಚಿದ ಕೆಂಡದಂಥ ಪರಿಸ್ಥಿತಿ ನಿರ್ಮಿಸಿದೆ.

ಡಿವಿಯವರನ್ನು ಅಧಿಕಾರದಿಂದ ಕೆಳಗಿಳಿಸಲು ಶಾಸಕರ ಸಹಿ ಸಂಗ್ರಹ

Posted by JAYAKIRANA Kirana on | 0 comments | Leave a comment...

ಬೆಂಗಳೂರು: ಮುಖ್ಯಮಂತ್ರಿ ಸದಾನಂದಗೌಡರನ್ನು ಅಧಿಕಾರದಿಂದ ಕೆಳಗಿಳಿಸಲು ಶಾಸಕರ ಸಹಿಸಂಗ್ರಹ ಆರಂಭಗೊಂಡಿದೆ. ಕೃಷಿ ಸಚಿವ ಉಮೇಶ್ ಕತ್ತಿ ನಾಯಕತ್ವದಲ್ಲಿ ಸಹಿಸಂಗ್ರಹ ಆರಂಭಗೊಂಡಿದ್ದು, ಈಗಾಗಲೇ ೨೦ಕ್ಕೂ ಹೆಚ್ಚು ಶಾಸಕರು ಸಹಿ ಹಾಕಿದ್ದಾರೆ.
ಯಡಿಯೂರಪ್ಪ ಬಣದ ಸಚಿವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದು, ಇವರನ್ನು ಪಕ್ಷದಿಂದಲೇ ಉಚ್ಛಾಟಿಸಬೇಕೆಂದು ವರಿಷ್ಠರಿಗೆ ಮುಖ್ಯಮಂತ್ರಿ ಹಾಗೂ ಈಶ್ವರಪ್ಪ ಬರೆದಿರುವ ಪತ್ರದ ಬಗ್ಗೆ ಚರ್ಚೆ ನಡೆಸಬೇಕೆಂದು ಸಭೆ ಕರೆಯಿರಿ ಎಂದು ಒತ್ತಾಯ ಮಾಡಿದ್ದಾರೆ. ಆದರೆ ಇದರ ಮೂಲ ಉದ್ದೇಶ ಸದಾನಂದಗೌಡ ಶಾಸಕಾಂಗ ಪಕ್ಷದ ಸಭೆ ಕರೆದರೆ ಅಲ್ಲಿಯೇಅವರ ವಿರುದ್ಧ ಅವಿಶ್ವಾಸ ಮಂಡನೆ ಮಾಡುವುದು ಯಡಿಯೂರಪ್ಪ ಗುಂಪಿನ ಗುರಿಯಾಗಿದೆ. ಈ ಉದ್ಧೇಶದಿಂದಲೇ ೨೦ಕ್ಕೂ ಹೆಚ್ಚು ಶಾಸಕರು ಸಹಿ ಮಾಡಿ ತುರ್ತು ಶಾಸಕಾಂಗ ಸಭೆ ಕರೆಯುವಂತೆ ಆಗ್ರಹಿಸುತ್ತಿದ್ದಾರೆ.

ಮಧುರೈ ಪೀಠಕ್ಕೆ ನಿತ್ಯಾನಂದ: ಕಂಚಿಶ್ರೀ ವಿರೋಧ

Posted by JAYAKIRANA Kirana on | 0 comments | Leave a comment...

ಕೃಷ್ಣಗಿರಿ: ದೇಶದ ಪುರಾತನ ಮಠಗಳಲ್ಲಿ ಒಂದಾಗಿರುವ ಅಧುರೈ ಆಧಿನಂನ ಮಖ್ಯಸ್ಥರಾಗಿ ತ್ಯಾನಂದ ಸ್ವಾಮಿಯ ನೇಮಕ ಕಂಚಿ ಶ್ರೀ ಜಯೇಂದ್ರ ಸರಸ್ವತಿ ವಿರೋಧಿಸಿದ್ದಾರೆ.
ಖ್ಯಾತ ಸಂತ ತಿರ್ eನ್‌ಸಮಂಧರ್‌ರಂತಹವರು ಈ ಮಠಕ್ಕೆ ಮುಖ್ಯಸ್ಥರಾಗಿದ್ದರು. ಇದರ ಫೀಠಾಧೀಶರು ಕೇಶಮುಂಡನ ಮಾಡಿಸಿಕೊಂಡು ರುದ್ರಾಕ್ಷಿ ಧರಿಸಬೇಕು. ನಿತ್ಯಾನಂದ ಸ್ವಾಮಿ ಕೇಶ ಮುಂಡನ ಮಾಡಿಸಿಕೊಂಡಿಲ್ಲ ಮತ್ತು ಲೈಂಗಿಕ ಹಗರಣದಲ್ಲಿ ಆರೋಪ ಎದುರಿಸುತ್ತಿದ್ದಾರೆ. ಮಠದ ಮುಖ್ಯಸ್ಥರಾಗಿ ಇವರ ನೇಮಕ ಸ್ವೀಕಾರ ಯೋಗ್ಯವಲ್ಲ ಎಂದು ಅವರು ಹೇಳಿದ್ದಾರೆ. ಪ್ರಸಕ್ತ ನಂದನ ಆಧ್ಯಾತ್ಮ ವರ್ಷಕ್ಕೆ ತಮಿಳುನಾಡು ಬ್ರಾಹ್ಮಣರ ಸಂಘ ಸಿದ್ಧಪಡಿಸಿದ ಪಂಚಾಂಗ ಬಿಡು ಗಡೆಗೆ ಶಂಕರ ಮಠಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಸರ್ಕಾರಿ ಕೋಟಾದಡಿ ವೈದ್ಯರಾದವರು ಒಂದು ವರ್ಷ

Posted by JAYAKIRANA Kirana on | 0 comments | Leave a comment...

ಗ್ರಾಮಾಂತರ ಪ್ರದೇಶದಲ್ಲಿ ವೈದ್ಯರಾಗಲು ಸುಗ್ರೀವಾಜ್ಞೆ
ಬೆಂಗಳೂರು: ಸರ್ಕಾರಿ ಕೋಟಾದಡಿ ವೈದ್ಯಕೀಯ ಶಿಕ್ಷಣ ಮುಗಿಸಿದ ನಂತರ ಒಂದು ವರ್ಷ ಕಾಲ ಗ್ರಾಮಾಂತರ ಪ್ರದೇಶಗಳಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸದಿದ್ದರೆ ೨೫ ಲಕ್ಷ ರೂ ದಂಡ ವಿಧಿಸಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಿದೆ.
ಈ ಕುರಿತ ಕರಡು ಮಸೂದೆ ಸಿದ್ಧಗೊಂಡಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ರಾಜ್ಯಪಾಲರ ಅಂಗೀಕಾರಕ್ಕೆ ಕಳುಹಿಸಿಕೊಡಲು ಸರ್ಕಾರ ನಿರ್ಧರಿಸಿದೆ.
ರಾಜ್ಯದಲ್ಲಿ ವೈದ್ಯರ ಕೊರತೆ ಅಗಾಧವಾಗಿ ಕಾಡುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಸರ್ಕಾರಿ ಕೋಟಾದಡಿ ಪದವಿ ಪಡೆದವರು ಒಂದು ವರ್ಷ ಗ್ರಾಮಾಂತರ ಪ್ರದೇಶದಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ.
ಸರ್ಕಾರಿ ಆದೇಶ ಉಲ್ಲಂಘಿಸಿದಲ್ಲಿ ಸ್ನಾತಕೋತ್ತರ ವೈದ್ಯ ಕೀಯ ಪದವಿ ಪಡೆದವರು ೨೫ ಲಕ್ಷ ರೂ.ಗಳನ್ನು ಎಂಬಿಬಿಎಸ್ ಪದವಿ ಪಡೆದವರು ೨೦ ಲಕ್ಷ ರೂ. ಭಾರತೀಯ ವೈದ್ಯಕೀಯ ಪದ್ಧತಿ ಪದವೀಧರರು ೧೫ ಲಕ್ಷ ರೂ. ಹಾಗೂ ನರ್ಸ್‌ಗಳು ೬ ಲಕ್ಷ ರೂ. ಸರ್ಕಾರಕ್ಕೆ ದಂಡ ಪಾವತಿಸಿ ಪದವಿ ಪತ್ರ ಪಡೆಯ ಬೇಕಾ ಗುತ್ತದೆ.
ಪ್ರಸಕ್ತ ವರ್ಷದಿಂದಲೇ ಈ ನಿಯಮ ಜಾರಿಯಾಗಲಿದ್ದು ಸ್ನಾತಕೋತ್ತರ ಹಾಗೂ ಎಂಬಿಬಿಎಸ್ ಪೂರ್ಣಗೊಳಿಸಿದ ೩೩೦೦ ಪದವೀಧರರು ಹಾಗೂ ೪ ಸಾವಿರ ನರ್ಸ್‌ಗಳು ಗ್ರಾಮಾಂತರ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ.
ಸರ್ಕಾರದ ಈ ನಿರ್ಧಾರದಿಂದ ಪ್ರಸಕ್ತ ವರ್ಷದಿಂದಲೇ ಗ್ರಾಮೀಣ ಪ್ರದೇಶಕ್ಕೆ ಹೆಚ್ಚುವರಿ ವೈದ್ಯರು ಲಭ್ಯವಾಗಲಿದ್ದು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಿಡಿದು ಜಿಲ್ಲಾ ಮಟ್ಟದ ಆಸ್ಪತ್ರೆಗಳ ವೈದ್ಯರ ಕೊರತೆ ನೀಗಲಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಿನದ ೨೪ ಗಂಟೆ ೨ ವೈದ್ಯರು ಕೆಲಸ ಮಾಡಲಿದ್ದಾರೆ.
ಮುಂದಿನ ದಿನಗಳಲ್ಲಿ ರಾಜ್ಯದ ಖಾಸಗಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ವೈದ್ಯಕೀಯ ಪದವಿ ಪಡೆದ ಪದವೀದರರನ್ನು ಕಾಯ್ದೆ ವ್ಯಾಪ್ತಿಗೆ ತರುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಅದ್ಯಾದೇಶದ ಮೂಲಕ ಈ ಆದೇಶ ಹೊರಡಿಸಿ ಮುಂಬರುವ ಅಧಿವೇಶನದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಕಾನೂನಿಗೆ ತಿದ್ದುಪಡಿ ತಂದು ಮಸೂದೆ ಜಾರಿಗೆ ತರಲು ತೀರ್ಮಾನಿಸಲಾಗಿದೆ.
ರಾಜ್ಯ ಸರ್ಕಾರದ ಈ ನಿರ್ಧಾರದ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಂ ನಬಿ ಆಜಾದ್ ಪ್ರಶಂಸೆ ವ್ಯಕ್ತಪಡಿಸಿದ್ದು ಕರ್ನಾಟಕದಲ್ಲಿ ತರುತ್ತಿರುವ ಕಾನೂನನ್ನೇ ಇಡೀ ರಾಷ್ಟ್ರಕ್ಕೆ ತರುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ.
ಹಾಲಿ ವೈದ್ಯರಿಗೆ ನೀಡುವ ವೇತನದಲ್ಲಿ ನೂರರಿಂದ ೨೦೦ ರೂ. ಮಾತ್ರ ತಾತ್ಕಾಲಿಕ ಸೇವೆಗೆ ಬರುವವರಿಗೆ ವೇತನ ದೊರೆಯ ಲಿದೆ. ಸರ್ಕಾರದ ಮೂಲಗಳ ಪ್ರಕಾರ ಹೀಗೆ ಮೂರು ಸಾವಿರಕ್ಕೂ ಅಧಿಕ ಮಂದಿ ಸರ್ಕಾರಿ ಸೇವೆಗೆ ಹಾಜರಾಗುವ ಹಿನ್ನೆಲೆಯಲ್ಲಿ ಬೊಕ್ಕಸದ ಮೇಲೆ ಆರು ನೂರು ಕೋಟಿ ರೂಗಳಷ್ಟು ಹೆಚ್ಚುವರಿ ಹೊರೆ ಬೀಳಲಿದೆ.

ಸಮಸ್ಯೆಗಳ ಆಗರವಾಗುತ್ತಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ

Posted by JAYAKIRANA Kirana on | 0 comments | Leave a comment...

ನೊಂದ ಪ್ರಯಾಣಿಕ, ಮಂಗಳೂರು
ಮಂಗಳೂರಿನ ಲಾಲ್‌ಬಾಗ್‌ನಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರುಗಡೆಯ ರಸ್ತೆಯಲ್ಲಿ ಖಾಸಗಿ ಪ್ರಯಾಣಿಕ ಬಸ್‌ಗಳನ್ನು ಸಾಲಾಗಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುವುದು ಹತ್ತಿಸಿಕೊಳ್ಳುವುದರಿಂದ ರಸ್ತೆಯಲ್ಲಿ ಸುಗಮ ವಾಹನ ಸಂಚಾರ ಹಾಗೂ ನಾಗರಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ.
ಈ ಹಿಂದೆ ಕೂಡ ಇದೇ ರೀತಿ ತೊಂದರೆ ಆಗುತ್ತಿರು ವುದನ್ನು ಮನಗಂಡು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಆದೇಶವೊಂದನ್ನು ಹೊರಡಿಸಿ ಮಂಗಳೂರು ನಗರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂದು ಗಡೆಯ ರಸ್ತೆಯಲ್ಲಿ ಎರಡೂ ಕಡೆ ೩೦೦ ಮೀಟರ್ ದೂರದವರೆಗೆ ಈ ಕೆಳಕಂಡಂತೆ ಪ್ರಯಾಣಿಕರ ಸಾರಿಗೆ ವಾಹನಗಳ ನಿಲುಗಡೆ ಯನ್ನು ಪೂರ್ಣವಾಗಿ ನಿಷೇಧಿಸಿದ್ದರು. ಅವೆಂದರೆ:
೧. ಮಂಗಳೂರು ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರಿನ ರಸ್ತೆಯಿಂದ ಲಾಲ್‌ಭಾಗ್ ಕೂಡುರಸ್ತೆ ಹಾಗೂ ಬಿಜೈ ಚರ್ಚ್-ಬೋಂದೆಲ್ ಕಡೆಗೆ ಹೋಗುವ ರಸ್ತೆ. ೨. ಬಿಜೈ ಕಾಪಿಕಾಡು ಬಾಳಿಗಾ ಸ್ಟೋರ‍್ಸ್ ರಸ್ತೆ.
ಅದರಂತೆ ಇತ್ತಿಚೆಗಿನವರೆಗೆ ಸದ್ರಿ ರಸ್ತೆಗಳಲ್ಲಿ ಖಾಸಗಿ ಬಸ್ ಗಳನ್ನು ನಿಲುಗಡೆಗೊಳಿಸುತ್ತಿರಲಿಲ್ಲ. ಆದರೆ ಇತ್ತಿಚಿನ ದಿನಗಳಲ್ಲಿ ಅಖಿಲ ಭಾರತೀಯ ಪರವಾನಿಗೆಯ ಬಸ್‌ಗಳನ್ನು ನಿಲುಗಡೆ ಗೊಳಿಸಲಾಗುತ್ತಿದೆ. ಮುಖ್ಯವಾಗಿ ಮಧ್ಯಾಹ್ನ ೧೨ ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗಿನ ಅವಧಿಯಲ್ಲಿ ಹಾಗೂ ರಾತ್ರಿ ಎಂಟು ಗಂಟೆಯಿಂದ ೧೧.೩೦ ಗಂಟೆಯವರೆಗಿನ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರುಗಡೆ ಇವುಗಳನ್ನು ನಿಲುಗಡೆಗೊಳಿಸಲಾಗುತ್ತಿದೆ.
ಸದ್ರಿ ಖಾಸಗಿ ಬಸ್‌ಗಳಲ್ಲಿ ಚಾಲಕ-ನಿರ್ವಾಹಕರು ಮಾತ್ರ ವಲ್ಲದೆ ಲೋಡರ್‌ಗಳು ಕೂಡ ಕರ್ತವ್ಯ ನಿರ್ವಹಿಸು ತ್ತಿದ್ದಾರೆ. ಈ ಬಸ್‌ಗಳನ್ನು ಬಸ್ ನಿಲ್ದಾಣದ ಪ್ರವೇಶದ್ವಾರದ ಎದುರು ಗಡೆಯ ರಸ್ತೆಯಲ್ಲೆ ನಿಲುಗಡೆಗೊಳಿಸಿ, ಕೆಎಸ್‌ಆರ್‌ಟಿಸಿ ನಿಲ್ದಾಣ ದೊಳಗೆ ಬರುವ ಪ್ರಯಾಣಿಕರನ್ನು ಕೂಡ ಕೂಗಿ ಕರೆದು ಖಾಸಗಿ ಬಸ್‌ಗಳತ್ತ ಸೆಳೆಯುತ್ತಿದ್ದಾರೆ. ಖಾಸಗಿ ಬಸ್‌ನವರು ಈ ರೀತಿಯಾಗಿ ತಮ್ಮ ಬಸ್‌ಗಳನ್ನು ನಿಲ್ದಾಣದ ಎದುರು ರಸ್ತೆಯಲ್ಲಿಯೇ ನಿಲುಗಡೆಗೊಳಿಸಿ ಪ್ರಯಾಣಿಕರನ್ನು ಸೆಳೆಯು ತ್ತಿರುವುದರಿಂದ ಅಲ್ಲಿ ಆಗಾಗ ರಸ್ತೆ ತಡೆ ಉಂಟಾಗಲು ಕಾರಣ ವಾಗುತ್ತಿದೆ. ಹಾಗೂ ಇದರಿಂದಾಗಿ ಬಸ್ ನಿಲ್ದಾಣದ ಬಳಿಯಲ್ಲಿ ಪ್ರಯಾಣಿಕರು ಮತ್ತು ಖಾಸಗಿ ಬಸ್ ಸಿಬ್ಬಂದಿಗಳು ಹಾಗೂ ನಿಗಮದ ಸಿಬ್ಬಂದಿಯ ಮಧ್ಯೆ ಮನಸ್ತಾಪ ಉಂಟಾಗಿ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ. ಹಲವು ಬಾರಿ ಇಂತಹ ಘಟನೆಗಳು ಸಂಭವಿಸಿ ಶಾಂತಿಭಂಗ ಉಂಟಾಗಿವೆ.
ಇಷ್ಟೇ ಅಲ್ಲದೆ ಇಲ್ಲಿ ಯಾವಾಗ ನೋಡಿದರೂ ಕುಡುಕರ ಹಾವಳಿ ತಪ್ಪಿದಲ್ಲ. ಹಗಲಿನ ಹೊತ್ತೇ ಇಲ್ಲಿ ರಸ್ತೆಯಲ್ಲಿ ನಡೆದಾಡಲು ಹೆಣ್ಣುಮಕ್ಕಳಿಗೆ ಭಯವಾಗುತ್ತದೆ. ರಾತ್ರಿಯಂತೂ ಕುಡುಕರ ಸೈನ್ಯವೇ ಇಲ್ಲಿ ನೆರೆದಿರುತ್ತದೆ. ಕೆಲಸಕ್ಕೆಂದು ಹೊರಗಡೆಯಿಂದ ಬಂದ ಕಾರ್ಮಿಕರೇ ಎದುರು ಫುಟ್‌ಪಾತ್‌ನಲ್ಲಿ ತುಂಬಿಕೊಂಡಿ ದ್ದಾರೆ. ಹೆಚ್ಚಿನ ಕಾರ್ಮಿಕರ ನೆಲೆಯೇ ಎಂದರೆ ತಪ್ಪಿಲ್ಲ. ಬೆಳಗ್ಗೆ ಕುಡಿದು ತೂರಾಡುತ್ತಿರುವ ಇವರ ಬಾಯಿಯಿಂದ ಅವಾಚ್ಯ ಶಬ್ದಗಳು ಬರುತ್ತಿರುತ್ತದೆ. ಇದರಿಂದ ಅಪರೂಪಕ್ಕೆಂದು ಮಂಗ ಳೂರಿಗೆ ಬಂದ ದೂರ ಪ್ರಯಾಣಿಕರು ಇಲ್ಲಿನ ಪರಿಸ್ಥಿತಿಯನ್ನು ನೋಡಿ ಮಂಗಳೂರು ಎಂದರೆ ಹೀಗೇನಾ ಎನ್ನುವಂತಹ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಇದಕ್ಕೆ ಸಂಬಂಧಪಟ್ಟವರು ಇದರತ್ತ ಗಮನಹರಿಸಬೇಕು.
ಅಲ್ಲದೆ ಬಸ್ ನಿಲ್ದಾಣದ ಬಳಿ ಒಂದಲ್ಲ ಒಂದು ಕಾಮಗಾರಿ ನಡೆಯುತ್ತಲೇ ಇರುತ್ತದೆ. ಕಾಮಗಾರಿ ಪೂರ್ತಿಯಾಗಲು ಮಾತ್ರ ತುಂಬಾ ಸಮಯ ತೆಗೆದುಕೊಳ್ಳುತ್ತಾರೆ. ಇದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ತುಂಬಿ ತುಳುಕುತ್ತಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಯಾವುದೇ ಕಾಮಗಾರಿ ಮಾಡಿ ದರೂ ಆದಷ್ಟು ಬೇಗ ಮುಗಿಸಿ ಪ್ರಯಾಣಿಕರಿಗೆ ತೊಂದರೆ ಯಾಗದಂತೆ ನೋಡಿಕೊಳ್ಳಬೇಕು. ಆದುದರಿಂದ ಸಾರ್ವಜನಿಕರು ಹಾಗೂ ಕೆಎಸ್‌ಆರ್‌ಟಿಸಿ ಹಿತದೃಷ್ಟಿಯಿಂದ ಪೊಲೀಸ್ ಅಧೀಕ್ಷಕರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರುಗಡೆ ಖಾಸಗಿ ಬಸ್ ಗಳನ್ನು ನಿಲುಗಡೆಗೊಳಿಸುವುದನ್ನು ನಿಷೇಧಿಸಿ, ನಿಯಮ ಉಲ್ಲಂಘಿಸುವ ಖಾಸಗಿ ಪ್ರವರ್ತಕರ ಮೇಲೆ ಕ್ರಮ ತೆಗೆದು ಕೊಳ್ಳಬೇಕೆಂದು ವಿನಂತಿ.

ಅವರ ಬುದ್ದಿ ಇವರಿಗೇಕೆ ಇಲ್ಲ?

Posted by JAYAKIRANA Kirana on | 0 comments | Leave a comment...

ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎಂಬ ಗಾದೆ ಇದೆ. ಇದೇ ಗಾದೆಯನ್ನು ಕಾಂಗ್ರೆಸಿಗರು ಅನುಸರಿಸಿದ್ದಾದರೆ ದ.ಕ. ಜಿಲ್ಲೆಯಲ್ಲಿ ಪಕ್ಷ ಅದೆಷ್ಟು ಗಟ್ಟಿಯಾಗಿರುತ್ತಿತ್ತು. ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಪಕ್ಷ ಸಂಘಟನೆಗಾಗಿ ಮಂತ್ರಿ ಪಟ್ಟ ತೊರೆಯಲು ಸಿದ್ಧರಾಗಿದ್ದಾರೆ. ಆದರೆ ಇಂತಹ ತ್ಯಾಗ ದ.ಕ. ಜಿಲ್ಲೆಯಲ್ಲಿ ಕಾಣಬಹುದೇ.
ಗುಲಾಂ ನಬಿಆಝಾದ್, ವಯಲಾರ್ ರವಿ, ಜೈರಾಂ ರಮೇಶ್, ಸಲ್ಮಾನ್ ಖುರ್ಷಿದ್, ನಾರಾಯಣ ಸ್ವಾಮಿಯಂತಹ ಘಟಾನುಘಟಿಗಳು ಪಕ್ಷದ ಸಂಘಟನೆಗಾಗಿ ಕೇಂದ್ರ ಸಂಪುಟದಿಂದ ಹೊರಬರಲು ಸಿದ್ಧರಾಗಿದ್ದಾರೆ ಎಂಬ ವರದಿ ಬಂದಿದೆ. ಆಸ್ಕರ್ ಫೆರ್ನಾಂಡಿಸ್ ತಾನು ಮಂತ್ರಿಯಾಗುವುದಿಲ್ಲ ಪಕ್ಷದ ಸಂಘಟನೆ ಮಾಡುತ್ತೇನೆ ಎಂದು ನಾಲ್ಕು ವರ್ಷಗಳ ಹಿಂದೆಯೇ ಹೇಳಿದ್ದರು. ಇದಕ್ಕಿಂತ ಹೆಚ್ಚಾಗಿ ಸೋನಿಯಾ ಗಾಂಧಿಯ ತ್ಯಾಗವನ್ನು ಕಾಂಗ್ರೆಸಿಗರು ನೆನೆಯುತ್ತಾರೆ. ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಬಾರದು ಎಂದು ಸೋನಿಯಾ ಪ್ರಧಾನ ಮಂತ್ರಿಯಾಗುವ ಅವಕಾಶ ತ್ಯಾಗ ಮಾಡಿದರು. ಇದನ್ನು ತ್ಯಾಗ ಎನ್ನುವ ಸ್ಥಳೀಯ ನಾಯಕರು ಇದನ್ನೇ ಮಾದರಿಯಾಗಿ ಅನುಸರಿಸಲು ಮಾತ್ರ ಹಿಂಜರಿಯುತ್ತಾರೆ.
ದ.ಕ. ಜಿಲ್ಲೆಯಲ್ಲಿ ಸಂಘಟನೆಗಾಗಿ ಅಧಿಕಾರ ತ್ಯಾಗ ಮಾಡುವುದು ದೂರ, ಅಧಿಕಾರ ಇದ್ದವರೇ ಸಂಘಟನೆಯಲ್ಲಿ ತೊಡಗುವುದಿಲ್ಲ. ಅವರವರ ಗುಂಪು ಕಟ್ಟಿಕೊಂಡು ಸಾಗುತ್ತಾರೆ ಎಂಬ ಆರೋಪ ಪಕ್ಷದ ಕಾರ್ಯಕರ್ತ ರದ್ದು. ಪಕ್ಷಕ್ಕಾಗಿ ದುಡಿಯುವವರು ಇದ್ದಾರಾದರೂ ಅವರನ್ನು ಬಳಸಿ ಕೊಳ್ಳುವ ಇರಾದೆ ನಾಯಕರಿಗಿಲ್ಲ. ಅವರು ಸಂಘಟನೆಗೆ ದುಡಿದು ವರ್ಚಸ್ಸು ಹೆಚ್ಚಿಸಿಕೊಂಡರೇ ಎಂಬ ಭಯ ಅಧಿಕಾರದಲ್ಲಿರುವ ನಾಯಕರಿಗೆ.
ರಾಜ್ಯದಲ್ಲೀಗ ಕಾಂಗ್ರೆಸ್‌ಗೆ ಪೂರಕ ವಾತಾವರಣ ಇದೆ. ಆದರೆ ಕಾಂಗ್ರೆಸ್ ನಾಯಕರು ಇದರ ಲಾಭ ಪಡೆಯಲು ಸಿದ್ಧರಾದಂತಿಲ್ಲ ಎಂಬ ಬೇಸರವನ್ನು ಪಕ್ಷದ ಕಾರ್ಯಕರ್ತರು ವ್ಯಕ್ತಪಡಿಸುತ್ತಿದ್ದಾರೆ. ಪಕ್ಷದ ಜಿಲ್ಲಾ ಅಧ್ಯಕ್ಷ ರಮಾನಾಥ ರೈ ತನ್ನದೆ ಹೊಗಳು ಭಟರ ಗುಂಪು ದೊಡ್ಡದು ಮಾಡಿಕೊಳ್ಳುತ್ತಾ ಸಾಗಿದರೆ, ಜನಾರ್ದನ ಪೂಜಾರಿಯಂತಹ ನಾಯಕರು ಅಧಿಕಾರಕ್ಕಾಗಿ ಹಾತೊರೆಯುತ್ತ ನಾನಾ ಸರ್ಕಸ್ ಮಾಡುತ್ತಿದ್ದಾರೆ. ಜನಾರ್ದನ ಪೂಜಾರಿ ಮನಸ್ಸು ಮಾಡಿದರೆ ಜಿಲ್ಲೆಯಲ್ಲಿ ಪಕ್ಷವನ್ನು ಅತ್ಯುತ್ತಮ ಎನ್ನುವ ರೀತಿಯಲ್ಲಿ ಸಂಘಟಿಸಬಹುದು ಅದಕ್ಕಿನ್ನೂ ಕಾಲ ಮಿಂಚಿಲ್ಲ. ರಮಾನಾಥ ರೈ ಏನೇ ಆಟ ಆಡಿದರೂ ಪೂಜಾರಿ ವರ್ಚಸ್ಸು ಹಾಗೆಯೇ ಉಳಿದಿದೆ. ಆದರೆ ಅವರು ಪಕ್ಷಕ್ಕೆ ಲಭ್ಯರಾಗುತ್ತಿಲ್ಲ ಎಂಬುದು ಕಾರ್ಯಕರ್ತರ ಬೇಸರ.
ಕಾಂಗ್ರೆಸ್‌ನ ಹಿರಿಯ ನಾಯಕರೋರ್ವರ ಅಭಿಪ್ರಾಯ ಹೀಗಿದೆ, ಕೇಂದ್ರದಲ್ಲಿ ಕೆಲವರು ಮಂತ್ರಿ ಸ್ಥಾನ ಬಿಟ್ಟು ಪಕ್ಷದ ಸಂಘಟನೆಗೆ ಬರುತ್ತಾರೆ ಎಂದ ಮಾತ್ರಕ್ಕೆ ಜಾದು ನಡೆಯುವುದಿಲ್ಲ. ಆಸ್ಕರ್ ಫೆರ್ನಾಂಡಿಸ್ ಪಕ್ಷದ ಸಂಘಟನೆ ಮಾಡುತ್ತೇನೆ ಎಂದರು ಮಾಡಿದ್ದೇನು ಎಂಬುದು ಕಣ್ಣಿಗೆ ಕಾಣುತ್ತಿದೆ. ತನ್ನದೆ ಜಿಲ್ಲೆಯಲ್ಲಿ ಕಾರ್ಯಕರ್ತರ ಅಶಯಕ್ಕೆ ಸ್ಪಂದಿಸ ಲಾಗದವರು ಇನ್ನೇನು ಮಾಡುತ್ತಾರೆ. ವೇದಿಕೆಯಲ್ಲಿ ಭಾಷಣ ಮಾಡಿದ ಮಾತ್ರಕ್ಕೆ ಪಕ್ಷದ ಸಂಘಟನೆಯಾಗುವುದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆಂದರೆ ಆಡಳಿತಾರೂಢ ಬಿಜೆಪಿಯಲ್ಲಿ ಇನ್ನಷ್ಟು ಗೊಂದಲಗಳು ಹೆಚ್ಚಾಗಬೇಕು. ಉಡುಪಿಯಲ್ಲಿ ಜಯಪ್ರಕಾಶ್ ಹೆಗ್ಡೆಯ ಗೆಲುವು ಇಂತಹದ್ದೇ ಗೊಂದಲದ ಪರಿಣಾಮದಿಂದ ಒಲಿದು ಬಂತು.
 ಈಗ ಅಧಿಕಾರ ತ್ಯಜಿಸಿ ಸಂಘಟನೆಗೆ ಬರುತ್ತಿರುವವರು ಮಾಸ್ ನಾಯಕರೇನೂ ಅಲ್ಲ. ಸೋನಿಯಾ ಗಾಂಧಿಗೆ ಹತ್ತಿರದಲ್ಲಿ ಇದ್ದಾರೆ ಎಂಬ ಒಂದೇ ಕಾರಣದಿಂದ ಪಕ್ಷದಲ್ಲಿ ಗೌರವ ಸಂಪಾದಿಸಿರುವರು. ಇವರು ಬಂದರೆ ಕಾರ್ಯಕರ್ತರು ಸೇರುವುದಿಲ್ಲ. ಇವರಿಗೆ ಅಧಿಕಾರ ಇಲ್ಲದೆ ಬಹಳಷ್ಟು ಸಮಯ ಕಳೆಯಲೂ ಆಗುವುದಿಲ್ಲ. ಜವಾಹರಲಾಲ್ ನೆಹರೂ ಕಾಲದಲ್ಲಿಯೂ ಇಂತಹ ಪ್ರಯೋಗ ನಡೆದಿತ್ತು. ಅಧಿಕಾರ ತ್ಯಜಿಸಿದವರೇ ಮತ್ತೆ ಅಧಿಕಾರಕ್ಕಾಗಿ ನೆಹರೂರವರ ಕಾಲು ಹಿಡಿದಿ ದ್ದರು.

ರಾಹುಲ್ ಗಾಂಧಿಯೇ ಬರುತ್ತಿದ್ದಾರೆ
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಹೀನಾಯ ಸೋಲು ರಾಹುಲ್ ಗಾಂಧಿಯಂಥವರನ್ನು ಕಂಗೆಡಿಸಿದರೂ ರಾಹುಲ್ ಗಾಂಧಿಯಲ್ಲಿ ರಾಜಕೀಯ ಮುತ್ಸದ್ಧಿತನವಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಲಕ್ಷಣವಿದೆ. ಇದನ್ನೇ ಮುಂದಿಟ್ಟುಕೊಂಡು ರಾಹುಲ್ ಇಲ್ಲಿ ಪದೇ ಪದೇ ಕಾಣಿಸಿಕೊಂಡರೆ ಇಲ್ಲಿಯ ಗೆಲುವಿಗೆ ರಾಹುಲ್ ಕಾರಣ ಎಂದು ಕಾಂಗ್ರೆಸಿಗರಿಗೆ ಹೇಳಿಕೊಳ್ಳಲು ನೆಪ ಸಿಗುತ್ತದೆ. ರಾಹುಲ್ ವರ್ಚಸ್ಸೂ ಹೆಚ್ಚುತ್ತದೆ. ಅಸಲಿಗೆ ಇಲ್ಲಿ ಪರಿಸ್ಥಿತಿ ಬೇರೆಯೇ ಇದೆ. ಬಿಜೆಪಿಯನ್ನು ಸೋಲಿಸಲು ಯಡಿಯೂರಪ್ಪ, ಶ್ರೀರಾಮುಲು ಕಾದು ಕೂತಿದ್ದಾರೆ. ಇಲ್ಲಿ ಪ್ರತಿಪಕ್ಷಗಳು ಇಲ್ಲದಿದ್ದರೂ ಬಿಜೆಪಿ ಸೋತು ಸುಣ್ಣಗಾಗುವ ಹಂತಕ್ಕೆ ಬಂದಿದೆ. ಯಡಿಯೂರಪ್ಪ ಮಾಡಿರುವ ಬ್ರಹ್ಮಾಂಡ ಭ್ರಷ್ಟಾಚಾರ, ಆರೆಸೆಸ್‌ನ ಭ್ರಷ್ಟಾಚಾರವನ್ನು ಸಹಿಸಿಕೊಳ್ಳುವ ಗುಣ ಮೂಲ ಬಿಜೆಪಿಗನನ್ನು ಆಕ್ರೋಶಕ್ಕೆ ಈಡು ಮಾಡಿದೆ. ಇಂಥ ಸ್ಥಿತಿಯಲ್ಲಿ ರಾಹುಲ್ ಕರ್ನಾಟಕಕ್ಕೆ ಬಂದು ಕಾಂಗ್ರೆಸಿಗೆ ಜೀವಾಮೃತ ನೀಡುತ್ತಾರೆಯೇ ಎನ್ನುವುದನ್ನು ಮುಂದಿನ ದಿನಗಳೇ ಹೇಳಬೇಕು.

ಎಲ್ಲಿದ್ದಾರೆ ಮಾಸ್ ಲೀಡರ್‌ಗಳು?
ಏನೇ ಅಂದರೂ ಕಾಂಗ್ರೆಸಿನಲ್ಲಿ ಅಧಿಕಾರಕ್ಕಾಗಿ ಹಾತೊರಿಯುವವರ ಸಂಖ್ಯೆ ಸಣ್ಣದೇನಲ್ಲ. ಮೊನ್ನೆ ಮೊನ್ನೆ ಕುರುಬರ ಸಮ್ಮೇಳನದಲ್ಲಿ ಸಿದ್ದರಾಮಯ್ಯರಂಥವರೇ ಆವಾಜ್ ಹಾಕುತ್ತಿದ್ದಾರೆ. ಯಡಿಯೂರಪ್ಪ ಜಾತಿ ಸಮ್ಮೇಳನವನ್ನು ನಡೆಸಿದ ರೀತಿಯಲ್ಲೇ ಸಿದ್ದು ತೆರೆಮರೆಯಲ್ಲಿ ಕುರುಬರ ಸಮ್ಮೇಳನ ಆಯೋಜಿಸಿ ನೆರದವರಿಂದ ಸಿದ್ದು ಮುಖ್ಯಮಂತ್ರಿಯಾಗಲೇ ಬೇಕು ಎಂಬ ಸಂದೇಶ ರವಾನಿಸುತ್ತಿದ್ದಾರೆ. ದಲಿತ ಪರಮೇಶ್ವರ್ ಅವರಿಗೂ ಈ ಬೆಳವಣಿಗೆ ಇರಿಸುಮುರಿಸು ತಂದರೂ ಅದನ್ನು ಎದುರು ತೋರಿಸುವ ಹಾಗಿರಲಿಲ್ಲ. ಆದರೂ ಕಾಂಗ್ರೆಸ್ ಇನ್ನೂ ಅಧಿಕಾರದ ಹೊಸ್ತಿಲಿಗೆ ಬಂದಿಲ್ಲ. ಬಿಜೆಪಿಯ ದೌರ್ಬಲ್ಯವೇ ಸಾಕು ತಾನು ಅಧಿಕಾರಕ್ಕೆ ಬರಲು ಎಂದು ಇಲ್ಲಿನ ಕಾಂಗ್ರೆಸು ಬಲವಾಗಿ ನಂಬಿಕೊಂಡಿದೆ. ಹಾಗಾಗಿಯೇ ಕಾಂಗ್ರೆಸಿಗೆ ಸದ್ಯಕ್ಕೆ ಮಾಸ್ ಲೀಡರುಗಳ ಅಗತ್ಯ ಇಲ್ಲ ಎಂದು ನಂಬಿಕೊಂಡಿದೆ. ಸಿದ್ದರಾಮಯ್ಯಗೆ ಮಾಸ್ ಲೀಡರ್ ಆಗುವ ಎಲ್ಲಾ ಯೋಗ್ಯತೆಗಳಿದ್ದರೂ ಅವರ ಹಿಂದೆಯೂ ಕುರುಬ ಸಮುದಾಯದ ಗುಂಪು ಇದೆ. ಇವ ನಮ್ಮವ ಎನ್ನುತ್ತಿದೆ. ಇಂಥ ಸಂದೇಶ ಒಮ್ಮೆ ರವಾನೆಯಾಯಿತೆಂದರೆ ಮಾಸ್ ಲೀಡರ್ ಆಗುವುದು ಕಷ್ಟ ಎನ್ನುವುದು ಸಿದ್ದುಗೂ ಗೊತ್ತಿದೆ. ಅದಕ್ಕಾಗಿಯೇ ಮೊನ್ನೆಯ ಕುರುಬರ ಸಮ್ಮೇಳನದಲ್ಲಿ ತಾನು ಜಾತಿವಾದಿಯಲ್ಲ ಎಂದು ಪದೇ ಪದೇ ಸಿದ್ದು ಹೇಳುತ್ತಿದ್ದದ್ದು. ಯಡಿಯೂರಪ್ಪ ಅವರಿಗಿದ್ದ ಮಾಸ್ ಲೀಡರ್ ಇಮೇಜು ಸಿದ್ದರಾಮಯ್ಯಗೂ ಒಂದು ಹಂತದ ತನಕ ಇತ್ತು. ಆದರೆ ಇನ್ನೂ ಮುಂದೆಯೂ ಹೀಗೆ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಇತರರಾದರೆ ಪ್ರಚಾರ-ಹಿಂದುವಾದರೆ ಅಪಪ್ರಚಾರ!

Posted by JAYAKIRANA Kirana on | 0 comments | Leave a comment...


ಪ್ರಾರ್ಥನೆಗಳನ್ನು ದೇವರಿಗೆ ತಲುಪಿಸಲು ಪಡೆದುಕೊಳ್ಳುವ ಕನಿಷ್ಠ ಕಮಿಷನ್ ಸಾವಿರ ರೂಪಾಯಿಗಳು. ಹೆಚ್ಚಿಗೆ ಎಷ್ಟು ಬೇಕಾದರೂ ಕೊಡಬಹುದು! ಹಣಪಾವತಿಸಲು ಪ್ರಪಂಚದ ಹೆಚ್ಚಿನೆಲ್ಲಾ ಬ್ಯಾಂಕ್‌ಗಳ ವೀಸಾಕಾರ್ಡ್‌ಗಳ ವಿವರ, ಪ್ರಪಂಚದ ಯಾವ ರೀತಿಯ ಕರೆನ್ಸಿ ಮೂಲಕವೂ ಹಣ ಸಂದಾಯ ಮಾಡಬಹುದು! ಈ ದಂಧೆಯ ಮೂಲಕ ಪಾವುಲ್ ದಿನಕರನ್ ಎಂಬ ವ್ಯಕ್ತಿ ಸಂಪಾದಿಸಿದ್ದು ಸುಮಾರು ಐದು ಸಾವಿರ ಕೋಟಿ ರೂಪಾಯಿಗಳು!

ನಾಗೇಶ್ ಕೆ, ವಾಮಂಜೂರು
ಇತ್ತೀಚೆಗೆ ಖಾಸಗಿ ಟಿವಿವಾಹಿನಿಯೊಂದರಲ್ಲಿ ‘ಕಣ್ಣಿಲ್ಲದವರಿಗೆ ಕಣ್ಣು ಬಂದಿದೆ, ಕಾಲಿಲ್ಲದವರಿಗೆ ಕಾಲು ಬಂದಿದೆ, ರೋಗಿಗಳು ಗುಣಮುಖ ವಾಗಿದ್ದಾರೆ’ ಎಂದು ಹೇಳುವ ಡೈಲಾಗ್‌ಗಳು ಕೇಳಿ ಬರತೊಡಗಿದಾಗ ಇದು ಯಾವುದೋ ಹಿಂದೂ ಸ್ವಾಮಿ, ದೇವ ಮಾನವನೋರ್ವನ ಬಡಾಯಿ ಬಂಡವಾಳದ ಬಯಲಾಗುತ್ತಿದೆ ಎಂದು ಭಾವಿಸಿ ಆಸಕ್ತಿಯಿಂದ ಟಿವಿ ನೋಡಿ ದಾಗ ಅಶ್ಚರ್ಯವಾಗಿತ್ತು. ಹಿಂದೂ ಸ್ವಾಮಿಗಳಾದರೆ ಆತನನ್ನು ಯಾವೆಲ್ಲಾ ರೀತಿಯಲ್ಲಿ ತೇಜೋವಧೆ, ಮಾನಹಾನಿ, ಹಾಸ್ಯ ಮಾಡಿ ಆತನ ಬಂಡವಾಳವನ್ನು ಬಯಲಿಗೆಳೆಯಲಾಗುತ್ತಿತ್ತೋ ಅದಕ್ಕೆ ಸಂಪೂರ್ಣ ವಿರೋಧವಾದ ಸುಮಾರು ಅರ್ಧಗಂಟೆಗಳ ಕಾರ್ಯಕ್ರಮ ಅದಾಗಿತ್ತು. ಅತಿಮಾನುಷ ಶಕ್ತಿ, ಪವಾಡಗಳನ್ನು ಯಾವೆಲ್ಲಾ ರೀತಿಯಲ್ಲಿ ವಿಜೃಂಭಿಸಬೇಕೋ ಆ ರೀತಿಯಾಗಿ ಅತಿಯಾದ ವಿಜೃಂಭಣೆಯಿಂದ ಮನಮುಟ್ಟುವಂತೆ ಕಾರ್ಯಕ್ರಮದ ನಿರ್ವಹಣೆ ಸಾಗುತ್ತಿತ್ತು.
ನಮ್ಮ ದೇಶದ ಪ್ರಧಾನಮಂತ್ರಿ ಯಾರಾಗುತ್ತಾರೆಂದು ಅವರಿಗೆ ಮೊದಲೇ ಗೊತ್ತಿತ್ತಂತೆ. ರಾಹುಲ್ ಗಾಂಧಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂದು ಆತ ಭವಿಷ್ಯ ನುಡಿದಿದ್ದನಂತೆ. ಕಾಂಗ್ರೆಸ್ ಪಕ್ಷ ಸಂಕಷ್ಟದ ಸ್ಥಿತಿಯಲ್ಲಿರುವಾಗ ಆತ ಸೋನಿಯಾ ಗಾಂಧಿಗೆ ಪತ್ರ ಬರೆದು ನಿಮ್ಮ ಪಕ್ಷ ವಿಜಯಿಯಾಗುತ್ತದೆ. ನಿಮಗಾಗಿ ನಾನು ಪ್ರಾರ್ಥಿಸಿದ್ದೇನೆ. ದೇವರು ನಿಮಗೆ ಜಯವನ್ನು ತಂದು ಕೊಡುವುದಾಗಿ ಹೇಳಿದ್ದಾರೆ ಎಂದು ತಿಳಿಸಿದ್ದನಂತೆ. ಸುಬೋದ್ ಕಾಂತ್ ಸಹಾಯ್‌ಗಾಗಿ ಆತ ಪ್ರಾರ್ಥನೆ ಮಾಡಿದ್ದರಿಂದ ಅವರಿಗೆ ಉನ್ನತ ಸ್ಥಾನ ಮಾನ ಸಿಕ್ಕಿತಂತೆ. ಹೀಗೆ ಸಾಲು ಸಾಲಾಗಿ ಪವಾಡಗಳ ಪಟ್ಟಿ ಮೂಡಿ ಬರು ತ್ತಿದ್ದವು. ಈತ ಮಾಡುವ ಪ್ರಾರ್ಥನಾ ಸಭೆಗಳಲ್ಲಿ ಕಣ್ಣುಗಳು ಇಲ್ಲದವರಿಗೆ ಕಣ್ಣು, ಕಾಲುಗಳು ಇಲ್ಲದವರಿಗೆ ಕಾಲು, ಮಾತನಾಡಲು ಬಾರದವರಿಗೆ ಮಾತು ಹೀಗೆ ಏನೇನೋ ಆಗಿಬಿಟ್ಟಿತ್ತಂತೆ.
ಇಂತಹಾ ಮಹಾನ್ ಪವಾಡ ಪುರುಷ ಯಾರು ಗೊತ್ತೇ? ಆತ ಬೇರೆ ಯಾರೂ ಅಲ್ಲಾ, ಪಾಲ್ ಬಾಬಾ ಅಲಿಯಾಸ್ ಪಾವುಲ್ ದಿನಕರನ್ ಬಾಬಾ...! ಈತನ ವೆಬ್‌ಸೈಟಿನಲ್ಲಿ ಸಾಕಷ್ಟು ವಿವರಗಳು ಇವೆ ಎಂಬ ಮಾತು. ಈತನ ಪ್ರಾರ್ಥನಾ ಸಭೆಗಳಿಗೆ ಲಕ್ಷಾಂತರ ಮಂದಿ ಸೇರುತ್ತಾರೆ ಎಂಬುದರ ಪುರಾವೆಯಾಗಿ ಸಭೆಗಳ ತುಣುಕು. ಸೋನಿಯಾ, ರಾಹುಲ್, ಸುಬೋದ್ ಕಾಂತ್ ಇತ್ಯಾದಿ ರಾಜಕೀಯ ನಾಯಕರು ಪ್ರಮಾಣ ವಚನ ಸ್ವೀಕರಿಸುವ ದೃಶ್ಯಗಳು.
ಈ ಬಗ್ಗೆ ಕುತೂಹಲಗೊಂಡು ಪಾಲ್ ದಿನಕರನ್ ಎಂಬ ಹೆಸರಿನ ವೆಬ್‌ಸೈಟಿಗೆ ಪ್ರವೇಶ ಮಾಡಿದೆ. ನಿಮಗೆ ಎಲ್ಲಿಯಾದರೂ ಪ್ರಾರ್ಥನೆ ಮಾಡಲು ಪುರುಸೊತ್ತು ಇಲ್ಲದೇ ಇದ್ದಲ್ಲಿ ಈ ವೆಬ್‌ಸೈಟಿನ ಮೊರೆ ಹೋದರೆ ಸಾಕು ಪಾಲ್ ದಿನಕರ್ ಎಂಬಾತ ದೇವರಿಗೆ ನಿಮ್ಮ ಪ್ರಾರ್ಥನೆಯನ್ನು ನೇರವಾಗಿ ತಲುಪಿಸುವ ಏಜೆಂಟ್ ಕೆಲಸವನ್ನು ಮಾಡುತ್ತಾನೆ ಎಂದು ವಿವರ ಅದರಲ್ಲಿ ಕಂಡು ಬಂದಿತ್ತು. ನೀವು ವ್ಯಾಪಾರಿಗಳ, ನಿಮ್ಮ ಕುಟುಂಬಕ್ಕಾಗಿ, ಮಕ್ಕಳಿಗಾಗಿ ಇತ್ಯಾದಿ ಇತ್ಯಾದಿ ದೇವರನ್ನು ಪ್ರಾರ್ಥಿಸಲು ಪುರುಸೊತ್ತು ಇಲ್ಲದವರ ಸುಮಾರು ೧೦ ವಿಭಾಗಗಳ ಪಟ್ಟಿ ಇಲ್ಲಿ ಕಂಡು ಬರುತ್ತದೆ. ಈ ಒಂದೊಂದು ಪ್ರಾರ್ಥನೆಗಳನ್ನು ದೇವರಿಗೆ ತಲುಪಿಸಲು ಪಡೆದುಕೊಳ್ಳುವ ಕನಿಷ್ಠ ಕಮಿಷನ್ ಸಾವಿರ ರೂಪಾಯಿ ಗಳು. ಹೆಚ್ಚಿಗೆ ಎಷ್ಟು ಬೇಕಾದರೂ ಕೊಡಬಹುದು! ಹಣಪಾವತಿಸಲು ಪ್ರಪಂಚದ ಹೆಚ್ಚಿನೆಲ್ಲಾ ಬ್ಯಾಂಕ್‌ಗಳ ವೀಸಾ ಕಾರ್ಡ್‌ಗಳ ವಿವರ. ಪ್ರಪಂಚದ ಯಾವ ರೀತಿಯ ಕರೆನ್ಸಿ ಮೂಲಕವೂ ಹಣ ಸಂದಾಯ ಮಾಡಬಹುದು! ಈ ದಂಧೆಯ ಮೂಲಕ ಪಾವುಲ್ ದಿನಕರನ್ ಎಂಬ ವ್ಯಕ್ತಿ ಸಂಪಾದಿಸಿದ್ದು ಸುಮಾರು ಐದು ಸಾವಿರ ಕೋಟಿ ರೂಪಾಯಿಗಳು! ಇಷ್ಟು ದುಡ್ಡನ್ನು ಸಂಪಾದಿಸಿದ ಈ ವ್ಯಕ್ತಿ ಮಾಡುವ ಸಮಾಜ ಸೇವೆ ಏನೆಂದರೆ ಮ್ಯಾರೇಜ್ ಬ್ಯೂರೋ, ಉದ್ಯೋಗ ದೊರಕಿಸುವಿಕೆ, ಮಹಿಳಾ ಕಲ್ಯಾಣ, ಮಕ್ಕಳ ಕಲ್ಯಾಣ ಇತ್ಯಾದಿ ಇತ್ಯಾದಿ ಇದರಲ್ಲಿ ಎಷ್ಟು ಕೆಲಸ ಮಾಡಿದ್ದಾರೆ ಎಂಬ ವಿವರ ಇಲ್ಲವೇ ಇಲ್ಲ!
ಮಂಗಳೂರಿನಲ್ಲಿ ಓರ್ವ ಮೋಸಗಾರ ಮತಾಂತರ ಮಾಡುವ ಕ್ರೈಸ್ತ ಮಿಷನರಿಗೂ ಈ ಪಾವುಲ್ ದಿನಕರ್‌ಗೂ ಏನೇನೂ ವ್ಯತ್ಯಾಸವಿಲ್ಲ. ಮಂಗಳೂರಿನಲ್ಲಿ ಚರ್ಚ್ ನಿರ್ಮಿಸು ತ್ತೇನೆಂದು ಮುಗ್ಧ ಭಕ್ತರನ್ನು ಮೋಸ ಮಾಡಿ ಓರ್ವ ಕೆಲವು ಕೋಟಿ ದೋಚಿದರೆ ಪಾವುಲ್ ದಿನಕರ್ ಎಂಬ ಹೈಟೆಕ್ ಮತಾಂತರಿ ಐದು ಸಾವಿರ ಕೋಟಿ ದೋಚಿದ್ದಾನೆ. ಆದರೆ ಈತನ ಬಗ್ಗೆ ಕಾರ್ಯಕ್ರಮ ಪ್ರಸಾರವಾದ ಟಿವಿಯಲ್ಲಿ ಕೊಟ್ಟ ಕೊನೆಗೆ ಇವರು ಐದು ಸಾವಿರ ಕೋಟಿ ಅಧಿಪತಿ ಎಂಬ ಒಂದು ವಾಕ್ಯ ಬಿಟ್ಟರೆ ಬೇರೆಲ್ಲವೂ ಹೊಗಳುವಿಕೆಯೇ ಆಗಿದೆ.
ಈ ಸಂದರ್ಭದಲ್ಲಿ ನೆನಪಿಗೆ ಬಂದದ್ದು ಸಾಯಿಬಾಬಾ, ಬಾಬಾ ರಾಮ್‌ದೇವ್ ಮತ್ತು ಇತರ ಕೆಲವು ಹಿಂದೂ ಸಾಧು ಸಂತರು ಇವರೆಲ್ಲರ ಬಗ್ಗೆ ಖಾಸಗಿ ಟಿವಿ ಚಾನೆಲ್‌ಗಳು ಹೇಗೆ ಅಪಪ್ರಚಾರ ಮಾಡಿದ್ದವು ಎಂಬುದನ್ನು ಓದುಗರಿಗೆ ಮತ್ತು ಟಿವಿ ವೀಕ್ಷಕರಿಗೆ ವಿವರಣೆ ನೀಡಬೇಕಾಗಿಲ್ಲ. ಸಾಯಿಬಾಬಾ ಎಂಬ ಸಂತರು ಪವಾಡಗಳನ್ನು ಮಾಡಿ ಸಾಕಷ್ಟು ಸಂಪತ್ತು ಗಳಿಸಿದ್ದರು. ಅವರು ಮಾಡಿದ ಸಮಾಜ ಸೇವೆಯನ್ನು ಪರಿಗಣನೆಗೆ ತೆಗೆದುಕೊಳ್ಳದೆ ಮಾಡಿದ ಅಪಪ್ರಚಾರ ಎಷ್ಟು?. ಸಾಯಿಬಾಬಾ ಎಲ್ಲೂ ಯಾರಿಗೂ ನೀವು ಒಂದು ಸಾವಿರ ಕೊಡಿ ನಿಮಗಾಗಿ ಕನಿಷ್ಠ ಪ್ರಾರ್ಥನೆ ಮಾಡುತ್ತೇನೆ. ನೀವು ಒಂದು ಲಕ್ಷ ಕೊಡಿ ದೇವರಲ್ಲಿ ನಿಮಗೆ ಗರಿಷ್ಠ ಇನ್‌ಫ್ಲುಯೆನ್ಸ್ ಮಾಡುತ್ತೇನೆ ಎಂದು ಹೇಳಿದ ನಿದರ್ಶನವಿಲ್ಲ. ನಿರ್ಗತಿಕರಿಗೂ, ಶ್ರೀಮಂತರಿಗೂ ಹಣ ಕೊಟ್ಟವರಿಗೂ ಕೊಡದವರಿಗೂ ಸಮಾನ ಕರುಣೆ, ಪ್ರೀತಿ ತೋರಿಸಿದ ಸಾಯಿಬಾಬಾ ಬಗ್ಗೆ ಟಿವಿ ಮಾಧ್ಯಮಗಳು ಅಪಪ್ರಚಾರವನ್ನೇ ಮಾಡಿದ್ದವು.
ಇತರ ಯಾವುದಾದರೂ ಸ್ವಾಮಿಯ ಹುಳುಕು ಏನು ಎಂದು ಎತ್ತಿ ಎತ್ತಿ ತೋರಿಸುತ್ತಾ ಖಾಸಗಿ ಟಿವಿಗಳು ಪ್ರಚಾರವನ್ನು ಮಾಡುತ್ತಲೇ ಇವೆ. ಹಾಗಾದರೆ ಕಮಿಷನ್ ಕೊಟ್ಟರೆ ನಿಮಗಾಗಿ ಪ್ರಾರ್ಥನೆ ಮಾಡುತ್ತೇನೆ ಎಂದು ರೇಟ್‌ಲೀಸ್ಟ್‌ನ್ನು ಅತ್ಯಾಧುನಿಕವಾಗಿ ವೆಬ್ ಸೈಟ್‌ನಲ್ಲಿ ಪ್ರಚಾರ ಮಾಡಿದ. ರಾಜಕಾರಣಿಗಳು ಪ್ರಮಾಣ ವಚನ ಸ್ವೀಕರಿಸಿದ ನಂತರ ಅದು ನಾನು ದೇವರಲ್ಲಿ ಏಜಂಟ್‌ಗಿರಿ ಮಾಡಿದ್ದರಿಂದ ಆದ ಪವಾಡ ಎಂದು ಹೇಳುವ ಪಾಲ್ ದಿನಕರನ್ ಎಂಬ ಬಾಬಾ ಖಾಸಗಿ ಟಿವಿ ಮಾಧ್ಯಮವೊಂದಕ್ಕೆ ಪ್ರಚಾರ ಯೋಗ್ಯ ವ್ಯಕ್ತಿಯಾಗಿ ಕಂಡಿದ್ದಾದರೂ ಹೇಗೆ ಎಂಬುದು ಯಕ್ಷಪ್ರಶ್ನೆಯಾಗಿದೆ.

ಕುಡಿದು ಸೆಕ್ಸ್‌ನಲ್ಲಿ ಪಾಲ್ಗೊಂಡರೆ ಲಾಭಕ್ಕಿಂತ ನಷ್ಟವೇ ಹೆಚ್ಚು

Posted by JAYAKIRANA Kirana on | 0 comments | Leave a comment...

ಹೆಸರು;ಬೇಡ: ಊರು;ಬೇಡ
ಸಮಸ್ಯೆ: ನಾನು ೪೫ರ ಹರೆಯದ ವಿವಾಹಿತ ವ್ಯಕ್ತಿ. ಮದುವೆಯಾಗಿ ೧೦ ವರ್ಷಗಳು ಕಳೆಯಿತು. ನಾನು ಚಾಲಕನಾಗಿ ದುಡಿಯುತ್ತಿದ್ದೇನೆ. ಪತ್ನಿಯ ವಯಸ್ಸು ೩೫. ನಮಗೆ ಒಬ್ಬ ಮಗ ನಿದ್ದಾನೆ. ನಮಗೆ ಇಬ್ಬರಿಗೂ ಸೆಕ್ಸ್ ಬಗ್ಗೆ ಆಸಕ್ತಿಯಿದೆ. ನಾವು ವಾರಕ್ಕೆ ಒಂದೆರಡು ಬಾರಿ ಮಾತ್ರ ಸೇರುತ್ತೇವೆ. ನಾನು ಮದುವೆಗೆ ಮುಂಚೆ ಕೆಲವು ಮಂದಿಯ ಜತೆ ಸೆಕ್ಸ್ ನಡೆಸಿದ್ದೆ. ಆಗ ನನಗೆ ಯಾವುದೇ ಸಮಸ್ಯೆಯಿರಲಿಲ್ಲ. ನನ್ನ ಕೆಲಸ ಕಷ್ಟಕರವಾಗಿರುವುದರಿಂದ ನಾನು ಪ್ರತಿನಿತ್ಯ ಮದ್ಯ ಸೇವಿಸುತ್ತೇನೆ. ಆದರೆ ಕುಡಿದು ಬಂದು ಸೆಕ್ಸ್ ಮಾಡುವುದು ನನ್ನಾಕೆಗೆ ಇಷ್ಟವಾಗುವುದಿಲ್ಲ. ಇದಕ್ಕಾಗಿ ಕೆಲವು ಸಮಯ ಕುಡಿಯುವುದನ್ನು ನಿಲ್ಲಿಸಿ ನೋಡಿದೆ. ಆದರೆ ಆಗ ನನಗೆ ಲೈಂಗಿಕ ಕ್ರಿಯೆ ನಡೆಸಲು ಅಸಾಧ್ಯವಾಯಿತು. ನನಗೆ ನಿಮಿರುವಿಕೆ ಚೆನ್ನಾಗಿ ಇರುವುದಿಲ್ಲ. ಇದರಿಂದ ನಮಗೆ ನಿರಾಸೆ ಯಾಯಿತು. ಇದೇಕೆ ಹೀಗೆ? ಮದ್ಯ ಸೇವಿಸಿದರೆ ಸೆಕ್ಸ್ ಬಗ್ಗೆ ಪ್ರಚೋದನೆ ಹೆಚ್ಚುತ್ತದೆ. ಆದರೆ ಒಂದು ಪುಸ್ತಕದಲ್ಲಿ ಮದ್ಯ ಸೇವಿಸಿ ಸೆಕ್ಸ್ ಮಾಡುವುದು ಅಪಾಯಕಾರಿ ಎಂದು ಬರೆದಿದ್ದರು, ಇದು ನಿಜವೇ ತಿಳಿಸಿ. ನನ್ನ ಸಮಸ್ಯೆಗೆ ಯಾವ ರೀತಿ ಪರಿಹಾರ ಪಡೆಯುವುದೆಂದೇ ತಿಳಿಯುತ್ತಿಲ್ಲ. ದಯವಿಟ್ಟು ನನ್ನ ಸಮಸ್ಯೆಗೆ ಸೂಕ್ತ ಸಲಹೆ ಕೊಡಿ.
ಸಲಹೆ: ಲೈಂಗಿಕಾಸಕ್ತಿ ಯಾವಾಗ ಕುಗ್ಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅದು ಅವರವರ ಜೀವನ ಶೈಲಿ ಹಾಗೂ ಆರೋಗ್ಯದ ಮೇಲೆ ಅವಲಂಬಿಸಿರುತ್ತದೆ. ಕೆಲವರಲ್ಲಿ ೪೦ ವಯಸ್ಸಿನಲ್ಲಿ ಸೆಕ್ಸ್ ಬಗ್ಗೆ ಆಸಕ್ತಿ ಕಡಿಮೆಯಾದರೆ, ಮತ್ತೂ ಕೆಲವರಲ್ಲಿ ೬೦ ವಯಸ್ಸಿನವರೆಗೂ ಲೈಂಗಿಕಾಸಕ್ತಿ, ಸಾಮರ್ಥ್ಯ ಇರಬಹುದು. ನೀವು ಕುಡಿದಿರುವಾಗ ಸೆಕ್ಸ್ ಬಗ್ಗೆ ಆಸಕ್ತಿ ಹೊಂದುವುದು ಮತ್ತು ಕುಡಿಯದಿರುವ ವೇಳೆ ಲೈಂಗಿಕತೆಯ ಬಗ್ಗೆ ನಿರಾಸಕ್ತಿ ಹೊಂದುವುದಕ್ಕೆ ಮದ್ಯಪಾನವೇ ಕಾರಣ. ಯಾಕೆಂದರೆ ಮದ್ಯ ಸೇವನೆಯು ದೇಹದಲ್ಲಿ ಸೆಕ್ಸ್ ಬಯಕೆಯು ಜಾಗೃತವಾಗಲು ನರಮಂಡಲವನ್ನು ಪ್ರಚೋದಿಸುವ ಕಾರ್ಯ ಮಾಡುತ್ತದೆ. ಇದು ವೈಜ್ಞಾನಿಕವಾಗಿ ದೃಢಪಟ್ಟಿದೆ ಕೂಡಾ. ಆದರೆ ಪದೇ ಪದೇ ಮದ್ಯ ಸೇವಿಸಿ ಲೈಂಗಿಕ ಕ್ರೀಯೆ ನಡೆಸಿದರೆ ಮಾತ್ರ ಆನಂದ, ಸುಖ ಸಿಗುವುದು, ಇಲ್ಲದಿದ್ದರೆ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗುತ್ತದೆ. ನಿಮ್ಮ ವಿಚಾರದಲ್ಲೂ ಹೀಗೆಯೇ ಆಗಿದೆ ಎನ್ನುವುದು ನನ್ನ ಅನಿಸಿಕೆ. ಜನನಾಂಗ ನಿಮಿರುವಿಕೆ ಸಾಧ್ಯವಿಲ್ಲ ಎಂದಾಗ ಕುಡಿಯಲು ಆರಂಭಿಸಿದಿರಿ. ಆಗ ಆಸಕ್ತಿ ಹೆಚ್ಚಾಯಿತು, ನಿಮ್ಮ ಹೆಂಡತಿಗೆ ಇದು ಸರಿಕಾಣಲಿಲ್ಲ. ಗಂಡ ಕುಡಿದು ಬಂದು ತನ್ನೊಡನೆ ಸೇರುವುದನ್ನು ಹೆಚ್ಚಿನ ಸ್ತ್ರೀಯರು ಇಷ್ಟ ಪಡುವುದಿಲ್ಲ. ಕುಡಿದ ಆತುರಕ್ಕೆ ಬಿದ್ದು, ಆಕೆಯ ಇಷ್ಟವನ್ನು ಗಮನಿಸದೆ ಆಕೆಯೊಂದಿಗೆ ಸೇರುತ್ತೀರಿ.
ಇದರಿಂದ ನೀವು ಮುಂದೆ ಮದ್ಯಕ್ಕೆ ಅಡಿಕ್ಟ್ ಆಗುವ ಸಾಧ್ಯತೆಯೂ ಇದೆ. ನೀವು ಕೂಡಲೇ ಮದ್ಯ ತ್ಯಜಿಸಿ. ಒಂದು ತಿಂಗಳ ಕಾಲ ಮದ್ಯ ಸೇವಿಸದೆ ಲೈಂಗಿಕ ಕ್ರಿಯೆಯ ಬಗ್ಗೆ ಯಾವ ರೀತಿಯ ಆಸಕ್ತಿ, ನಿರಾಸಕ್ತಿ ಇರುತ್ತದೆ ಎಂದು ಗಮನಿಸಿ ನೋಡಿ. ಕುಡಿಯದೆ ಸೆಕ್ಸ್‌ನಲ್ಲಿ ಪಾಲ್ಗೊಳ್ಳಿ. ಆಸಕ್ತಿ ಬರುವವರೆಗೆ ಸಂಭೋಗ ಮುಂಚಿನ ಆಟ(ಫೋರ್ ಪ್ಲೇ)ಯಲ್ಲಿ ತೊಡಗಿಸಿಕೊಳ್ಳಿ. ಉತ್ತಮ ಲೈಂಗಿಕ ಜೀವನದ ಕುರಿತು ಮಾಹಿತಿ ಪಡೆ ಯಲು ಮಾರುಕಟ್ಟೆಯಲ್ಲಿನ ಲೈಂಗಿಕ ಸಾಹಿತ್ಯವನ್ನು ಓದಿ ತಿಳಿಯಿರಿ. ಲೈಂಗಿಕ ಆಸನವನ್ನು ಬದಲಾಯಿಸುವುದರಿಂದಲೂ ನಿಮಿರುವಿಕೆ ಸಮಸ್ಯೆ ಯನ್ನು ನಿವಾರಿಸಲು ಸಾಧ್ಯವಿದೆ. ನೀವು ಯಾವುದಕ್ಕೂ ಒಮ್ಮೆ ತಜ್ಞ ವೈದ್ಯರ ಬಳಿ ತಪಾಸಣೆ ನಡೆಸಿ ಅಗತ್ಯವಿದ್ದಲ್ಲಿ ಚಿಕಿತ್ಸೆ ಪಡೆಯುವು ದೊಳ್ಳೆಯದು.

10-05-2012

Posted by JAYAKIRANA Kirana on | 0 comments | Leave a comment...

ಮೇಷ : ಮಕ್ಕಳಿಂದ ಕಿರಿಕಿರಿ ಇರುತ್ತದೆ.
ವೃಷಭ : ಮನಸ್ಸಿಗೆ ಸಮಾಧಾನ ಇರುತ್ತದೆ.
ಮಿಥುನ : ಮನೆ ರ್ಮಾಣದ ಕೆಲಸಗಳು ಪ್ರಗತಿಯಲ್ಲಿರುತ್ತದೆ.
ಕರ್ಕಾಟಕ : ದೇವತಾ ಕೆಲಸಗಳನ್ನು ಮಾಡುತ್ತೀರಿ.
ಸಿಂಹ : ದೂರ ಸಂಚಾರ ಮಾಡುವ ಸಾಧ್ಯತೆ ಇದೆ.
ಕನ್ಯಾ : ವಿರೋಧಿಗಳಿಂದ ತೊಂದರೆ ಇರುತ್ತದೆ.
ತುಲಾ : ಸಂಘ ಸಂಸ್ಥೆಯ ಸಹಕಾರ ಇರುತ್ತದೆ.
ವೃಶ್ಚಿಕ : ಮನೆಯಲ್ಲಿ ಸುಖ, ಶಾಂತಿ ಇರುತ್ತದೆ.
ಧನು : ಮಿತ್ರರೊಂದಿಗೆ ಮನಸ್ತಾಪ ಆಗುವ ಸಂಭವ ಇದೆ.
ಮಕರ: ಮನಸ್ಸಿಗೆ ನೆಮ್ಮದಿ ಸಮಾಧಾನ ಇರುತ್ತದೆ.
ಕುಂಭ : ವ್ಯಾಪಾರ ವ್ಯವಹಾರದಲ್ಲಿ ಲಾಭ ದೊರೆಯಲಿದೆ.
ಮೀನ : ಕೆಲಸ ಕಾರ್ಯಗಳಲ್ಲಿ ಪ್ರಗತಿ ಇರುತ್ತದೆ.

10-05-2012

Posted by JAYAKIRANA Kirana on | 0 comments | Leave a comment...

ಮಂಗಳೂರು : ಕಾಲ್ ಸೆಂಟರ್‌ಗೆ ಹೌಸ್ ಕೀಪರ್ ಬೇಕು ೯೯೧೬೧೧೯೪೬೯.
ಮಂಗಳೂರು : ಸುರತ್ಕಲ್ - ಬೈಕಂಪಾಡಿಗೆ ಕೊರಿಯರ್ ಏಜೆನ್ಸಿ ಬೇಕು ೯೮೪೫೮೦೬೪೮೦.
ಕಾವೂರು : ಹೊಟೇಲ್‌ಗೆ ಕುಕ್ & ಸಪ್ಲಾಯರ್ ಬೇಕು ೯೮೮೦೭೨೫೪೨೨.
ಮಂಗಳೂರು : ಹೊಟೇಲ್‌ಗೆ ಕಿಚನ್ ಹೆಲ್ಪರ್ ಬೇಕು ೯೪೪೮೩೮೩೭೦೫.
ಮಂಗಳೂರು : ಸ್ಟಾಕ್, ಸೇಲ್ಸ್ ಮೇಲ್ವಿ ಚಾರಣೆಗೆ ಮಹಿಳಾ ಕ್ಲರ್ಕ್, ಮಾರ್ಕೆಟಿಂಗ್‌ಗೆ ಯುವಕರು ಬೇಕು ೯೮೪೫೩೫೩೭೮೯.
ಪುತ್ತೂರು : ದ್ವಿಚಕ್ರವಾಹನ ಶೋರೂಮ್‌ಗೆ ಸೇಲ್ಸ್‌ಮ್ಯಾನ್ ಬೇಕು ೮೭೪೮೯೭೦೨೮೬.
ಮಂಗಳೂರು: ಬೇಕರಿ ಮತ್ತು ಜ್ಯೂಸ್ ಅಂಗಡಿಗೆ ಜನ ಬೇಕು ೯೮೪೪೫೨೧೭೪೩.
ಮಂಗಳೂರು : ಒಪ್ಟಿಕಲ್ ಶಾಪಿಗೆ ಯುವತಿ ಬೇಕು ೯೦೩೬೬೨೧೦೭೯.
ಮಂಗಳೂರು: ಸ್ಕ್ರೀನ್‌ಪ್ರಿಂಟಿಂಗ್‌ಗೆ ಜನ ಬೇಕು ೭೭೬೦೬೩೧೪೫೭.
ಮಂಗಳೂರು: ಡಿಟಿಪಿ ಅನುಭವ ಇರುವ ಯುವತಿಯರು ಬೇಕು ೯೮೪೪೪೯೮೦೯೮.
ಮಂಗಳೂರು: ಗ್ರಾಫಿಕ್ಸ್‌ಗೆ ಯುವತಿಯರು ಬೇಕು ೯೦೩೬೪೮೯೦೪೦.
ತೊಕ್ಕೊಟ್ಟು : ಕಚೇರಿ ಕೆಲಸಕ್ಕೆ ಪಿಯುಸಿ ಯಾದ ಯುವತಿ ೭೭೯೫೧೬೯೭೮೭.
ಮಂಗಳೂರು : ಸೇಲ್ಸ್‌ಮ್ಯಾನ್ ಮತ್ತು ಎಕ್ಸಿ ಕ್ಯೂಟಿವ್ ಬೇಕು ೭೨೫೯೩೫೪೮೮೪
ಮಂಗಳೂರು : ಏಜೆನ್ಸಿಯೊಂದಕ್ಕೆ ಸೇಲ್ಸ್‌ಗೆ ಯುವತಿಯರು ಬೇಕು ೨೪೪೩೫೭೬.
ಮಂಗಳೂರು : ಮಂಗಳಾದೇವಿ ಬಳಿ ಆಫೀಸ್ ಕೆಲಸಕ್ಕೆ ಹೆಲ್ಪರ್ ಬೇಕು ೯೮೪೪೦೦೯೯೦೫
ಬೈಕಂಪಾಡಿ : ಹೊಟೇಲಿಗೆ ಮಾಂಸಾಹಾರಿ ಅಡುಗೆಯವರು, ಕಿಚನ್ ಹೆಲ್ಪರ್ ಬೇಕು ೯೯೮೦೨೬೭೮೮೪.
ಪಡೀಲ್ : ಪೆಟ್ರೋಲ್ ಪಂಪ್‌ಗೆ ಯುವಕರು ಬೇಕು ೯೪೪೮೧೩೪೧೨೩.
ಕೋಡಿಕಲ್ : ಮನೆಕಾರಿಗೆ ಡ್ರೈವರ್ ಬೇಕು ೨೪೫೧೮೨೮.
ಮಂಗಳೂರು : ಕಂಪ್ಯೂಟರ್ ತಿಳಿದಿರುವ ಲೇಡಿ ಬೇಕು ೯೮೪೪೪೯೦೯೮.
ಕಂಕನಾಡಿ ಅಟೋ ಮೊಬೈಲ್ ಶಾಪ್‌ಗೆ ಜನಬೇಕು. ೯೪೪೯೪೪೧೨೩೪.
ಉಡುಪಿ : ಕಂಪೆನಿ ಕೆಲಸಕ್ಕೆ ಯುವಕ - ಯುವತಿಯರು ಬೇಕು ೯೯೮೦೪೬೩೬೧೧.
ಮಂಗಳೂರು : ಯೆಯ್ಯಾಡಿಯಲ್ಲಿರುವ ಮುದ್ರಣಾಲಯಕ್ಕೆ ಡಿ.ಟಿ.ಪಿ. ಅಪರೇಟರ್ ಬೇಕು ೨೨೧೧೦೫೦.
ಮಂಗಳೂರು : ತಿಂಡಿ (ಪಪ್ಸ್) ಮಾಡು ವವರು ಬೇಕು ೯೯೦೧೩೫೦೪೩೧
ಮಂಗಳೂರು : ಹೊಟೇಲಿಗೆ ಅಡುಗೆ ಯವರು ಬೇಕು ೯೯೮೬೬೪೮೧೧೮.
ಸುರತ್ಕಲ್ : ಬಟ್ಟೆ ಅಂಗಡಿಗೆ ಲೇಡಿಸ್ ಕಟ್ಟಿಂಗ್ ಮಾಸ್ಟರ್ ಬೇಕು ೯೮೪೪೫೪೩೧೫೧.
ಉಡುಪಿ : ಎಲೆಕ್ಟ್ರಾನಿಕ್ಸ್ ಶಾಪ್‌ಗೆ ಲೇಡಿಸ್ ಕ್ಯಾಶಿಯರ್ ಬೇಕು ೯೮೮೦೨೧೯೯೪೯.
ಮೂಡಬಿದ್ರೆ : ದೋಸೆ ಮಾಡುವ ಹೆಂಗಸರು ಬೇಕು. ೯೯೦೨೦೭೧೫೪೯.

10-05-2012

Posted by JAYAKIRANA Kirana on | 0 comments | Leave a comment...

ಮಂಗಳೂರು : ಕಾಲ್ ಸೆಂಟರ್‌ಗೆ ಹೌಸ್ ಕೀಪರ್ ಬೇಕು ೯೯೧೬೧೧೯೪೬೯.
ಮಂಗಳೂರು : ಸುರತ್ಕಲ್ - ಬೈಕಂಪಾಡಿಗೆ ಕೊರಿಯರ್ ಏಜೆನ್ಸಿ ಬೇಕು ೯೮೪೫೮೦೬೪೮೦.
ಕಾವೂರು : ಹೊಟೇಲ್‌ಗೆ ಕುಕ್ & ಸಪ್ಲಾಯರ್ ಬೇಕು ೯೮೮೦೭೨೫೪೨೨.
ಮಂಗಳೂರು : ಹೊಟೇಲ್‌ಗೆ ಕಿಚನ್ ಹೆಲ್ಪರ್ ಬೇಕು ೯೪೪೮೩೮೩೭೦೫.
ಮಂಗಳೂರು : ಸ್ಟಾಕ್, ಸೇಲ್ಸ್ ಮೇಲ್ವಿ ಚಾರಣೆಗೆ ಮಹಿಳಾ ಕ್ಲರ್ಕ್, ಮಾರ್ಕೆಟಿಂಗ್‌ಗೆ ಯುವಕರು ಬೇಕು ೯೮೪೫೩೫೩೭೮೯.
ಪುತ್ತೂರು : ದ್ವಿಚಕ್ರವಾಹನ ಶೋರೂಮ್‌ಗೆ ಸೇಲ್ಸ್‌ಮ್ಯಾನ್ ಬೇಕು ೮೭೪೮೯೭೦೨೮೬.
ಮಂಗಳೂರು: ಬೇಕರಿ ಮತ್ತು ಜ್ಯೂಸ್ ಅಂಗಡಿಗೆ ಜನ ಬೇಕು ೯೮೪೪೫೨೧೭೪೩.
ಮಂಗಳೂರು : ಒಪ್ಟಿಕಲ್ ಶಾಪಿಗೆ ಯುವತಿ ಬೇಕು ೯೦೩೬೬೨೧೦೭೯.
ಮಂಗಳೂರು: ಸ್ಕ್ರೀನ್‌ಪ್ರಿಂಟಿಂಗ್‌ಗೆ ಜನ ಬೇಕು ೭೭೬೦೬೩೧೪೫೭.
ಮಂಗಳೂರು: ಡಿಟಿಪಿ ಅನುಭವ ಇರುವ ಯುವತಿಯರು ಬೇಕು ೯೮೪೪೪೯೮೦೯೮.
ಮಂಗಳೂರು: ಗ್ರಾಫಿಕ್ಸ್‌ಗೆ ಯುವತಿಯರು ಬೇಕು ೯೦೩೬೪೮೯೦೪೦.
ತೊಕ್ಕೊಟ್ಟು : ಕಚೇರಿ ಕೆಲಸಕ್ಕೆ ಪಿಯುಸಿ ಯಾದ ಯುವತಿ ೭೭೯೫೧೬೯೭೮೭.
ಮಂಗಳೂರು : ಸೇಲ್ಸ್‌ಮ್ಯಾನ್ ಮತ್ತು ಎಕ್ಸಿ ಕ್ಯೂಟಿವ್ ಬೇಕು ೭೨೫೯೩೫೪೮೮೪
ಮಂಗಳೂರು : ಏಜೆನ್ಸಿಯೊಂದಕ್ಕೆ ಸೇಲ್ಸ್‌ಗೆ ಯುವತಿಯರು ಬೇಕು ೨೪೪೩೫೭೬.
ಮಂಗಳೂರು : ಮಂಗಳಾದೇವಿ ಬಳಿ ಆಫೀಸ್ ಕೆಲಸಕ್ಕೆ ಹೆಲ್ಪರ್ ಬೇಕು ೯೮೪೪೦೦೯೯೦೫
ಬೈಕಂಪಾಡಿ : ಹೊಟೇಲಿಗೆ ಮಾಂಸಾಹಾರಿ ಅಡುಗೆಯವರು, ಕಿಚನ್ ಹೆಲ್ಪರ್ ಬೇಕು ೯೯೮೦೨೬೭೮೮೪.
ಪಡೀಲ್ : ಪೆಟ್ರೋಲ್ ಪಂಪ್‌ಗೆ ಯುವಕರು ಬೇಕು ೯೪೪೮೧೩೪೧೨೩.
ಕೋಡಿಕಲ್ : ಮನೆಕಾರಿಗೆ ಡ್ರೈವರ್ ಬೇಕು ೨೪೫೧೮೨೮.
ಮಂಗಳೂರು : ಕಂಪ್ಯೂಟರ್ ತಿಳಿದಿರುವ ಲೇಡಿ ಬೇಕು ೯೮೪೪೪೯೦೯೮.
ಕಂಕನಾಡಿ ಅಟೋ ಮೊಬೈಲ್ ಶಾಪ್‌ಗೆ ಜನಬೇಕು. ೯೪೪೯೪೪೧೨೩೪.
ಉಡುಪಿ : ಕಂಪೆನಿ ಕೆಲಸಕ್ಕೆ ಯುವಕ - ಯುವತಿಯರು ಬೇಕು ೯೯೮೦೪೬೩೬೧೧.
ಮಂಗಳೂರು : ಯೆಯ್ಯಾಡಿಯಲ್ಲಿರುವ ಮುದ್ರಣಾಲಯಕ್ಕೆ ಡಿ.ಟಿ.ಪಿ. ಅಪರೇಟರ್ ಬೇಕು ೨೨೧೧೦೫೦.
ಮಂಗಳೂರು : ತಿಂಡಿ (ಪಪ್ಸ್) ಮಾಡು ವವರು ಬೇಕು ೯೯೦೧೩೫೦೪೩೧
ಮಂಗಳೂರು : ಹೊಟೇಲಿಗೆ ಅಡುಗೆ ಯವರು ಬೇಕು ೯೯೮೬೬೪೮೧೧೮.
ಸುರತ್ಕಲ್ : ಬಟ್ಟೆ ಅಂಗಡಿಗೆ ಲೇಡಿಸ್ ಕಟ್ಟಿಂಗ್ ಮಾಸ್ಟರ್ ಬೇಕು ೯೮೪೪೫೪೩೧೫೧.
ಉಡುಪಿ : ಎಲೆಕ್ಟ್ರಾನಿಕ್ಸ್ ಶಾಪ್‌ಗೆ ಲೇಡಿಸ್ ಕ್ಯಾಶಿಯರ್ ಬೇಕು ೯೮೮೦೨೧೯೯೪೯.
ಮೂಡಬಿದ್ರೆ : ದೋಸೆ ಮಾಡುವ ಹೆಂಗಸರು ಬೇಕು. ೯೯೦೨೦೭೧೫೪೯.

ಜನರನ್ನು ಮರುಳು ಮಾಡುವ ತಂತ್ರ

Posted by JAYAKIRANA Kirana on | 0 comments | Leave a comment...

ಬಳ್ಳಾರಿ ಶಾಸಕ ಶ್ರೀರಾಮುಲು ರಾಜ್ಯದ ಬರಗಾಲ ಪೀಡಿತ ಪ್ರದೇಶಗಳಿಗೆ ಪಾದಯಾತ್ರೆ ನಡೆಸುತ್ತಿದ್ದಾರೆ. ಬಿಜೆಪಿ ಪಕ್ಷದಿಂದ ಹೊರಬಿದ್ದು ತಮ್ಮದೇ ಪಕ್ಷ ರಚಿಸಿ ಸಂಘಟನೆಗೆ ಇಳಿದಿರುವ ಶ್ರೀರಾಮುಲು ಅಪಾರ ಜನಮನ್ನಣೆ ಪಡೆದಿರು ವುದಂತೂ ನಿಜ. ಆದರೆ ಗಣಿ ಹಗರಣದಲ್ಲಿ ಜನಾದನ ರೆಡ್ಡಿ ಜೈಲುಪಾಲಾದ ಬಳಿಕ ಶ್ರೀರಾಮುಲು ಅವರು ಜನರ ಟೀಕೆಗೆ ಗುರಿ ಯಾಗಿ ಬಿಜೆಪಿ ಪಕ್ಷದ ಸಹವಾಸ ಸಾಕು ಎಂದು ಪ್ರತ್ಯೇಕ ಪಕ್ಷ ಕಟ್ಟಿಕೊಂಡು ಜನರನ್ನು ಮರಳು ಮಾಡುತ್ತಿದ್ದಾರೆ. ಈಗಿನ ಸ್ಥಿತಿ ನೋಡಿದರೆ ಬಳ್ಳಾರಿಯಲ್ಲಿ ಮುಂದೆ ಕಾಂಗ್ರೆಸ್, ಬಿಜೆಪಿ ಪಕ್ಷಗಳಿಗೆ ಉಳಿಗಾಲವಿಲ್ಲ ಎನ್ನುವುದು ನಿಸ್ಸಂದೇಹ. ರಾಜ್ಯದ ಬರಗಾಲ ಪೀಡಿತ ಪ್ರದೇಶಗಳ ಕಡೆಗೆ ಸಚಿವರಾಗಿದ್ದಾಗ ಕಣ್ಣೆತ್ತಿಯೂ ನೋಡದ ಜನಪ್ರತಿನಿಧಿಗಳು ಈಗ ಕುರ್ಚಿ ಬಿಟ್ಟು ಇಳಿದೊಡನೆ ಜನರ ಮೇಲೆ ಭಾರೀ ಪ್ರೀತಿ ತೋರಿಸುತ್ತಿರುವುದು ಸೋಜಿಗವೆನಿಸುತ್ತದೆ. ಹಿಂದೆ ಮಹಾತ್ಮ ಗಾಂಧಿ ದೇಶದ ಸ್ವಾತಂತ್ರ್ಯಕ್ಕಾಗಿ ಮಾಡಿದ್ದ ಪಾದಯಾತ್ರೆಯನ್ನು ಇವರು ದುರುಪಯೋಗ ಪಡಿಸುತ್ತಿರುವುದು ನಾಚಿಕೆಗೇಡಿನ ಸಂಗತಿ.
ಜನಾದನ್.ಕೆ, ಉಡುಪಿ

ಉಪ್ಪಿನಂಗಡಿ ಠಾಣಾ ಪೊಲೀಸರೇ ಗಮನಿಸಿ
ಉಪ್ಪಿನಂಗಡಿಯಿಂದ ಬಿ.ಸಿ.ರೋಡ್‌ಗೆ ಪರವಾನಿಗೆ ಹೊಂದಿ ರುವ ಟೂರಿಸ್ಟ್ ಕಾರುಗಳ ಹೊರತಾಗಿ ಖಾಸಗಿ ಕಾರುಗಳು ಜನರನ್ನು ತುಂಬಿಸಿಕೊಂಡು ಸಂಚಾರ ನಡೆಸು ತ್ತಿವೆ. ಟೂರಿಸ್ಟ್ ಚಾಲಕರು ಕಷ್ಟಪಟ್ಟು ತಮ್ಮ ಕುಟುಂಬ-ಸಂಸಾರದ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಮಾನ್ಯ ಉಪ್ಪಿನಂಗಡಿ ಠಾಣಾ ಪೊಲೀಸರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಖಾಸಗಿ ಕಾರು ಚಾಲಕರ ಹಾವಳಿ ಯಿಂದ ನಮ್ಮನ್ನು ರಕ್ಷಿಸುವರೇ?
ನೊಂದ ಟೂರಿಸ್ಟ್ ಕಾರು ಚಾಲಕರು, ಉಪ್ಪಿನಂಗಡಿ

ಕ್ರಮ ಕೈಗೊಳ್ಳಿ
ನಾನು ಎರಡು ದಿನಗಳ ಹಿಂದೆ ಮಂಗಳೂರಿನಿಂದ ಮಣಿಪಾಲಕ್ಕೆ ಹೋಗಲು ‘ಭಾರತಿ’ ಎಕ್ಸ್‌ಪ್ರೆಸ್ ಬಸ್ ಹತ್ತಿದೆ. ಮಂಗಳೂರಿನಲ್ಲಿ ಮಣಿಪಾಲ ಎಂದು ಕೂಗುತ್ತಿದ್ದ ಕಂಡಕ್ಟರ್ ಮುಂದೆ ಉಡುಪಿ ಎಂದಷ್ಟೇ ಕೂಗು ತ್ತಿದ್ದ. ಕೊಟ್ಟಾರ ಬರುವಷ್ಟರಲ್ಲಿ ನಾನು ಮಣಿಪಾಲಕ್ಕೆ ಟಿಕೆಟ್ ಪಡೆಯಲು ಮುಂದಾದಾಗ ಮಣಿಪಾಲಕ್ಕೆ ಹೋಗುವುದಿಲ್ಲ, ಉಡುಪಿಗೆ ಮಾತ್ರ ಎಂದ. ಈ ಬಗ್ಗೆ ಪ್ರಶ್ನಿಸಿದ ಪ್ರಯಾ ಣಿಕರ ಬಳಿ ಅಸಭ್ಯವಾಗಿ ವರ್ತಿಸಿದ. ಕೊನೆಗೆ ನಾನು ಹಾಗೂ ಇತರ ಕೆಲವು ಪ್ರಯಾಣಿಕರು ಅರ್ಧದಲ್ಲೇ ಇಳಿಯು ವಂತಾಯಿತು. ಮಣಿಪಾಲಕ್ಕೆ ಸಂಚರಿ ಸುವ ಎಕ್ಸ್‌ಪ್ರೆಸ್ ಬಸ್ ಸಿಬ್ಬಂದಿಗೆ ಪಾಸಿಂಗ್ ಅಭ್ಯಾಸವಾಗಿ ಹೋಗಿದೆ. ಈ ಬಗ್ಗೆ ಬಸ್ ಮಾಲಕರು ಗಮನಿಸಿ ಕ್ರಮ ಕೈಗೊಳ್ಳುವರೇ?
ಪ್ರಮೋದ್, ಮಂಗಳೂರು

ವೆನ್‌ಲಾಕ್ ಆರೋಗ್ಯ ಸಚಿವರ ಹಿಡಿತದಲ್ಲಿಲ್ಲವೇ?
ಮಂಗಳೂರಿನ ಸರಕಾರಿ ವೆನ್‌ಲಾಕ್ ಆಸ್ಪತ್ರೆಯಲ್ಲಿ ಆಗಾಗ ಏನಾದರೊಂದು ಹಗರಣ ನಡೆ ಯುತ್ತಲೇ ಇರುತ್ತದೆ. ಇತ್ತೀಚಿಗೆ ಔಷಧಿ ಹಗರಣದ ನಿಖರ ಮಾಹಿತಿ ಯನ್ನು ಜಯಕಿರಣ ಪತ್ರಿಕೆ ಓದುಗ ರಿಗೆ ನೀಡಿದೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಇಲ್ಲಿ ಎಷ್ಟೇ ಅವ್ಯವ ಹಾರ, ಹಗರಣ ನಡೆದರೂ ರಾಜ್ಯ ಆರೋಗ್ಯ ಸಚಿವರು, ಇಲಾಖೆ ಇದನ್ನು ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ. ಇಲ್ಲಿನ ಹಗರಣಗಳ ಬಗ್ಗೆ ತನಿಖೆ ನಡೆದು ಆರೋಪಿಗಳಿಗೆ ಶಿಕ್ಷೆಯಾದ ಯಾವುದೇ ಉದಾಹರಣೆಗಳಿಲ್ಲ. ವೆನ್‌ಲಾಕ್ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್‌ಗಳಿಂದ ಹಿಡಿದು ವೈದ್ಯರವರೆಗೆ ಎಲ್ಲರೂ ಹಣ ನುಂಗುವವರೇ ಆಗಿದ್ದಾರೆ. ಇವರಿಗೆ ಕಾನೂನು, ಇಲಾಖೆ ಯ ಯಾವುದೇ ಭಯವಿಲ್ಲ. ಒಟ್ಟಾರೆ ಬಡವರ ಆಸ್ಪತ್ರೆ ಯೊಂದು ಬಡವರ ಹಿತ ಚಿಂತನೆಯನ್ನು ಗಮನಿಸದೆ ಬಡರೋಗಿಗಳ ರಕ್ತ ಹೀರು ತ್ತಿರುವುದು ದುರಂತವಲ್ಲದೆ ಇನ್ನೇನು?
ಕಾಮತ್, ಮಠದಕಣಿ

ಒಳ್ಳೆಯ ಚಿತ್ರಗಳಿಗೆ ಪ್ರೇಕ್ಷಕರ ಕೊರತೆ
ಕನ್ನಡ ಭಾಷೆಯಲ್ಲಿ ಪರಭಾಷೆಗಳಿಂದ ಭಟ್ಟಿ ಇಳಿಸಿದ ಚಿತ್ರಗಳೇ ಹೆಚ್ಚಾಗಿ ಪ್ರದರ್ಶನ ಕಾಣುತ್ತಿವೆ. ಸುದೀಪ್, ದರ್ಶನ್, ರವಿಚಂದ್ರನ್, ಗಣೇಶ್, ಯೋಗಿ ಚಿತ್ರಗಳು ಯಾವುದೋ ಭಾಷೆಯ ಚಿತ್ರಗಳಿಂದ ಕದ್ದ ಕಥೆಯನ್ನು ಆಧರಿಸಿರುತ್ತದೆ. ಈ ನಡುವೆ ಬೆರಳೆಣಿಕೆಯ ಕಥೆಗಾರರು, ನಿರ್ದೇಶಕರು ಮಾತ್ರ ಸ್ವಮೇಕ್ ಚಿತ್ರಗಳನ್ನು ತಯಾರಿಸುತ್ತಾರೆ. ಆದರೆ ಇಂಥ ಚಿತ್ರಗಳನ್ನು ಮಾತ್ರ ಯಾರೂ ನೋಡುವುದಿಲ್ಲ. ಕೆಲವೇ ದಿನಗಳಲ್ಲಿ ಥಿಯೇಟರ್‌ಗಳಿಂದ ಎತ್ತಂಗಡಿ ಯಾಗು ತ್ತವೆ. ಮಸಾಲ ಚಿತ್ರಗಳನ್ನು ಹೊರಜಿಲ್ಲೆಯ ಪ್ರೇಕ್ಷಕರು ಮುಗಿಬಿದ್ದು ನೋಡುವುದರಿಂದ ದರ್ಶನ್ ಚಿತ್ರಗಳು ಸೋಲುತ್ತಿಲ್ಲ. ಸಮಾಜಕ್ಕೆ ಯಾವುದೇ ಸಂದೇಶ ನೀಡದ ಇಂಥ ಚಿತ್ರಗಳನ್ನು ಪ್ರೇಕ್ಷಕರು ತಿರಸ್ಕರಿಸಿ ಕನ್ನಡತನವನ್ನು ಕಾಪಾಡಿಕೊಳ್ಳಬೇಕು.
ಕುಮಾರಿ ಸ್ವಾತಿ, ಮೂಡುಶೆಡ್ಡೆ

ಸುರತ್ಕಲ್‌ನಲ್ಲಿ ಪಾದಚಾರಿಗಳ ಸಮಸ್ಯೆಗೆಂದು ಕೊನೆ?
ಸುರತ್ಕಲ್ ಪೇಟೆಯಲ್ಲಿ ಪಾದಚಾರಿಗಳು ರಸ್ತೆ ದಾಟುವಲ್ಲಿ ನಿತ್ಯ ಸಂಕಷ್ಟವನ್ನೆದುರಿಸುತ್ತಾರೆ. ಇಲ್ಲಿ ಫ್ಲೈ ಓವರ್, ರಸ್ತೆ, ಬಸ್ ತಂಗುದಾಣ ಎಲ್ಲವೂ ನಿರ್ಮಾಣವಾಗಿದ್ದರೂ ಜಂಕ್ಷನ್‌ನಲ್ಲಿ ರಸ್ತೆ ದಾಟಲು ಭಯ ಕಾಡುತ್ತದೆ. ಇದಕ್ಕೆ ಕಾರಣ ಉಡುಪಿ ಕಡೆ ಯಿಂದ ಬರುವ ವಾಹನ ಸವಾರರಲ್ಲಿ ಅರ್ಧದಷ್ಟು ಮಂದಿ ಒನ್‌ವೇಗೆ ನುಗ್ಗಿ ವಿರುದ್ಧ ದಿಕ್ಕಿನಲ್ಲಿ ಸಂಚಾರ ನಡೆಸುವುದು. ಎಲ್ಲಾ ವಾಹನಗಳು ಫ್ಲೈ ಓವರ್ ಮೇಲ್ಗಡೆ ಸಾಗಬೇಕೆಂದಿದ್ದರೂ ಎಕ್ಸ್‌ಪ್ರೆಸ್, ಸರ್ವಿಸ್ ಬಸ್‌ಗಳು ಫ್ಲೈ ಓವರ್ ಬಿಟ್ಟು ಕೆಳಕ್ಕಿಳಿ ಯುತ್ತವೆ. ಇದರಿಂದ ಕೆಳಗೆ ಸಂಚರಿಸುವ ವಾಹನ ಸವಾರರು ಗಲಿಬಿಲಿಗೊಳ್ಳುತ್ತಾರೆ. ಫ್ಲೈ ಓವರ್ ಮೇಲ್ಗಡೆ ಸಾಗುವ ಬಸ್‌ಗಳಲ್ಲಿ ಇರುವ ಪ್ರಯಾಣಿಕರು ಸುರತ್ಕಲ್‌ನಲ್ಲಿ ಇಳಿಯಬೇಕಿದ್ದರೆ ಎಲ್ಲೋ ರಸ್ತೆಬದಿ ಇಳಿಸುತ್ತಾರೆ. ಇವರಿಗೆ ಗೊವಿಂದದಾಸ್ ಕಾಲೇಜ್ ಸಮೀಪ ಸುಸಜ್ಜಿತ ಬಸ್ ತಂಗುದಾಣ ಇನ್ನೂ ನಿರ್ಮಾಣವಾಗಿಲ್ಲ. ಈ ಬಗ್ಗೆ ಮಹಾನಗರ ಪಾಲಿಕೆ ಕೂಡಲೇ ಕ್ರಮ ಕೈಗೊಂಡು ಸುರತ್ಕಲ್‌ನಲ್ಲಿ ಸುಗಮ ವಾಹನ ಸಂಚಾರಕ್ಕೆ ಶ್ರಮಿಸಬೇಕಾಗಿ ವಿನಂತಿ.
ಸುನಿಲ್, ಸುರತ್ಕಲ್

ಫರಂಗಿಪೇಟೆಯಲ್ಲಿ ಬಾಲಕಾರ್ಮಿಕರನ್ನು ಕೆಲಸದಿಂದ ಮುಕ್ತಿಗೊಳಿಸಿ
ಬಂಟ್ವಾಳ ತಾಲೂಕಿನ ಪುದು ಗ್ರಾಮದ ಫರಂಗಿಪೇಟೆಯ ಹೆಚ್ಚಿನ ಅಂಗಡಿ, ಹೊಟೇಲ್ ಗಳಲ್ಲಿ ಬಾಲ ಕಾರ್ಮಿಕರನ್ನು ಕೆಲಸಕ್ಕೆ ಇಟ್ಟು ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ. ಅಂಗಡಿ, ಹೊಟೇಲ್‌ಗಳಲ್ಲಿ ಕೆಲಸಕ್ಕೆ ಇರುವುದು ಹೆಚ್ಚಾಗಿ ಶಾಲೆಗೆ ಹೋಗದ ಮಕ್ಕಳಾಗಿರುತ್ತಾರೆ. ಪುದು ಗ್ರಾಮದ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳು ಶಾಲೆಗೆ ಗೈರುಹಾಜರಾದರೆ ಶಿಕ್ಷಕರು ಮಕ್ಕಳ ಪೋಷಕರು ಗಮನಕ್ಕೆ ತಂದು ನಂತರ ಅವರ ಮನೆಗೆ ಹೋಗಿ ಶಿಕ್ಷಣದ ಬಗ್ಗೆ ಅರಿವು ನೀಡಿ ಮಕ್ಕಳು ಶಾಲೆಗೆ ಬರುವಂತೆ ನೋಡಿಕೊಳ್ಳುತ್ತಾರೆ ಇದು ನಿಯಮವೂ ಹೌದು. ಆದರೆ ಫರಂಗಿಪೇಟೆಯ ಅಂಗಡಿ, ಹೊಟೇಲ್‌ಗಳ ಮಾಲಕರು ಅಪಾಪ್ತ ಮಕ್ಕಳನ್ನು ಕೆಲಸಕ್ಕಿಟ್ಟು ಬಾಲ ಕಾರ್ಮಿಕ ವಿರೋಧ ಕಾಯ್ದೆಯನ್ನು ಉಲ್ಲಂಘಿಸುತ್ತಿದ್ದಾರೆ.
ಬಾಲ ಕಾರ್ಮಿಕ ವಿರೋಧಿ ಕಾಯ್ದೆ ಯಂತೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ೧೪ವರ್ಷ ಪ್ರಾಯದ ಒಳಗಿನ ಬಾಲಕ-ಬಾಲಕಿಯರನ್ನು ಕೆಲಸಕ್ಕೆ ಇಟ್ಟುಕೊಳ್ಳುವಂ ತಿಲ್ಲ. ಒಂದು ವೇಳೆ ಈ ಕಾನೂನನ್ನು ಉಲ್ಲಂಘಿಸಿದರೆ ಅವರಿಗೆ ಏಳರಿಂದ ಹದಿ ನಾಲ್ಕು ವರ್ಷ ಸಜೆಯನ್ನು ನಿಗದಿಪ ಡಿಸಲಾಗಿದೆ. ಯಾವುದೇ ವ್ಯಾಪಾರ ವಾಗಿರಬಹುದು ಅಥವಾ ಸಂಸ್ಥೆಯಾ ಗಿರಬಹುದು. ಅವರ ಪರವಾನಿ ಗೆಯನ್ನು ರದ್ದುಪಡಿಸುವ ಅಧಿಕಾರ ಈ ಬಾಲ ಕಾರ್ಮಿಕ ಕಾಯ್ದೆಗೆ ಇದೆ. ಬಾಲಕಾರ್ಮಿಕರಿಗೆ ಅವರ ಶಿಕ್ಷಣಕ್ಕೆ ಒತ್ತು ಕೊಟ್ಟು ಅವರ ಉಜ್ವಲ ಭವಿಷ್ಯಕ್ಕೆ ನಾವೆಲ್ಲರೂ ಸಹಕರಿಸ ಬೇಕಾಗಿದೆ.
ಸಂತು, ಫರಂಗಿಪೇಟೆ

ಮಂಗಳೂರು ಯಾಕೆ ಹೀಗಾಗುತ್ತಿದೆ?
ಕೆಲವು ತಿಂಗಳಿಂದೀಚೆಗೆ ಮಂಗಳೂರು ಪಟ್ಟಣ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಅನೇಕ ಕೊಲೆ ಪ್ರಕರಣಗಳು ನಡೆದಿವೆ. ಕಳ್ಳತನ, ದರೋಡೆ, ಅತ್ಯಾಚಾರ ಕೃತ್ಯಗಳನ್ನು ಲೆಕ್ಕ ಇಟ್ಟವರಿಲ್ಲ. ಜಿಲ್ಲೆಯು ಪೊಲೀಸ್ ಕಮಿಷನರೇಟ್ ವ್ಯವಸ್ಥೆಗೆ ಒಳಪಟ್ಟ ನಂತರವೂ ಅಪರಾಧ ಚಟುವಟಿಕೆಗಳು ನಿಯಂ ತ್ರಣಕ್ಕೆ ಬಂದಿಲ್ಲ. ಪೊಲೀಸ್ ವ್ಯವಸ್ಥೆಗೆ ಆಧುನಿಕ ಶಸ್ತ್ರಾಸ್ತ್ರ, ವಾಹನ ಎಲ್ಲವನ್ನೂ ಕೊಡಲಾಗಿದೆ. ಆದರೂ ಅಪರಾಧಿ ಕೃತ್ಯಗಳು ಎಗ್ಗಿಲ್ಲದೆ ನಡೆಯುತ್ತಿದೆ. ಇದಕ್ಕೆ ಕೆಲವು ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮಾಜಘಾತುಕ ಶಕ್ತಿಗಳ ಜೊತೆ ಶಾಮೀಲಾಗಿರು ವುದೇ ಕಾರಣ. ಕಮಿಷನರ್ ಅವರು ಜಿಲ್ಲೆಯ ಪೊಲೀಸ್ ವ್ಯವಸ್ಥೆಯನ್ನು ಸುಧಾರಿಸದಿದ್ದಲ್ಲಿ ಜನರಿಗೆ ನೆಮ್ಮದಿ ಯ ಜೀವನ ಮರೀಚಿಕೆಯಾದೀತು.
ಸುಮಿತ್ ಕೆ, ಕಂಕನಾಡಿ

ಚರಂಡಿ ಹೂಳು ತುಂಬಿದೆ
ನಗರದ ಯೆಯ್ಯಾಡಿಯಿಂದ ಕೆಪಿಟಿವರೆಗಿನ ಕಾಂಕ್ರೀಟ್ ರಸ್ತೆಯ ಬದಿಯಲ್ಲಿ ಚರಂಡಿಯನ್ನು ನಿರ್ಮಿಸಿ ಅದರ ಮೇಲೆ ಚಪ್ಪಡಿ ಕಲ್ಲು ಹಾಕಲಾಗಿದೆ. ಇಲ್ಲಿನ ಸಮಸ್ಯೆ ಯೇನೆಂದರೆ ಚರಂಡಿಯಲ್ಲಿ ಹೂಳು ತುಂಬಿಕೊಂಡಿದೆ. ಮೊನ್ನೆ ಸುರಿದ ಮಳೆಗೆ ನೀರು ಸರಾಗವಾಗಿ ಹರಿದು ಹೋಗದೆ ಅಲ್ಲಲ್ಲಿ ಚರಂಡಿ ತುಂಬಿ ಕೊಂಡಿತ್ತು. ಇದಕ್ಕೆ ತ್ಯಾಜ್ಯ ವಸ್ತುಗಳು ಚರಂಡಿಯಲ್ಲಿ ತುಂಬಿ ಕೊಂಡಿ ರುವುದೇ ಕಾರಣ. ಮನಪಾ ಆಡಳಿತ ಈ ಬಗ್ಗೆ ಕೂಡಲೇ ಗಮನಿಸಬೇಕು. ಇಲ್ಲಿನ ಚರಂಡಿಗಳ ಹೂಳನ್ನೆತ್ತಿ ಮಳೆಯ ನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿದರೆ ಒಳ್ಳೆ ಯದು. ಇಲ್ಲವಾದಲ್ಲಿ ಮಳೆಗಾ ಲದಲ್ಲಿ ಚರಂಡಿಯ ನೀರು ರಸ್ತೆಯ ಮೇಲೆ ಹರಿಯುವಂತಾ ದೀತು. ಸ್ಥಳೀಯ ಕಾರ್ಪೊರೇಟರ್ ಇನ್ನಾ ದರೂ ಇತ್ತ ಗಮನಿಸುವರೇ?
ಭುವನ್, ಯೆಯ್ಯಾಡಿ

ಅನಗತ್ಯ ಹಂಪ್ಸ್‌ಗಳು
ಕೊಟ್ಟಾರ ಜಂಕ್ಷನ್‌ನಿಂದ ಲಾಲ್‌ಬಾಗ್‌ವರೆಗೆ ರಸ್ತೆಯ ಅಲ್ಲಲ್ಲಿ ಹಂಪ್ಸ್‌ಗಳನ್ನು ಅಳವಡಿಸುವ ಮೂಲಕ ವಾಹನ ಸವಾರರಿಗೆ ಸಮಸ್ಯೆ ಉಂಟುಮಾಡಲಾಗುತ್ತಿದೆ. ಇಲ್ಲಿ ಅರ್ಧ ಕಿ.ಮೀ.ಗಿಂತಲೂ ಕಡಿಮೆ ದೂರದಲ್ಲಿ ಹಂಪ್ಸ್ ಹಾಕ ಲಾಗಿದೆ.
ಮಹಾನಗರ ಪಾಲಿಕೆ ಈ ಬಗ್ಗೆ ಕ್ರಮ ಕೈಗೊಳ್ಳುವಾಗ ವಾಹನ ಸವಾ ರರ ಬಗ್ಗೆ ಕಿಂಚಿತ್ತೂ ಗಮನ ನೀಡಿಲ್ಲ. ಯಾಕೆಂದರೆ ಈ ಹಂಪ್ಸ್ ಗಳಲ್ಲಿ ಸಂಚರಿಸುವಾಗ ದ್ವಿಚಕ್ರ ಸವಾರರು ಕಕ್ಕಾಬಿಕ್ಕಿಯಾಗಿ ಅಪ ಘಾತದ ಭಯವೂ ಇದೆ.
ರಂಜನ್, ಕೂಳೂರು

ಆರೋಪಿಗಳ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಿ
ಎಪ್ರಿಲ್ ೩೦ರಂದು ನಡೆದ ಬಸ್ ಚಾಲಕನ ಮೇಲಿನ ಹಲ್ಲೆ ಪ್ರಕರಣದ ಆರೋ ಪಿಗಳು ಮೊಯಿದ್ದೀನ್ ನಝೀರ್ ಮತ್ತು ಆತನ ಸಹಚರರೇ ಅಥವಾ ಪೊಲೀಸರೇ ಎನ್ನುವುದು ಸಾರ್ವಜನಿಕರ ಸಂಶಯಕ್ಕೆ ಎಡೆ ಮಾಡಿ ಕೊಟ್ಟಿದೆ. ಪ್ರಕರಣದ ಮೊದಲ ಹಂತದಿಂದ ಇಂದಿನ ತನಕ ಪೊಲೀಸರ ಲೋಪದೋಷಗಳು ಎದ್ದು ಕಾಣುತ್ತಿದೆ.
ಎ.೩೦ರ ಸಂಜೆ ಬಿ.ಸಿ.ರೋಡಿನಿಂದ ಮಂಗಳೂರು ಕಡೆಗೆ ಸಂಚರಿಸುವ ಶಾರದ ಬಸ್ಸು ಮುಡಿಪು ಸಮೀಪದ ಮಿತ್ತಕೋಡಿ ಎಂಬಲ್ಲಿ ಬರುತ್ತಿರುವ ವೇಳೆ ಹಿಂದಿನ ವಾಹನಕ್ಕೆ ಬಸ್ಸಿನ ಚಾಲಕನು ದಾರಿ ನೀಡದ ನೆಪವೊಡ್ಡಿ ಬಸ್ಸಿಗೆ ಅಡ್ಡಗಟ್ಟಿದ ಕಾರು ಚಾಲಕನಾದ ಫಜೀರ್ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಮುಡಿಪು ಘಟಕದ ಅಧ್ಯಕ್ಷ ನಾಗಿರುವ ಮೊಯಿದ್ದೀನ್ ನಝೀರ್ ಮತ್ತು ಆತನ ಸಹಚರರು ಚಾಲಕನನ್ನು ಬಸ್‌ನಿಂದ ಎಳೆದು ಹಾಕಿ ಹಿಗ್ಗಾಮುಗ್ಗವಾಗಿ ಮನಬಂದಂತೆ ಥಳಿಸಿ ಅವಾಚ್ಯ ಶಬ್ದಗಳಿಂದ ಬೈದು ದಾರಿಯಲ್ಲಿ ಸಿಕ್ಕಿದ ಕಲ್ಲು ಹಾಗೂ ಇನ್ನಿತರ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಈ ಮಧ್ಯೆ ಹಿಂದಿನಿಂದ ಬಂದ ಮಾರುತಿ ರಿಟ್ಜ್ ಕಾರಿಗೆ ಕೈಯಲ್ಲಿ ಬಡಿದು ನಿಲ್ಲಿಸಿ ಅದರೊಳಗಿದ್ದ ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಲು ಆರೋಪಿಗಳು ಮುಂದಾಗಿದ್ದರು. ನಂತರ ರಿಟ್ಜ್ ಕಾರಲ್ಲಿದ್ದ ಚಾಲಕ ಮತ್ತು ಸ್ನೇಹಿತರು ಸೇರಿ ಆರೋಪಿಯಾದ ಮೊಯಿದ್ದೀನ್ ನಝೀರ್‌ನನ್ನು ರಿಟ್ಜ್ ಕಾರಲ್ಲಿ ಹಾಕಿ ಕೋಣಾಜೆ ಪೊಲೀಸ್ ಠಾಣೆಗೆ ಎಳೆದು ತಂದಿದ್ದರು. ಆದರೆ ಪೊಲೀಸರು ಆರೋಪಿಯನ್ನು ಬಿಟ್ಟು ರಿಟ್ಜ್ ಕಾರಿನ ಚಾಲಕನನ್ನು ಆರೋಪಿ ಎಂದು ಪರಿಗಣಿಸಿ ಚೆನ್ನಾಗಿ ಥಳಿಸಿದ್ದಾರೆ. ಇದು ಗ್ರಾ.ಪಂ. ಅಧ್ಯಕ್ಷನ ಹಣದ ಪ್ರಭಾವವೇ?
ಆದಾದ ನಂತರ ಬಸ್ಸಿನ ಮಾಲಕರು ಕೇಸು ದಾಖಲಿಸಲು ಬಂದಾಗ ಮಾತುಕತೆ ನಡೆಸಿದ ಪೊಲೀಸರು ಆರೋಪಿಯು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿರುವುದರಿಂದ ಕೇಸನ್ನು ದಾಖ ಲಿಸದೆ ಪ್ರಕರಣ ಮುಚ್ಚಿ ಹಾಕಲು ಲಂಚ ಕೊಡಿ ಎಂದಿದ್ದಾರೆ. ಹೀಗಾದರೆ ಆರೋಪಿಗೆ ಶಿಕ್ಷೆ ಆಗು ವುದು ಹೇಗೆ? ಹಾಗೂ ಹಲ್ಲೆಗೊಳಗಾದ ಬಸ್ ಚಾಲಕ ಚಾರ್ಲಿ ಪಿಂಟೋಗೆ ನ್ಯಾಯ ಸಿಗುವುದು ಹೇಗೆ? ಮರುದಿನ ಮೇ ೧ರಂದು ಬೆಳಗ್ಗೆ ಮುಡಿಪಿನಿಂದ ಸಾಗುವ ಎಲ್ಲಾ ಬಸ್ ಅನಿರ್ದಿ ಷ್ಟಾವಧಿ ಮುಷ್ಕರ ನಡೆಸಿದ್ದಾರೆ ಮತ್ತು ಆರೋಪಿಗೆ ಜಾಮೀನು ರಹಿತ ಕೇಸನ್ನು ದಾಖಲಿಸಿದ್ದಾರೆ. ಇದಕ್ಕೆ ಪ್ರತಿಸ್ಪಂದಿಸಿದ ಪೊಲೀಸರು ಆರೋಪಿಯನ್ನು ೨೪ ಗಂಟೆಯೊಳಗೆ ಬಂಧಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ಹಲ್ಲೆ ಆರೋಪಿ ಮಂಜೇಶ್ವರದಲ್ಲಿ ತಲೆಮರೆಸಿ ಕೊಂಡಿದ್ದಾನೆಂದು ಸ್ಪಷ್ಟವಾಗಿ ಹೇಳುತ್ತಿರುವ ಪೊಲೀಸರು ಆತನನ್ನು ಹಿಡಿಯಲು ಮೀನಮೇಷ ಎಣಿಸುತ್ತಿರುವುದು ಯಾಕೆ? ಇದಕ್ಕೆ ಕಾರಣ ಕಾಂಗ್ರೆಸ್ ಪುಡಾರಿಗಳ ಹಣದ ಪ್ರಭಾವವೇ? ಇನ್ನಾದರೂ ಪೊಲೀಸರು ಎಚ್ಚೆತ್ತು ಇಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ವಿನಂತಿ.
ನೊಂದ ಗ್ರಾಮಸ್ಥರು, ಫಜೀರು

ಸಮಸ್ಯೆಗಳ ಆಗರವಾಗುತ್ತಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ
ನೊಂದ ಪ್ರಯಾಣಿಕ, ಮಂಗಳೂರು
ಮಂಗಳೂರಿನ ಲಾಲ್‌ಬಾಗ್‌ನಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರುಗಡೆಯ ರಸ್ತೆಯಲ್ಲಿ ಖಾಸಗಿ ಪ್ರಯಾಣಿಕ ಬಸ್‌ಗಳನ್ನು ಸಾಲಾಗಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುವುದು ಹತ್ತಿಸಿಕೊಳ್ಳುವುದರಿಂದ ರಸ್ತೆಯಲ್ಲಿ ಸುಗಮ ವಾಹನ ಸಂಚಾರ ಹಾಗೂ ನಾಗರಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ.
ಈ ಹಿಂದೆ ಕೂಡ ಇದೇ ರೀತಿ ತೊಂದರೆ ಆಗುತ್ತಿರು ವುದನ್ನು ಮನಗಂಡು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಆದೇಶವೊಂದನ್ನು ಹೊರಡಿಸಿ ಮಂಗಳೂರು ನಗರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂದು ಗಡೆಯ ರಸ್ತೆಯಲ್ಲಿ ಎರಡೂ ಕಡೆ ೩೦೦ ಮೀಟರ್ ದೂರದವರೆಗೆ ಈ ಕೆಳಕಂಡಂತೆ ಪ್ರಯಾಣಿಕರ ಸಾರಿಗೆ ವಾಹನಗಳ ನಿಲುಗಡೆ ಯನ್ನು ಪೂರ್ಣವಾಗಿ ನಿಷೇಧಿಸಿದ್ದರು. ಅವೆಂದರೆ:
೧. ಮಂಗಳೂರು ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರಿನ ರಸ್ತೆಯಿಂದ ಲಾಲ್‌ಭಾಗ್ ಕೂಡುರಸ್ತೆ ಹಾಗೂ ಬಿಜೈ ಚರ್ಚ್-ಬೋಂದೆಲ್ ಕಡೆಗೆ ಹೋಗುವ ರಸ್ತೆ. ೨. ಬಿಜೈ ಕಾಪಿಕಾಡು ಬಾಳಿಗಾ ಸ್ಟೋರ‍್ಸ್ ರಸ್ತೆ.
ಅದರಂತೆ ಇತ್ತಿಚೆಗಿನವರೆಗೆ ಸದ್ರಿ ರಸ್ತೆಗಳಲ್ಲಿ ಖಾಸಗಿ ಬಸ್ ಗಳನ್ನು ನಿಲುಗಡೆಗೊಳಿಸುತ್ತಿರಲಿಲ್ಲ. ಆದರೆ ಇತ್ತಿಚಿನ ದಿನಗಳಲ್ಲಿ ಅಖಿಲ ಭಾರತೀಯ ಪರವಾನಿಗೆಯ ಬಸ್‌ಗಳನ್ನು ನಿಲುಗಡೆ ಗೊಳಿಸಲಾಗುತ್ತಿದೆ. ಮುಖ್ಯವಾಗಿ ಮಧ್ಯಾಹ್ನ ೧೨ ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗಿನ ಅವಧಿಯಲ್ಲಿ ಹಾಗೂ ರಾತ್ರಿ ಎಂಟು ಗಂಟೆಯಿಂದ ೧೧.೩೦ ಗಂಟೆಯವರೆಗಿನ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರುಗಡೆ ಇವುಗಳನ್ನು ನಿಲುಗಡೆಗೊಳಿಸಲಾಗುತ್ತಿದೆ.
ಸದ್ರಿ ಖಾಸಗಿ ಬಸ್‌ಗಳಲ್ಲಿ ಚಾಲಕ-ನಿರ್ವಾಹಕರು ಮಾತ್ರ ವಲ್ಲದೆ ಲೋಡರ್‌ಗಳು ಕೂಡ ಕರ್ತವ್ಯ ನಿರ್ವಹಿಸು ತ್ತಿದ್ದಾರೆ. ಈ ಬಸ್‌ಗಳನ್ನು ಬಸ್ ನಿಲ್ದಾಣದ ಪ್ರವೇಶದ್ವಾರದ ಎದುರು ಗಡೆಯ ರಸ್ತೆಯಲ್ಲೆ ನಿಲುಗಡೆಗೊಳಿಸಿ, ಕೆಎಸ್‌ಆರ್‌ಟಿಸಿ ನಿಲ್ದಾಣ ದೊಳಗೆ ಬರುವ ಪ್ರಯಾಣಿಕರನ್ನು ಕೂಡ ಕೂಗಿ ಕರೆದು ಖಾಸಗಿ ಬಸ್‌ಗಳತ್ತ ಸೆಳೆಯುತ್ತಿದ್ದಾರೆ. ಖಾಸಗಿ ಬಸ್‌ನವರು ಈ ರೀತಿಯಾಗಿ ತಮ್ಮ ಬಸ್‌ಗಳನ್ನು ನಿಲ್ದಾಣದ ಎದುರು ರಸ್ತೆಯಲ್ಲಿಯೇ ನಿಲುಗಡೆಗೊಳಿಸಿ ಪ್ರಯಾಣಿಕರನ್ನು ಸೆಳೆಯು ತ್ತಿರುವುದರಿಂದ ಅಲ್ಲಿ ಆಗಾಗ ರಸ್ತೆ ತಡೆ ಉಂಟಾಗಲು ಕಾರಣ ವಾಗುತ್ತಿದೆ. ಹಾಗೂ ಇದರಿಂದಾಗಿ ಬಸ್ ನಿಲ್ದಾಣದ ಬಳಿಯಲ್ಲಿ ಪ್ರಯಾಣಿಕರು ಮತ್ತು ಖಾಸಗಿ ಬಸ್ ಸಿಬ್ಬಂದಿಗಳು ಹಾಗೂ ನಿಗಮದ ಸಿಬ್ಬಂದಿಯ ಮಧ್ಯೆ ಮನಸ್ತಾಪ ಉಂಟಾಗಿ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ. ಹಲವು ಬಾರಿ ಇಂತಹ ಘಟನೆಗಳು ಸಂಭವಿಸಿ ಶಾಂತಿಭಂಗ ಉಂಟಾಗಿವೆ.
ಇಷ್ಟೇ ಅಲ್ಲದೆ ಇಲ್ಲಿ ಯಾವಾಗ ನೋಡಿದರೂ ಕುಡುಕರ ಹಾವಳಿ ತಪ್ಪಿದಲ್ಲ. ಹಗಲಿನ ಹೊತ್ತೇ ಇಲ್ಲಿ ರಸ್ತೆಯಲ್ಲಿ ನಡೆದಾಡಲು ಹೆಣ್ಣುಮಕ್ಕಳಿಗೆ ಭಯವಾಗುತ್ತದೆ. ರಾತ್ರಿಯಂತೂ ಕುಡುಕರ ಸೈನ್ಯವೇ ಇಲ್ಲಿ ನೆರೆದಿರುತ್ತದೆ. ಕೆಲಸಕ್ಕೆಂದು ಹೊರಗಡೆಯಿಂದ ಬಂದ ಕಾರ್ಮಿಕರೇ ಎದುರು ಫುಟ್‌ಪಾತ್‌ನಲ್ಲಿ ತುಂಬಿಕೊಂಡಿ ದ್ದಾರೆ. ಹೆಚ್ಚಿನ ಕಾರ್ಮಿಕರ ನೆಲೆಯೇ ಎಂದರೆ ತಪ್ಪಿಲ್ಲ. ಬೆಳಗ್ಗೆ ಕುಡಿದು ತೂರಾಡುತ್ತಿರುವ ಇವರ ಬಾಯಿಯಿಂದ ಅವಾಚ್ಯ ಶಬ್ದಗಳು ಬರುತ್ತಿರುತ್ತದೆ. ಇದರಿಂದ ಅಪರೂಪಕ್ಕೆಂದು ಮಂಗ ಳೂರಿಗೆ ಬಂದ ದೂರ ಪ್ರಯಾಣಿಕರು ಇಲ್ಲಿನ ಪರಿಸ್ಥಿತಿಯನ್ನು ನೋಡಿ ಮಂಗಳೂರು ಎಂದರೆ ಹೀಗೇನಾ ಎನ್ನುವಂತಹ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಇದಕ್ಕೆ ಸಂಬಂಧಪಟ್ಟವರು ಇದರತ್ತ ಗಮನಹರಿಸಬೇಕು.
ಅಲ್ಲದೆ ಬಸ್ ನಿಲ್ದಾಣದ ಬಳಿ ಒಂದಲ್ಲ ಒಂದು ಕಾಮಗಾರಿ ನಡೆಯುತ್ತಲೇ ಇರುತ್ತದೆ. ಕಾಮಗಾರಿ ಪೂರ್ತಿಯಾಗಲು ಮಾತ್ರ ತುಂಬಾ ಸಮಯ ತೆಗೆದುಕೊಳ್ಳುತ್ತಾರೆ. ಇದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ತುಂಬಿ ತುಳುಕುತ್ತಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಯಾವುದೇ ಕಾಮಗಾರಿ ಮಾಡಿ ದರೂ ಆದಷ್ಟು ಬೇಗ ಮುಗಿಸಿ ಪ್ರಯಾಣಿಕರಿಗೆ ತೊಂದರೆ ಯಾಗದಂತೆ ನೋಡಿಕೊಳ್ಳಬೇಕು. ಆದುದರಿಂದ ಸಾರ್ವಜನಿಕರು ಹಾಗೂ ಕೆಎಸ್‌ಆರ್‌ಟಿಸಿ ಹಿತದೃಷ್ಟಿಯಿಂದ ಪೊಲೀಸ್ ಅಧೀಕ್ಷಕರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರುಗಡೆ ಖಾಸಗಿ ಬಸ್ ಗಳನ್ನು ನಿಲುಗಡೆಗೊಳಿಸುವುದನ್ನು ನಿಷೇಧಿಸಿ, ನಿಯಮ ಉಲ್ಲಂಘಿಸುವ ಖಾಸಗಿ ಪ್ರವರ್ತಕರ ಮೇಲೆ ಕ್ರಮ ತೆಗೆದು ಕೊಳ್ಳಬೇಕೆಂದು ವಿನಂತಿ.

ರಮ್ಯಾ ಸ್ಥಾನಕ್ಕೆ ಶ್ರೇಯಾ?

Posted by JAYAKIRANA Kirana on | 0 comments | Leave a comment...

ಪ್ರೇಮ್ ನಾಯಕನಾಗಿರುವ ಚಂದ್ರ ಚಿತ್ರದಿಂದ ನಾಯಕಿ ನಟಿ ರಮ್ಯಾ ಅವರು ಹೊರಬಂದ ಕೂಡಲೇ ಆ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆ ಮೂಡಿತ್ತು. ಚಂದ್ರ ಸಿನಿಮಾ ತಮಿಳು ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ತಯಾರಾಗಲಿದೆ. ಸಹಜವಾಗಿಯೇ ನಟ-ನಟಿಯರು ಕೂಡ ಎರಡೂ ಭಾಷೆಗಳಿಗೆ ಸಲ್ಲುವ ವರಾಗಿರಬೇಕು. ಆದ್ದರಿಂದ ರಮ್ಯಾ ಸ್ಥಾನ ತುಂಬುವವರು ಯಾರು ಎಂಬ ಪ್ರಶ್ನೆ ತುಂಬ ಆಸಕ್ತಿಯದ್ದಾಗಿತ್ತು. ಕೆಲವು ಮೂಲಗಳು ತಿಳಿಸುವ ಪ್ರಕಾರ ರಮ್ಯಾ ಜಾಗದಲ್ಲಿ ದಕ್ಷಿಣದಲ್ಲಿ ಅಪಾರ ಜನ ಪ್ರಿಯತೆ ಪಡೆದುಕೊಂಡಿರುವ, ರಾಣಿ ಎಂದೇ ಗುರುತಿಸಿಕೊಳ್ಳುತ್ತಿರುವ ಶ್ರೇಯಾ ಶರಣ್ ಅವರು ಕಾಣಿಸಿ ಕೊಳ್ಳಲಿದ್ದಾರಂತೆ. ಚಂದ್ರ ಸಿನಿಮಾದ ಕಥೆಯೂ ಒಬ್ಬಳು ರಾಜಕುಮಾರಿ ಯದ್ದು. ಇದೀಗ ಅದರಲ್ಲಿ ನಟಿಸುವ ಯೋಗ ಕ್ವೀನ್ ಎಂದು ಗುರುತಿಸಿ ಕೊಂಡಿರುವ ಶ್ರೇಯಾಗೆ ಸಿಕ್ಕಿರುವುದು ಕಾಕತಾಳೀಯವೋ, ಆಕಸ್ಮಿಕವೋ ಗೊತ್ತಿಲ್ಲ. ಹಾಗೆ ನೋಡಿದರೆ ಶ್ರೇಯಾ ಕನ್ನಡಕ್ಕೆ ಬರುವುದು ಹೊಸತಲ್ಲ. ಈ ಹಿಂದೆ ‘ಅರಸು’ ಚಿತ್ರದ ಅತಿಥಿ ಪಾತ್ರ ದಲ್ಲಿ ಕಾಣಿಸಿಕೊಂಡಿದ್ದರು. ಬಹುಷಃ ಅದೇ ಆಕೆಯ ಕನ್ನಡದ ಕೊನೆಯ ಸಿನಿಮಾ ಆಗಿರಬೇಕು.
ಕೆಲವು ಸಮಯದ ಹಿಂದೆ ಬೆಂಗಳೂರಿಗೆ ಬಂದಿದ್ದ ಶ್ರೇಯಾಳಲ್ಲಿ, ಕನ್ನಡದಲ್ಲಿ ಅವಕಾಶ ಸಿಕ್ಕರೆ ನಟಿಸುತ್ತೀರಾ ಎಂಬ ಪ್ರಶ್ನೆ ಕೇಳಿದ್ದರು ಮಾಧ್ಯಮದವರು. ಸದ್ಯಕ್ಕಂತೂ ಯಾವುದೇ ಆಫರ್‌ಗಳಿಲ್ಲ ಎಂದು ಉತ್ತರಿಸಿದ್ದರು. ಅವರು ಹಾಗೆ ಹೇಳಿದರೂ ಚಂದ್ರ ಚಿತ್ರಕ್ಕೆ ಆಕೆಯೇ ನಾಯಕಿಯಾಗುತ್ತಾರೆ ಎಂಬ ಮಾತು ಗಾಂಧಿನಗರದಲ್ಲಿ ದಟ್ಟವಾಗಿ ಕೇಳಿ ಬರುತ್ತಿದೆ. ಶ್ರೇಯಾ ಬರುವುದು ಹೌದೇ ಎಂದು ಕೇಳಿದಾಗ ಕಾದು ನೋಡಿ ಎಂದು ಉತ್ತರಿಸಿದ್ದಾರೆ ನಿರ್ದೇಶಕಿ ರೂಪಾ ಅಯ್ಯರ್. ಶ್ರೇಯಾಳ ಜತೆ ಯಲ್ಲಿ ಅಮೃತಾ ರಾವ್, ದಿಯಾ ಮಿರ್ಜಾ, ಅಮಲಾ ಪೌಲ್ ಮುಂತಾದ ವರೊಂದಿಗೂ ಮಾತುಕತೆ ನಡೆಯುತ್ತಿದೆಯಂತೆ. ಮೇ ೧೦ಕ್ಕೆ ಒಂದು ಹೆಸರನ್ನು ಅಂತಿಮಗೊಳಿಸ ಲಾಗುವುದು ಎಂದೂ ರೂಪಾ ಹೇಳಿದ್ದಾರೆ. ರಮ್ಯಾ ಚಂದ್ರ ಸಿನಿಮಾದ ಯೋಜನೆಯಿಂದ ಹೊರ ಬರದೆ ಇರುತ್ತಿದ್ದರೆ ಅದು ಈಗಾಗಲೇ ಬಿಡುಗಡೆಯಾಗಿರುತ್ತಿತ್ತು. ನೋಡೋಣ ಶ್ರೇಯ ಬರುತ್ತಾರಾ ಎಂದು.

ಸ್ಯಾಂಡಲ್‌ವುಡ್‌ನಲ್ಲಿ ಹೊಸ ವಿವಾದ-ಡರ್ಟಿ ಹೆಸರು

Posted by JAYAKIRANA Kirana on | 0 comments | Leave a comment...

ವಿದ್ಯಾ ಬಾಲನ್ ನಟನೆಯ ಡರ್ಟಿ ಪಿಕ್ಚರ್ ಸೂಪರ್ ಹಿಟ್ ಆದುದು ಈಗ ಇತಿಹಾಸ. ಇದೀಗ ಅದೇ ಸಿನಿಮಾ ಕನ್ನಡದಲ್ಲೂ ಬರಲು ಸಿದ್ಧತೆ ನಡೆಯುತ್ತಿದೆ. ಆದರೆ ಆರಂಭದಲ್ಲೇ ಅದು ವಿವಾದಕ್ಕೆ ನಾಂದಿ ಹಾಡಿದೆ. ಪಾಕಿಸ್ತಾನದ ನಟಿ ವೀಣಾ ಮಲ್ಲಿಕ್ ರನ್ನು ಬಳಸಿಕೊಂಡು ಕನ್ನಡದಲ್ಲಿ ಬರಲಿರುವ ಈ ಸಿನಿಮಾಕ್ಕೆ ಡರ್ಟಿ ಪಿಕ್ಚರ್ ಎಂದು ಹೆಸರು ಇಡಬಾರದು ಎಂದು ಮೂಲ ಡರ್ಟಿ ಪಿಕ್ಚರ್ ನಿರ್ದೇಶಕಿ ಏಕ್ತಾ ಕಪೂರ್ ಹೇಳು ತ್ತಿದ್ದಾರೆ.
ಆದರೆ ನಾನು ಅದೇ ಹೆಸರನ್ನು ಬಳಸುತ್ತೇನೆ ಎಂದು ಕನ್ನಡದ ನಿರ್ದೇಶಕ ತ್ರಿಶೂಲ್ ಹೇಳುತ್ತಿರುವುದು ಹೊಸ ವಿವಾದ ಕಾಣಿಸಿಕೊಳ್ಳಲು ಕಾರಣ. ಈಗಾಗಲೇ ಏಕ್ತಾ ಕಪೂರ್ ಅವರು ತ್ರಿಶೂಲ್‌ಗೆ ಪತ್ರ ಬರೆದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಡರ್ಟಿ ಪಿಕ್ಟರ್ ಅನ್ನು ನೀವು ರಿಮೇಕ್ ಮಾಡುತ್ತಿದ್ದೀರಿ ಎಂಬುದು ನನ್ನ ಗಮನಕ್ಕೆ ಬಂದಿದೆ. ಒಂದೊಮ್ಮೆ ಅದು ರಿಮೇಕ್ ಅಲ್ಲದಿದ್ದರೂ ಅದರ ಹೆಸರನ್ನು ಬದಲಿಸಬೇಕು ಎಂದು ಹೇಳಿದ್ದಾರೆ. ಆದರೆ ತ್ರಿಶೂಲ್ ಇದಕ್ಕೆ ಒಪ್ಪುತ್ತಿಲ್ಲ. ನಾವು ಮಾಡುತ್ತಿರುವುದು ಹಿಂದಿಯ ಡರ್ಟಿ ಪಿಕ್ಚರ್‌ನ ರಿಮೇಕ್ ಅಲ್ಲ. ಹಾಗಿರುವಾಗ ಹೆಸರು ಬದಲಿಸುವ ಅಗತ್ಯ ಬರುವುದಿಲ್ಲ. ನಾವು ಖಂಡಿತ ವಾಗಿಯೂ ಹೆಸರು ಬದಲಿ ಸುವುದಿಲ್ಲ. ಅದೇ ಹೆಸರಿನಲ್ಲಿ ಸಿನಿಮಾ ಮಾಡುತ್ತೇವೆ ಎಂದಿದ್ದಾರೆ. ಹಿಂದಿಯ ಡರ್ಟಿ ಪಿಕ್ಟರ್‌ನ ಯಾವು ದೇ ಅಂಶವನ್ನು ನಾವು ಬಳಸಿ ಕೊಳ್ಳುವುದಿಲ್ಲ. ಸಿಲ್ಕ್‌ಸ್ಮಿತಾಳ ಕೆಲವು ಘಟನೆ ಗಳನ್ನು ಕನ್ನಡದ ನೇಟಿವಿಟಿಗೆ ಹೊಂದಿಸಿಕೊಂಡು ಸಿನಿಮಾ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದರ ಜತೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಡರ್ಟಿ ಪಿಕ್ಚರ್ ಹೆಸರು ಬಳಕೆಗೆ ತ್ರಿಶೂಲ್‌ಗೆ ಒಪ್ಪಿಗೆ ನೀಡಿದೆ. ವಿವಾದ ಎಲ್ಲಿಗೆ ತಲುಪುತ್ತದೋ ಎಂಬುದಕ್ಕೆ ಮುಂದಿನ ದಿನಗಳೇ ಉತ್ತರವಾಗಲಿದೆ.

ಪಂಚಾಯತ್ ಸದಸ್ಯೆಯ ಮಾನಭಂಗ ಯತ್ನ

Posted by JAYAKIRANA Kirana on | 0 comments | Leave a comment...

ಮಂಗಳೂರು: ನೀರಿನ ಸಮಸ್ಯೆ ಬಗ್ಗೆ ಮಾತನಾಡಲೆಂದು ಪಂಚಾ ಯತ್ ಕಚೇರಿಗೆ ಬಂದಿದ್ದ ಯುವಕರಿಬ್ಬರು ಪಂಚಾಯತ್ ಸದಸ್ಯೆಯ ಜೊತೆ ಅನುಚಿತವಾಗಿ ವರ್ತಿಸಿ ಮಾನಭಂಗಕ್ಕೆ ಯತ್ನಿ ಸಿದ ಬಗ್ಗೆ ಕೋಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.
ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸ ಲಾಗಿದೆ.
ಅಂಬ್ಲಮೊಗರು ನಿವಾಸಿಗಳಾದ ಇಬ್ರಾಹಿಂ ಮತ್ತು ಲತೀಫ್ ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ. ಅಂಬ್ಲಮೊಗರು ಪರಿಸರದಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು ಇದನ್ನು ನಿವಾರಿಸುವಂತೆ ವಿನಂತಿಸಲು ಆರೋಪಿಗಳು ನಿನ್ನೆ ಮುಂಜಾನೆ ಪಂಚಾಯತ್ ಕಚೇರಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷರೊಂದಿಗೆ ಸದಸ್ಯೆ ಇಂದಿರಾ ಎಂಬವರು ಮಾತನಾಡುತ್ತಿದ್ದು ಇವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ರಟ್ಟೆ ಎಳೆದು ಮಾನಭಂಗಕ್ಕೆ ಯತ್ನಿಸಿದ್ದಾರೆಂದು ಇಂದಿರಾ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ನೀರಿನ ತಕರಾರೇ ಈ ಘಟನೆಗೆ ಕಾರಣ ಎಂದು ಇಂದಿರಾ ತಿಳಿಸಿದ್ದಾರೆ.
ನಿನ್ನೆ ರಾತ್ರಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನ್ಯಾಯಾಧೀಶರ ಮನೆಗೆ ಹಾಜರು ಪಡಿಸಿದ್ದಾರೆ.

ಸುಳ್ಳು ದೂರು: ಡಿಫಿ ಆರೋಪ
ಜನರ ಸಮಸ್ಯೆ ನೀಗಿಸಲು ಹೋರಾಟ ಮಾಡುವ ತಮ್ಮ ಸಂಘಟನೆಯ ಕಾರ್ಯಕರ್ತ ಇಬ್ರಾಹೀಂ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದೆ. ಎಂದು ಡಿವೈಎಫ್‌ಐ ಜಿಲ್ಲಾ ಅಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಇಬ್ರಾಹಿಂ ಅವರನ್ನು ಜೈಲಿಗೆ ಕಳುಹಿಸುವ ಉzಶದಿಂದಲೇ ರಾತ್ರಿ ವೇಳೆ ಬಂಧಿಸಿದ ಪೊಲೀಸರು ಠಾಣೆಗೂ ಕರೆತರದೆ ನೇರವಾಗಿ ನ್ಯಾಯಾಧೀರ ಮನೆಗೆ ಹಾಜರು ಪಡಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿಯೇ ಜಾಮೀನು ಪಡೆದು ಹೊರಗೆ ಬರುವುದನ್ನು ತಪ್ಪಿಸುವ ಉzಶದಿಂದ ಪೊಲೀಸರು ಈ ರೀತಿ ಮಾಡಿದ್ದಾರೆ ಎಂದು ಡಿವೈಎಫ್‌ಐ ಜಿಲ್ಲಾ ಅಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ. ಆಂಬ್ಲಮೊಗರು ಪರಿಸರದ ನೀರಿನ ಸಮಸ್ಯೆ ಉಲ್ಬಣವಾದಾಗ ನೀರು ಒದಗಿಸುವಂತೆ ಆಗ್ರಹಿಸಿ ಇಬ್ರಾಹೀಂ ಮತ್ತು ಸಂಘಟನೆ ಕಾರ್ಯಕರ್ತರು ಪಂಚಾಯತ್ ಕಚೇರಿಗೆ ಬೀಗ ಜಡಿದಿದ್ದರು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆದ ಭ್ರಷ್ಟಾಚಾರವನ್ನು ಬಯಲಿಗೆ ಎಳೆದಿದ್ದರು ಇದೆಲ್ಲದರ ಪೂರ್ವ ದ್ವೇಷದಿಂದಲೇ ಅವರ ಮೇಲೆ ಸುಳ್ಳು ದೂರು ದಾಖಲಾಗಿದ್ದು ನಮ್ಮ ಜನಪರ ಹೋರಾಟವನ್ನು ಮಟ್ಟಹಾಕಲೆಂದೇ ಈ ರೀತಿ ಮಾಡಲಾಗುತ್ತಿದೆ ಎಂದು ಮುನೀರ್ ಆರೋಪಿಸಿದ್ದಾರೆ.

ಸಬ್‌ಜೈಲ್‌ನಿಂದ ಖೈದಿಗಳ ಸ್ಥಳಾಂತರ

Posted by JAYAKIRANA Kirana on | 0 comments | Leave a comment...

ಮಂಗಳೂರು: ಮಾರಾಮಾರಿ ಪ್ರಕರಣದ ಹಿನ್ನೆಲೆಯಲ್ಲಿ ಸಬ್ ಜೈಲಿನಿಂದ ಒಂಬತ್ತು ಬಂದಿ ವಿಚಾರ ಣಾಧೀನ ಖೈದಿಗಳನ್ನು ಧಾರವಾಡ ಹಾಗೂ ಬಳ್ಳಾರಿ ಜೈಲಿಗೆ ಸ್ಥಳಾಂv ರಿಸಲಾಗಿದೆ.
ಮಂಗಳವಾರ ಬೆಳಗ್ಗೆ ಕಾರ್ಕಳದ ರೌಡಿ ಸುಲೈಮಾನ್ ಕೊಲೆ ಆರೋಪಿ ಗಳಾದ ಪ್ರವೀಣ್ ಕುಲಾಲ್, ವಿಶ್ವನಾಥ ಪೂಜಾರಿ, ಶಿವರಾಜ್, ಸೋಮನಾಥ ಯಾನೆ ಸೋಮು ಎಂಬವರು ನಗರದಲ್ಲಿ ನಡೆದಿದ್ದ ಟೆಕ್ಸ್‌ಟೈಲ್ ವ್ಯವಸ್ಥಾಪಕನ ಕೊಲೆ ಆರೋಪಿ ಅಬ್ದುಲ್ ಮಝರ್ ಮೇಲೆ ಹಲ್ಲೆ ನಡೆಸಿದ್ದರು. ಈ ಪ್ರಕರಣ ನಡೆದ ದಿನವೇ ರಾತ್ರಿ ಮಝರ್‌ಗೆ ಹಲ್ಲೆ ನಡೆಸಿದವರ ಮೇಲೆ ಮರು ದಾಳಿ ನಡೆದಿತ್ತು.
ಇದೇ ರೀತಿಯ ಮಾರಾಮಾರಿ ಮುಂದಿನ ದಿನಗಳಲ್ಲೂ ನಡೆಯುವ ಭೀತಿ ಜೈಲು ಸಿಬ್ಬಂದಿಯದ್ದಾಗಿತ್ತು.
ಇಂತಹ ಅನಾಹುತವನ್ನು ತಪ್ಪಿಸುವ ಹಿನ್ನೆಲೆಯಲ್ಲಿ ನಿನ್ನೆ ಉಮ್ಮರ್ ಫಾರೂಕ್, ಜಲಾಲು ದ್ದೀನ್ ಮತ್ತು ಮಹಮ್ಮದ್ ಫಾರೂಕ್ ಎಂಬವರನ್ನು ಧಾರವಾಡ ಜೈಲಿಗೂ, ಸಫ್ವಾನ್, ಸರ್ಫರಾಝ್, ಸಂಶುದ್ದೀನ್, ಅಬ್ದುಲ್ ಮಝರ್, ಮೊದ್ದೀನ್ ಮತ್ತು ಸರ್ಫುದ್ದೀನ್ ಎಂಬವರನ್ನು ಬಳ್ಳಾರಿ ಜೈಲಿಗೂ ಸ್ಥಳಾಂತರಿ ಸಲಾಗಿದೆ.

ಉಡುಪಿ: ಸ್ಫೋಟಕ ವಶ; ಆರೋಪಿ ಬಂಧನ

Posted by JAYAKIRANA Kirana on | 0 comments | Leave a comment...

ಉಡುಪಿ: ಯಾವುದೇ ಪರವಾ ನಿಗೆ ಇಲ್ಲದೆ ಅಕ್ರಮವಾಗಿ ಸ್ಪೋಟಕ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದ ಮಾರುತಿ ಓಮ್ನಿಯನ್ನು ಆರೋ ಪಿಯ ಸಹಿತ ಬ್ರಹ್ಮಾವರ ಠಾಣೆಯ ಪೊಲೀಸರು ಬುಧವಾರ ಮಧ್ಯಾಹ್ನ ಗಂಟೆ ೧೨.೩೦ ಕ್ಕೆ ಯಡ್ತಾಡಿ ಗ್ರಾಮದ ಜಂಬೂರು ಎಂಬಲ್ಲಿಂದ ವಶಕ್ಕೆ ತೆಗೆದುಕೊಂಡು ಮೊಕದ್ದಮೆ ದಾಖಲಿಸಿ ಕೊಂಡಿದ್ದಾರೆ.
 ಬಂಧಿತ ಆರೋಪಿಯನ್ನು ಶಿರಿಯಾರ ಗ್ರಾಮದ ನಿವಾಸಿ ಗಣೇಶ್ ಪ್ರಸಾದ್ ಬಂಗೇರ (೩೭) ಎಂದು ಗುರು ತಿಸಲಾಗಿದೆ. ಈತ ಸ್ಪೋಟಕ ವಸ್ತುಗ ಳನ್ನು ಗೋಣಿಚೀಲದಲ್ಲಿ ಮಾರುತಿ ಓಮ್ನಿಯಲ್ಲಿರಿಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ.೪೦೦ ರು. ಮೌಲ್ಯದ ೧೬ ತೋಟೆ, ೩೦ ರು. ಮೌಲ್ಯದ ೬ ಕೇಪು, ೧೦೦ ರು. ಮೌಲ್ಯದ ೧ ಕೆಜಿ ಮಸಿಯನ್ನು ಪೊಲೀಸರು ಆರೋಪಿಯಿಂದ ಸ್ವಾಧೀನಪಡಿಸಿ ಕೊಂಡಿದ್ದಾರೆ. ವಶಪಡಿಸಿಕೊಂಡ ಮಾರುತಿ ಓಮಿನಿಯ ಮೌಲ್ಯ ೭೫ ಸಾ. ರೂ. ಎಂದು ಅಂದಾಜಿಸಲಾಗಿದೆ.

ಲವ್‌ಲೆಟರ್ ಬರೆದಿಲ್ಲ: ಮುಖ್ಯಮಂತ್ರಿ

Posted by JAYAKIRANA Kirana on | 0 comments | Leave a comment...

ಸಚಿವರ ಆಟಾಟೋಪ ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತಂದಿದ್ದೇನೆ
ಬೆಂಗಳೂರು : ಯಡಿಯೂರಪ್ಪ ಬೆಂಬಲಿಗ ಸಚಿವರ ಆಟಾಟೋಪಗಳ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತಂದಿದ್ದೇನೆಯೇ ಹೊರತು ಲವ್‌ಲೆಟರ್ ಬರೆದಿಲ್ಲ ಎಂದು ಮುಖ್ಯ ಮಂತ್ರಿ ಸದಾನಂದಗೌಡ ಖಾರವಾಗಿ ನುಡಿದಿದ್ದಾರೆ.
ಸುದ್ದಿಗಾರರ ಜತೆ ಪ್ರತ್ಯೇಕವಾಗಿ ಮಾತನಾಡಿದ ಅವರು, ಮುಖ್ಯ ಮಂತ್ರಿಯಾಗಿ ರಾಜ್ಯ ಸರ್ಕಾರದ ಪ್ರಗತಿ ಹಾಗೂ ಪಕ್ಷದ ಕಾರ್ಯ ನಡ ವಳಿಕೆ ಹಾಗೂ ಸಚಿವರ ಕಾರ್ಯ ವೈಖರಿಯ ಬಗ್ಗೆ ಪ್ರತಿ ತಿಂಗಳು ಅಧ್ಯ ಕ್ಷರಿಗೆ ಪತ್ರ ಬರೆಯುವ ಸಂಪ್ರದಾ ಯವಿದೆ.
ನಾನೇನೂ ಕದ್ದು ಮುಚ್ಚಿ ಪತ್ರ ಬರೆದಿಲ್ಲ. ಅದೇನು ಪ್ರೇಮ ಪತ್ರವೂ ಅಲ್ಲ. ಕೆಲವು ಸಚಿವರ ನಡವಳಿಕೆಗಳ ಬಗ್ಗೆ ರಾಷ್ಟ್ರೀಯ ನಾಯಕರ ಗಮನಕ್ಕೆ ತಂದಿದ್ದೇನೆ. ನಾನೇನು ಯಾರಿಗೂ ಹೆದರಬೇಕಿಲ್ಲ, ಹೆದರುವುದೂ ಇಲ್ಲ. ಮಿಗಿಲಾಗಿ ಇದು ಹಳೆಯ ಪತ್ರ. ಮಾಧ್ಯಮಗಳಲ್ಲಿ ಬಹಿರಂಗಗೊಂಡಿದೆ.
ಪತ್ರ ಬರೆಯುವುದು ನನ್ನ ಹಕ್ಕು ಬರೆದಿದ್ದೇನೆ. ಪತ್ರ ಬಹಿರಂಗಗೊಂಡಿತು ಎಂದು ಯಡಿಯೂರಪ್ಪ ಅವರಾಗಲಿ ಅಥವಾ ಅವರ ಬೆಂಬಲಿಗರಿಗೆ ನಾನು ಹೆದರುವ ಪ್ರಶ್ನೆಯೇ ಇಲ್ಲ.
ನಮ್ಮದು ರಾಷ್ಟ್ರೀಯ ಪಕ್ಷ. ರಾಜ್ಯದ ಸ್ಥಿತಿಗತಿಗಳ ಬಗ್ಗೆ ಪ್ರತಿ ತಿಂಗಳು ವರದಿ ನೀಡಬೇಕಾದುದು ನಮ್ಮ ಪಕ್ಷದ ನಿಲುವು. ಅದನ್ನು ಮಾಡಿದ್ದೇನೆ. ಅವರ ನಡವಳಿಕೆ ಬಗ್ಗೆ ತಿಳಿಸಿದ್ದು ಅದು ಪಕ್ಷವಿರೋಧಿಯೋ ಅಲ್ಲವೋ ಎಂಬುದು ಹೈಕಮಾಂಡ್ ನಿರ್ಧರಿಸುತ್ತದೆ.
ಮಿಕ್ಕ ಊಹೋ ಪೋಹಗಳಿಗೆ ನಾನು ಉತ್ತರ ಕೊಡಲು ಹೋಗುವುದಿಲ್ಲ ಎಂದು ನೇರವಾಗಿಯೇ ಹೇಳಿದರು.
ಇದೇ ಸಂದರ್ಭದಲ್ಲಿ ತಮ್ಮ ಪತ್ರ ಒಕ್ಕಣಿಗೆ ಹೊಂದಿಕೊಂಡಂತೆ ಮಾತನಾಡಿದ ಮುಖ್ಯಮಂತ್ರಿಯವರು, ಇನ್ನು ಮುಂದೆ ಪ್ರತಿ ತಿಂಗಳು ಸಚಿವರು ತಮ್ಮ ಇಲಾಖಾ ಪ್ರಗತಿ ಪರಿಶೀಲನೆ ಕಡ್ಡಾಯಗೊಳಿಸುವುದಾಗಿ ಹೇಳಿದ್ದಾರೆ.
ಒಂದು ವೇಳೆ ಅವರು ಪ್ರಗತಿ ಪರಿಶೀಲನೆ ನಡೆಸದಿದ್ದರೆ ತಾವೇ ಆ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸುತ್ತೇನೆ. ಕಳೆದ ಎರಡು ದಿನಗಳಿಂದ ನನ್ನ ವ್ಯಾಪ್ತಿಯಡಿ ಬರುವ ೬ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ್ದೇನೆ. ಮುಂದೆ ಇತರೆ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಿದ್ದೆನೆ ಎಂದು ತಿಳಿಸಿದರು.
ತಾಲ್ಲೂಕು ಮಟ್ಟದಲ್ಲಿರುವ ಕಂದಾಯ ಸೇವೆಗಳನ್ನು ಹೋಬಳಿ ಮಟ್ಟಕ್ಕೂ ವಿಸ್ತರಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ತಾವು ನಿನ್ನೆ ಇಲಾಖಾ ಪ್ರಗತಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಗ್ರಾಮೀಣ ಜನತೆಯ ಅನುಕೂಲಕ್ಕಾಗಿ ಸೇವೆಗಳನ್ನು ಕೆಳಹಂತಕ್ಕೆ ತರುವ ಬಗ್ಗೆ ಪರಿಶೀಲನೆ ಮಾಡಿದ್ದೇವೆ ಎಂದರು.
ಭೂ ಪರಿವರ್ತನೆಗೆ ಅನುಕೂಲವಾಗುವಂತೆ ಕಂದಾಯ ಇಲಾಖೆಯ ೯೩ (ಸಿ) ಕಾಯ್ದೆಗೆ ತಿದ್ದುಪಡಿ ತರುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಸಕಲ ಯೋಜನೆಯನ್ನು ಸಚಿವಾಲಯದ ಕಾರ್ಯಾಲಯಕ್ಕೂ ವಿಸ್ತರಿಸುವುದಾಗಿ ತಿಳಿಸಿದ ಮುಖ್ಯಮಂತ್ರಿಯವರು ಯುವಕರಿಗೆ ಉದ್ಯೋಗ ಅವಕಾಶ ಮತ್ತು ಮತ್ತಿತರ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಯುವ ನೀತಿ ಜಾರಿಗೊಳಿಸುವುದಾಗಿ ಹೇಳಿದ್ದಾರೆ.
‘ಮುಖ್ಯಮಂತ್ರಿ ಬದಲಾಯಿಸಿ
ಯಡ್ಡಿ ಬೆಂಬಲಿಗರ ಒತ್ತಡ
ಬೆಂಗಳೂರು: ಮುಖ್ಯಮಂತ್ರಿ ಸದಾನಂದಗೌಡರನ್ನು ಬದಲಾವಣೆ ಮಾಡಿ, ಅವರ ಸ್ಥಾನಕ್ಕೆ ಮೂರನೇ ವ್ಯಕ್ತಿಯೊಬ್ಬರನ್ನು ಅಧಿಕಾರಕ್ಕೆ ತನ್ನಿ ಎಂಬ ಒತ್ತಡ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಬಲಿಗರಿಂದ ತೀವ್ರಗೊಂಡಿದೆ.
ಯಡಿಯೂರಪ್ಪ ಬೆಂಬಲಿಗ ಸಚಿವರು ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವುದಲ್ಲದೆ ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿ, ಸರ್ಕಾರ ಉರುಳಿಸುವ ಸಂಚು ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿಯವರು ಪಕ್ಷದ ವರಿಷ್ಠರಿಗೆ ಬರೆದ ಪತ್ರ ಬಹಿರಂಗಗೊಳ್ಳುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಚಟುವಟಿಕೆ ತೀವ್ರಗೊಂಡಿದೆ.
ಯಡಿಯೂರಪ್ಪ ಬೆಂಬಲಿಗ ಸಚಿವೆ ಶೋಭಾ ಕರಂದ್ಲಾಜೆ ವಿಧಾನ ಪರಿಷತ್ ಸದಸ್ಯರಾದ ಲೇಹರ್‌ಸಿಂಗ್ ಹಾಗೂ ಭಾರತಿಶೆಟ್ಟಿ ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿ ಗೌಡರ ಬದಲಾವಣೆಗೆ ಕಸರತ್ತು ನಡೆಸಿದ್ದಾರೆ.
ಈ ಮಧ್ಯೆ ಯಡಿಯೂರಪ್ಪ ತಮ್ಮ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳುವ ಉದ್ದೇಶದಿಂದ ಮೇ ೧೧ ರಂದು ತಮ್ಮ ಬೆಂಬಲಿಗ ಸಚಿವ, ಶಾಸಕರ ಸಭೆ ಕರೆದಿದ್ದಾರೆ. ದೆಹಲಿಯಲ್ಲಿ ಬಿಡಾರ ಹೂಡಿರುವ ಶೋಭಾ ಅವರು ನಿನ್ನೆ ರಾತ್ರಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತೀನ್ ಗಡ್ಕರಿ, ರಾಜ್ಯದ ಉಸ್ತುವಾರಿ ಹೊಣೆ ಹೊತ್ತ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿಯವರು ತಮ್ಮ ಆಪ್ತ ಕೂಟದ ಸಚಿವರ ಬಗ್ಗೆ ದೂರಿರುವುದಕ್ಕೆ ಸಮಜಾಯಿಷಿ ನೀಡಿದ್ದಾರೆ ಎನ್ನಲಾಗಿದೆ.
ಅಲ್ಲದೆ ಕರ್ನಾಟಕದಲ್ಲಿ ಬಿಜೆಪಿ ಸಂಘಟನೆ ಮತ್ತಷ್ಟು ಬಲಗೊಂಡು ಸರ್ಕಾರ ಉಳಿಯಬೇಕೆಂದರೆ ಸದಾನಂದಗೌಡರನ್ನು ಬದಲಾವಣೆ ಮಾಡಿ. ಇವರ ಸ್ಥಾನಕ್ಕೆ ಯಡಿಯೂರಪ್ಪವರನ್ನು ತರಲು ಸಾಧ್ಯವಾಗದಿದ್ದರೆ ಮೂರನೇ ಯಾವುದೇ ವ್ಯಕ್ತಿಯನ್ನು ನೇಮಕ ಮಾಡಿ. ಅದಕ್ಕೆ ನಮ್ಮ ಬೆಂಬಲವಿದೆ. ಯಡಿಯೂರಪ್ಪ ಅವರು ಕಾನೂನು ಹೋರಾಟದಲ್ಲಿ ಜಯಗಳಿಸಿದರೆ ಅವರನ್ನೇ ಮತ್ತೆ ಅಧಿಕಾರಕ್ಕೆ ತನ್ನಿ. ನಿಮಗೆ ಇದು ಸಾಧ್ಯವಾಗದಿದ್ದರೆ, ಪಕ್ಷದ ಮೂರನೇ ವ್ಯಕ್ತಿ ಮುಖ್ಯಮಂತ್ರಿಯಾಗಲೀ. ಇದಕ್ಕೆ ಯಡಿಯೂರಪ್ಪನವರ ಬೆಂಬಲವೂ ಇರುತ್ತದೆ. ಇದರಿಂದ ಒಂದು ವರ್ಷಗಳ ಕಾಲ ಉತ್ತಮ ಆಡಳಿತ ನೀಡಿ, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬಹುದೆಂದು ಮನವಿ ಮಾಡಿಕೊಂಡಿರುವ ಶೋಭಾ ಮತ್ತು ಸ್ನೇಹಿತರು ಸದಾನಂದಗೌಡರ ವಿರುದ್ಧ ಕೆಲವು ಆರೋಪಗಳ ಸರಮಾಲೆಯನ್ನು ವರಿಷ್ಠರ ಮುಂದಿಟ್ಟಿದ್ದಾರೆ.

ಐಎಸ್‌ಪಿಆರ್‌ಎಲ್ ಅಕ್ರಮ ಸರ್ವೆ: ಕುತ್ತೆತ್ತೂರು ಗ್ರಾಮಸ್ಥರಿಂದ ತಡೆ

Posted by JAYAKIRANA Kirana on | 0 comments | Leave a comment...

ಸುರತ್ಕಲ್: ಇಂಡಿಯನ್ ಸ್ಟ್ರಾಟ ಜಿಕ್ ಪೆಟ್ರೋಪಲಿಯಂ ರಿಸರ‍್ವ್ಸ್ ಲಿಮಿ ಟೆಡ್ (ಐಎಸ್‌ಪಿಆರ್‌ಎಲ್) ಗೆ ಸಂಬಂಧಪಟ್ಟಂತೆ ತೋಕೂರು - ಪಾದೂರು ಪೈಪ್‌ಲೈನ್ ಅಳವಡಿಸು ವುದಕ್ಕಾಗಿ ನಡೆಸಲಾಗುತ್ತಿದ್ದ ಸರ್ವೆ ಕಾರ್ಯವನ್ನು ಕುತ್ತೆತ್ತೂರಿನ ಕೇಂಞ ಬಳಿ ಗ್ರಾಮಸ್ಥರು ತಡೆದು ಸರ್ವೆಗಾಗಿ ಬಂದ ಸಿಬ್ಬಂದಿಗಳನ್ನು ಹಿಂದಕ್ಕೆ ಕಳುಹಿಸಿದ ಘಟನೆ ನಡೆದಿದೆ.
ಪೈಪ್‌ಲೈನ್ ಯೋಜನೆ ಬಗ್ಗೆ ಕುತ್ತೆತ್ತೂರು ಗ್ರಾಮಸ್ಥರಿಗೆ ಈ ಹಿಂದೆ ನೋಟೀಸು ನೀಡಲಾಗಿದ್ದು, ಇದಕ್ಕೆ ಕುತ್ತೆತ್ತೂರು ಸೇರಿದಂತೆ ಇತರ ಗ್ರಾಮದ ರೈತರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಿದ್ದರು. ಸರಿಯಾದ ಮಾಹಿತಿ ನೀಡದೇ ಇರುವುದು, ವಶಪಡಿಸಿಕೊಳ್ಳಲಾಗುವ ಭೂಮಿಗೆ ಮಾರುಕಟ್ಟೆ ಬೆಲೆಯ ಕೇವಲ ಶೇಕಡಾ ಹತ್ತರಷ್ಟು ಪರಿಹಾರ ನೀಡುವ ಬಗ್ಗೆ ಮತ್ತು ನೋಟೀಸಿನಲ್ಲಿ ತಿಳಿಸಲಾದ ಹಲವಾರು ವಿಷಯಗಳ ಬಗ್ಗೆ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ಈ ಆಕ್ಷೇಪಣೆಗಳ ವಿಚಾರವಾಗಿ ರೈತರೊಂದಿಗೆ ಯಾವುದೇ ಚರ್ಚೆಯನ್ನು ಮಾಡದೆ ಏಕಾಏಕಿಯಾಗಿ ಜಮೀನಿಗೆ ನುಗ್ಗಿ ಸರ್ವೆ ಮಾಡುವ ಕ್ರಮವನ್ನು ಗ್ರಾಮಸ್ಥರು ಪ್ರತಿಭಟಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳದಲ್ಲಿ ಹಾಜರಿದ್ದ ಪೆರ್ಮುದೆ ಗ್ರಾಮ ಪಂಚಾಯತ್ ಸದಸ್ಯ ಶ್ರೀಧರ ಶೆಟ್ಟಿಯವರು ಪಂಚಾಯತ್ ಮತ್ತು ಗ್ರಾಮಸ್ಥರಿಗೆ ಯಾವುದೇ ರೀತಿಯ ಸೂಚನೆ ನೀಡದೆ ಕಳ್ಳಮಾರ್ಗದಲ್ಲಿ ಸರ್ವೆ ಕಾರ್ಯ ನಡೆಸುವುದು ಸರಿಯಲ್ಲ. ಇನ್ನು ಮುಂದೆ ಇಂತಹಾ ಅಕ್ರಮ ಸರ್ವೆ ನಡೆಯುವುದು ಕಂಡು ಬಂದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಮೂಲ್ಕಿ: ವಸತಿ ಸಂಕೀರ್ಣ ಮಾಲಕರ ವಿರುದ್ಧ ದೂರು

Posted by JAYAKIRANA Kirana on | 0 comments | Leave a comment...


ಪಡುಬಿದ್ರಿ: ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿರುವ ಬೃಹತ್ ವಸತಿ ಸಂಕೀರ್ಣಗಳಲ್ಲಿ ಒಂದಾದ ಸಪ್ತಗಿರಿ ವಾಣಿಜ್ಯ ಸಂಕೀರ್ಣದ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ವಸತಿಗೃಹ ಮಾಲೀಕರ ಸಂಘದ ವತಿಯಿಂದ ಮುಲ್ಕಿ ಪೊಲೀಸ್ ಠಾಣೆ, ಮುಲ್ಕಿ ನಗರ ಪಂಚಾಯತ್, ಮತ್ತು ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರಗಳಿಗೆ ದೂರು ನೀಡಲಾಗಿದೆ.
ಮುಲ್ಕಿ ವೃತ್ತ ನಿರೀಕ್ಷಕ ಬಶೀರ್ ಅಹ್ಮದ್‌ರವರು ಸಪ್ತಗಿರಿ ಮಾಲೀಕರನ್ನು ಠಾಣೆಗೆ ಕರೆಸಿ ಸಮಸ್ಯೆ ಪರಿಹಾರದ ಲಿಖಿತ ಹೇಳಿಕೆ ಪಡೆದುಕೊಂಡಿದ್ದಾರೆ.
ಸಪ್ತಗಿರಿ ವಸತಿ ಸಂಕೀರ್ಣ ಸಮುಚ್ಛಯದಲ್ಲಿ ಮೂರು ಬೃಹತ್ ವಸತಿ ಸಮುಚ್ಛಯಗಳಿದ್ದು, ಮೊದಲ ವಸತಿ ಸಂಕೀರ್ಣದೊಳಗೆ ವಾಣಿಜ್ಯ ಸಂಕೀರ್ಣ ವೊಂದಿದೆ. ಉಳಿದೆರಡು ವಸತಿ ಸಂಕೀರ್ಣ ನಿರ್ಮಾಣ ಹಂತದಲ್ಲಿದ್ದು, ಅಲ್ಲಿ ಕೆಲಸ ಮಾಡುವ ಹೊರರಾಜ್ಯದ ೫೦೦ಕ್ಕೂ ಅಧಿಕ ಕಾರ್ಮಿಕರು ವಾಣಿಜ್ಯ ಸಂಕೀರ್ಣದಲ್ಲಿ ನೆಲೆಸಿದ್ದು, ಅವರು ಸುತ್ತಮುತ್ತಲಿನ ಪ್ರದೇಶದಲ್ಲಿ ಗಲೀಜು ಮಾಡಿರುವುದರಿಂದ ಮಲೇರಿಯಾ, ಡೆಂಗ್ಯೂ ಸಹಿತ ಅನೇಕ ಸಾಂಕ್ರಾಮಿಕ ರೋಗಗಳು ಸಪ್ತಗಿರಿ ಮೊದಲನೇ ವಸತಿ ಸಂಕೀರ್ಣದ ಮಂದಿಗೆ ಬಾಧಿಸುತ್ತಿದೆ. ಈ ಬಗ್ಗೆ ಹಲವು ಬಾರಿ ಮಾಲೀಕರಿಗೆ ಮನವಿ ಮಾಡಿದ್ದರೂ ಸ್ಪಂದಿಸಲಿಲ್ಲ ಎಂಬ ಆರೋಪ ನಿವಾಸಿಗಳದ್ದಾಗಿದೆ. ಸಮಸ್ಯೆ ಶೀಘ್ರ ಪರಿಹಾರವಾಗದಿದ್ದಲ್ಲಿ ಮಂಗಳೂರು ಜಿಲ್ಲಾಧಿಕಾರಿ ಕಛೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದ್ದು, ಮುಲ್ಕಿ ಪೊಲೀಸ್ ಠಾಣೆಯಲ್ಲಿ ಸಂಕೀರ್ಣದ ಮಾಲೀಕರು ಲಿಖಿತ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಮೆರವಣಿಗೆ ನಿರ್ಧಾರ ಕೈಬಿಡಲಾಗಿ ದೆಯೆಂದು ತಿಳಿದುಬಂದಿದೆ. ವಸತಿ ಸಮುಚ್ಛಯ ಸಂಘದ ಅಧ್ಯಕ್ಷ ಸದಾನಂದ ಕೋಟ್ಯಾನ್, ಸಂಘದ ಕಾರ್ಯದರ್ಶಿ ಕೆ.ಎಂ. ಕೋಟ್ಯಾನ್, ಕೋಶಾಧಿಕಾರಿ ಸುಂದರ ಪೂಜಾರಿ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬೇಡಿಕೆಗೆ ಸ್ಪಂದನೆ: ಕಾರ್ಮಿಕ ಸಂಘದ ಉಪವಾಸ ಅಂತ್ಯ

Posted by JAYAKIRANA Kirana on | 0 comments | Leave a comment...

ಮಂಗಳೂರು : ಇಎಸ್‌ಐ ಆಸ್ಪತ್ರೆಗೆ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಅಖಿಲ ಭಾರತ ಕಾರ್ಮಿಕರ ಸಂಘ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಕೊನೆಗೂ ಅಂತ್ಯ ಕಂಡಿದೆ. ಇಎಸ್‌ಐ ಆಸ್ಪತ್ರೆಯ ರಾಜ್ಯ ನಿರ್ದೇಶಕ ಡಾ.ರೆಹಮುನ್ನಿಸಾ ಕಾರ್ಮಿಕ ಸಂಘದ ಬೇಡಿಕೆಗೆ ಸ್ಪಂದಿಸುವ ಬಗ್ಗೆ ಲಿಖಿತವಾಗಿ ಸೂಚಿಸಿರುವ ಕಾರಣ ಉಪವಾಸ ಸತ್ಯಾ ಗ್ರಹವನ್ನು ಹಿಂದೆಗೆದುಕೊಳ್ಳಲಾಗಿದೆ.
ಜಿಲ್ಲಾ ಇಎಸ್‌ಐ ಆಸ್ಪತ್ರೆಯಲ್ಲಿ ಸೌಲಭ್ಯದ ಕೊರತೆಯಿಂದಾಗಿ ಬಡ ಕಾರ್ಮಿಕರು ತೀರಾ ತೊಂದರೆಯನ್ನು ಅನುಭವಿಸುತ್ತಿದ್ದು, ಸೌಲಭ್ಯ ಸುಧಾರಿ ಸುವ ಬಗ್ಗೆ ಅಧಿಕಾರಿಗಳು ಎರಡು ವರುಷದಿಂದ ನೀಡುತ್ತಾ ಬಂದಿದ್ದ ಭರವಸೆ ಮರಿಚಿಕೆಯಾಗಿಯೇ ಉಳಿ ದಿತ್ತು. ಹೀಗಾಗಿ ಕಾರ್ಮಿಕ ಸಂಘ ಉಗ್ರ ಪ್ರತಿಭಟನೆಯ ಹಾದಿ ಹಿಡಿದಿದ್ದತ್ತು ಕಾರ್ಮಿಕರ ದಿನಾಚರಣೆಯ ಮರುದಿನವೇ ಕಾರ್ಮಿಕರ ಹಕ್ಕಿಗಾಗಿ ಕಾರ್ಮಿಕರ ಸಂಘ ಉಪವಾಸ ಕುಳಿತ್ತಿತ್ತು. ಎಂಟು ದಿನದಿಂದ ಇವರ ಉಪವಾಸದ ಬಗ್ಗೆ ಅಧಿಕಾರಿಗಳೂ, ಜಿಲ್ಲಾಡಳಿತವೂ ಯಾವುದೇ ಬೆಲೆ ನೀಡಿರಲಿಲ್ಲ. ಹೀಗಿದ್ದರೂ ಕಾರ್ಮಿಕರ ಸಂಘ ಪಟ್ಟು ಬಿಡದ ಕಾರಣ ಕೊನೆಗೂ ಇಎಸ್‌ಐ ಶರಣಾಗಿದ್ದು, ಆಸ್ಪತ್ರೆಯ ರಾಜ್ಯ ನಿರ್ದೇಶಕ ಡಾ.ರೆಹಮುನ್ನಿಸಾ ಕಾರ್ಮಿಕ ಸಂಘದ ಬೇಡಿಕೆಗೆ ತಾವು ಸ್ಪಂದನ ನೀಡು ವುದಾಗಿ ಲಿಖಿತವಾಗಿ ಭರವಸೆ ನೀಡಿದ ಬಳಿಕ, ಉಪವಾಸ ನಿರತರು ಸಿಯಾಳ ಸೇವಿಸಿ ಪ್ರತಿಭಟನೆ ಕೊನೆಗೊ ಳಿಸಿದರು.

Page 1

Posted by JAYAKIRANA Kirana on | 0 comments | Leave a comment...

Page 2

Posted by JAYAKIRANA Kirana on | 0 comments | Leave a comment...

Page 3

Posted by JAYAKIRANA Kirana on | 0 comments | Leave a comment...

Page 4

Posted by JAYAKIRANA Kirana on | 0 comments | Leave a comment...

Page 5

Posted by JAYAKIRANA Kirana on | 0 comments | Leave a comment...

Page 6

Posted by JAYAKIRANA Kirana on | 0 comments | Leave a comment...

Subscription

You can subscribe by e-mail to receive news updates and breaking stories.

Most Popular

Tag Cloud

Recent News

Archives

Labels

108 (1) abhayachandra (1) abvp (4) accident (17) allpages (1) ambedkar (2) ananthkumar (1) angara (1) auto (6) babuamin (9) bahiranga (200) bajaranga (6) bajpe (7) bala (2) banglore (3) banta (1) bantawal (2) bantwal (83) beedi (3) bellikirana (1) belthangady (88) belthangadysoujanya (1) bengalore (2) bettampady (3) bhav (1) bhavishya (58) bidadi (1) bidari (2) bjp (18) bondalajagannathshetty (1) bridge (4) briefs (373) bsnl (1) bundh (7) burkha (2) bus (1) bvsee (1) campco (2) cbi (1) chandrashekaran (1) chandregowda (1) chavadi (169) chengappa (1) church (1) cinema (2) citu (1) cmibrahim (1) cn (1) cnews (4067) cnnews (89) college (2) congress (6) corruption (1) cpim (1) ctravi (4) dalit (1) death (44) deepikadeath (1) devaloka (1) devegowda (1) dever (1) dhananjaya (1) dhanraj (1) dharmabrashta (11) dk (1458) donation (1) dvs (21) election (1) encounter (1) epaper (2514) epapr (2) escape (2) eshwarappa (6) facebook (1) fariyad (8) fea (1) feature (2297) fire (8) found (1) gadkari (1) gallery (177) galley (2) gas (3) goldsmith (1) gopalbhandary (1) govindarao (1) gupta (175) gurupura (1) hajabba (1) haladi (2) haripriya (1) hebri (3) help (38) inews (77) ivan (1) jabbar (1) jayaprakash (6) jds (4) jerald (1) jkimpact (1) jshantha (1) kadaba (1) kageri (1) kalakirana (10) kalam (1) kambula (10) kapu (2) karachi (1) karkala (150) kasagod (2) kasapa (4) kasaragod (111) katariveera (3) kaup (24) kaveri (1) kfd (1) kgod (108) kinnigoli (2) kodihalli (1) kota (1) ksrtc (1) kumaraswamy (1) kundapura (92) kyandi (1) lekhana (262) ln (1) lnews (3688) lokayukta (3) madikeri (1) maleria (1) mangalore (593) mangaloreairport (1) manglore (7) manipal (30) manjeshwara (29) marriage (3) masjid (1) mcc (13) mcnanaiah (1) mescom (1) mghegde (2) mising (3) missing (152) mlore (712) moodabidri (58) movie (2) mulki (54) murder (4) mutalik (2) muttappa (1) muttulaxmi (1) nagarajshetty (2) nalin (1) naxal (10) nhrc (1) nim (7) nimm (2) nimminda (1002) nirani (1) nithyananda (11) nitish (1) nnews (419) omega (1) oscar (4) overdose (15) padilhomestay (32) padubidri (59) palemar (3) parishat (1) pattabhi (1) pejawar (1) petrol (8) photogallery (11) police (1) politics (1) ponnuraj (1) poojary (8) power (2) pratapreddy (1) premakirana (25) protest (7) puc (3) pucl (1) puttur (274) quake (1) raghupathi (1) rahulgandhi (1) rain (7) ramanatharai (2) ramasene (1) rambhat (1) ramdas (2) ramulu (2) rashok (1) ratfever (2) ravibelegere (3) reddy (3) revparty (2) rkdinachari (11) road (8) rto (1) sampangi (2) santhoshhegde (2) scarf (1) school (4) scolumn (8) sez (3) shakuntala (2) sharan (1) shashikala (1) shettar (3) shirva (7) shobha (3) siddaganga (1) siddu (4) smez (1) sms (21) snews (805) srinivaspoojary (1) srinivasshetty (1) sslc (2) suicide (2) sulia (4) sullia (208) sunilkumar (1) surathkal (13) sureshkumar (2) suzlon (1) tanker (1) teacher (1) thackeray (1) tn (1) tnews (953) tpchandrashekaran (1) traffic (1) train (1) udu (1) udupi (486) udyoga (60) ullal (7) upcl (2) upi (152) uppinangadi (49) utkhader (7) vaarakkondu (2) varakkondu (5) varantya (31) vartamana (1) venkatachalaiah (1) vijayakumarshetty (1) vinuthashetty (1) vishleshane (50) vitla (9) vittala (6) vittla (131) water (4) wenlock (2) yeddi (53) yogishbhat (1)